'ಬೆಳಗಾವಿ ಜಿಲ್ಲೆಯಲ್ಲಿ ಸದ್ಯ ಪ್ರವಾಹ ಭೀತಿ ಇಲ್ಲ'

By Kannadaprabha NewsFirst Published Jul 22, 2021, 12:57 PM IST
Highlights

* ಕೆಲ ತಿಂಗಳಿಗಿಂದ ಶೇ.24ರಷ್ಟು ಮಳೆ ಪ್ರಮಾಣ ಕಡಿಮೆ: ಡಿಸಿ
* ಕೊರೋನಾ ತಡೆಗೆ ಜಿಲ್ಲೆಯ 34 ಗಡಿಗಳಲ್ಲಿ ಕೋವಿಡ್‌ ಚೆಕ್‌ಪೋಸ್ಟ್‌ ನಿರ್ಮಾಣ
* ದೇವಸ್ಥಾನಗಳಲ್ಲಿ ಜನರು ಸೇರಿದಂತೆ ಭಕ್ತರ ದರ್ಶನಕ್ಕೆ ನಿಷೇಧ 
 

ಬೆಳಗಾವಿ(ಜು.22): ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಜುಲೈನಲ್ಲಿ ಶೇ.24ರಷ್ಟು ಪ್ರಮಾಣ ಕಡಿಮೆ ಆಗಿದೆ. ಆದ್ದರಿಂದ ಜಿಲ್ಲೆಯಲ್ಲಿ ನೆರೆ ಹಾವಳಿ ಅಪಾಯವಿಲ್ಲ. ಯಾವ ನದಿಗಳೂ ಅಪಾಯದ ಮಟ್ಟದಲ್ಲಿ ಹರಿಯುತ್ತಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದ್ದಾರೆ.

ನಗರದಲ್ಲಿರುವ ಸಿಎಂ ಜತೆಗೆ ಮಂಗಳವಾರ ವಿಡಿಯೋ ಕಾನ್ಸ್‌ರೆನ್ಸ್‌ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಸಿಎಂ ಸಭೆಯಲ್ಲಿ ಮಳೆಯ ಪರಿಸ್ಥಿತಿ, ನೆರೆ ಹಾವಳಿ ಹಾಗೂ ಕೋವಿಡ್‌ ಸ್ಥಿತಿಗತಿಗಳ ಕುರಿತು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಏನಾದರೂ ಸಮಸ್ಯೆಗಳಿದ್ದರೆ ತಿಳಿಸುವಂತೆ ಹೇಳಿದ್ದಾರೆ. ಅಲ್ಲದೇ ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳ ಕುರಿತು ಸಭೆಯಲ್ಲಿ ಮಾಹಿತಿ ಪಡೆದರು ಎಂದರು.

ಬೆಳಗಾವಿ: ಗೋಕಾಕ ಫಾಲ್ಸ್‌ ವೀಕ್ಷಣೆಗೆ ಮತ್ತೆ ಬ್ರೇಕ್‌..!

ಜಿಲ್ಲೆಗೆ ಭೀತಿ ಸೃಷ್ಟಿಸುವ ಕೋಯ್ನಾ ಡ್ಯಾಮ್‌ನಲ್ಲಿ 54 ಟಿಎಂಸಿ ನೀರು ಸಂಗ್ರಹವಿದೆ. 105 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯವಿದೆ. ಮಹಾರಾಷ್ಟ್ರದವರು 75 ಟಿಎಂಸಿ ನೀರು ಭರ್ತಿ ಆಗುವವರೆಗೂ ನೀರು ಬಿಡುಗಡೆ ಮಾಡುವುದಿಲ್ಲ. ಹೀಗಾಗಿ, ಜಿಲ್ಲೆಗೆ ಸದ್ಯಕ್ಕೆ ನೆರೆ ಹಾವಳಿ ಭಯ ಇಲ್ಲ. ಆದರೂ ಸಂಬಂಧಿಸಿದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಇನ್ನು, ಕೊರೋನಾ ತಡೆಗೆ ಜಿಲ್ಲೆಯ 34 ಗಡಿಗಳಲ್ಲಿ ಕೋವಿಡ್‌ ಚೆಕ್‌ಪೋಸ್ಟ್‌ ನಿರ್ಮಿಸಲಾಗಿದೆ. ಕೊರೋನಾ ನೆಗೆಟಿವ್‌ ವರದಿ ಕಡ್ಡಾಯ ಮಾಡಲಾಗಿದೆ. ಇದರ ಜತೆಗೆ ಸವದತ್ತಿ ದೇವಸ್ಥಾನ ಸೇರಿದಂತೆ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಜನರು ಸೇರಿದಂತೆ ಭಕ್ತರ ದರ್ಶನಕ್ಕೆ ನಿಷೇಧ ಹೇರಲಾಗಿದೆ. ಅಲ್ಲದೆ ಪ್ರಮುಖ ಪ್ರವಾಸಿ ತಾಣಗಳಿಗೂ ನಿರ್ಬಂಧ ಹೇರುವ ಮೂಲಕ ಕೊರೋನಾ ತಡೆಗೆ ಕ್ರಮಕೈಗೊಳ್ಳಲಾಗಿದೆ ಎಂದರು.
 

click me!