ಥೈವಾನ್‌ ರೆಡ್‌ ಲೇಡಿ ಪಪ್ಪಾಯಿ ಕೇಳೋರಿಲ್ಲ, 30 ಟನ್‌ ಫಸಲು ನಷ್ಟ

By Kannadaprabha NewsFirst Published Apr 22, 2020, 8:25 AM IST
Highlights

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು ಪೈವಳಿಕೆಯ ನಿವಾಸಿ, ಕನ್ನಡಿಗ ಅಡ್ಕತಿಮಾರು ಗೋಪಾಲಕೃಷ್ಣ ಭಟ್‌ ತಾವು ಬೆಳೆದ ಪಪ್ಪಾಯಿಗೆ ಬೆಲೆ ದೊರಕದೆ ಈ ತನಕ ಸುಮಾರು 10 ಲಕ್ಷ ರು. ಮೌಲ್ಯದ 30 ಟನ್‌ ಫಸಲು ಕಳೆದುಕೊಂಡಿದ್ದಾರೆ.ಈ ನಡುವೆ ಉಪ್ಪಳ, ಮಂಜೇಶ್ವರ ಭಾಗದ ಪೊಲೀಸರು, ಅಧಿಕಾರಿಗಳ ಸಹಿತ ಕೊರೋನಾ ವಾರಿಯರ್ಸ್‌ಗೆ ಸುಮಾರು 10 ಕ್ವಿಂಟಾಲ್‌ನಷ್ಟುಪಪ್ಪಾಯಿ ಹಣ್ಣುಗಳನ್ನು ಉಚಿತವಾಗಿ ವಿತರಿಸಿದ್ದಾರೆ.

ಮಂಗಳೂರು(ಏ.22): ಗಡಿನಾಡು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು ಪೈವಳಿಕೆಯ ನಿವಾಸಿ, ಕನ್ನಡಿಗ ಅಡ್ಕತಿಮಾರು ಗೋಪಾಲಕೃಷ್ಣ ಭಟ್‌ ಲಾಕ್‌ಡೌನ್‌ ಪರಿಸ್ಥಿತಿಯಿಂದಾಗಿ ಬೆಳೆಗೆ ಬೆಲೆ ಕಳೆದುಕೊಂಡು ತಾವು ಬೆಳೆದ ಲಕ್ಷಾಂತರ ರು.ಮೌಲ್ಯದ ಥೈವಾನ್‌ ರೆಡ್‌ ಲೇಡಿ ಪಪ್ಪಾಯಿ ಬೆಳೆಗೆ ನೀರುಣಿಸುವುದನ್ನೇ ನಿಲ್ಲಿಸಿದ್ದಾರೆ. ಆತಂಕಕ್ಕೀಡಾಗಿದ್ದಾರೆ.

ಅವರಿಗೆ ಲಾಕ್‌ಡೌನ್‌ ಅವಧಿಯಲ್ಲಿ ಪಪ್ಪಾಯಿ ಸಾಗಾಟ ಸಮಸ್ಯೆಯಿಲ್ಲ, ಪೊಲೀಸರ ಕಿರಿಕಿರಿಯೂ ಇಲ್ಲ. ಆದರೆ ಸರಾಸರಿ ಕೆ.ಜಿ.ಗೆ 32 ರು.ಗೆ ಮಾರಾಟವಾಗುತ್ತಿದ್ದ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ವರ್ತಕರು 15 ರು.ಗಳಿಗಿಂತ ಜಾಸ್ತಿ ನೀಡಲು ಸಿದ್ಧರಿಲ್ಲವಂತೆ. ಸರಿಯಾಗಿ ಹಣವೂ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಕೇರಳ ಕೃಷಿ ಇಲಾಖೆಯವರಿಗೆ ಮಾಡಿದ ಮನವಿಗಳಿಗೆ ಬೆಲೆಯೇ ಇಲ್ಲ ಎನ್ನುತ್ತಾರೆ ಅವರು.

ಕೇರಳ ಸರ್ಕಾರದ ನಡೆ ಉಳಿದ ರಾಜ್ಯ ಸರ್ಕಾರಗಳಿಗೆ ಆಗಲಿ ಮಾದರಿ

ಸಮೀಪದ ಪೈವಳಿಕೆ, ಮಂಜೇಶ್ವರ, ಸೀತಾಂಗೋಳಿ, ಬಂದ್ಯೋಡು ಮತ್ತಿತರ ಕಡೆಗಳಿಗೆ ಲೈನ್‌ ಸೇಲ್‌ ಮಾಡಿ ಅವರೇ ಹಣ್ಣುಗಳನ್ನು ಅಂಗಡಿಗಳಿಗೆ ಪೂರೈಸುತ್ತಿದ್ದರು. ಆದರೆ ಇತ್ತೀಚೆಗೆ ಬೆಳೆ ಮಾರಾಟಕ್ಕೆ ತಾನು ಕೃಷಿ ಭವನವನ್ನು ಸಂಪರ್ಕಿಸಿದಾಗ, ಪೈವಳಿಕೆ ಕೃಷಿ ಇಲಾಖೆ ಅಧಿಕಾರಿಗಳೇ ‘ಪಪ್ಪಾಯಿಗೆ ರೇಟಿಲ್ಲ, ಕೆ.ಜಿ.ಗೆ 15 ರು. ಮಾತ್ರ ಬೆಲೆ’ ಎಂದು ತಪ್ಪು ಮಾಹಿತಿ ಹರಡಿದ್ದರಿಂದಲೇ ತನಗೆ ಬೆಲೆ ದೊರಕುತ್ತಿಲ್ಲ, ಸುಮಾರು 1700 ಪಪ್ಪಾಯಿ ಹಣ್ಣುಗಳು ಮಾರುಕಟ್ಟೆಯಿಲ್ಲದೆ ಹಾಳಾಗುತ್ತಿದೆ, ಇದಕ್ಕೆ ಕೃಷಿ ಇಲಾಖೆ ತಪ್ಪು ಮಾಹಿತಿ ಕಾರಣ ಎಂದು ಅವರು ನೇರವಾಗಿ ಆರೋಪಿಸುತ್ತಾರೆ.

30 ಟನ್‌ ನಷ್ಟ:

ಬೆಲೆ ದೊರಕದೆ ಅವರು ಈ ತನಕ ಸುಮಾರು 10 ಲಕ್ಷ ರು. ಮೌಲ್ಯದ 30 ಟನ್‌ ಫಸಲು ಕಳೆದುಕೊಂಡಿದ್ದಾರೆ.ಈ ನಡುವೆ ಉಪ್ಪಳ, ಮಂಜೇಶ್ವರ ಭಾಗದ ಪೊಲೀಸರು, ಅಧಿಕಾರಿಗಳ ಸಹಿತ ಕೊರೋನಾ ವಾರಿಯರ್ಸ್‌ಗೆ ಸುಮಾರು 10 ಕ್ವಿಂಟಾಲ್‌ನಷ್ಟುಪಪ್ಪಾಯಿ ಹಣ್ಣುಗಳನ್ನು ಉಚಿತವಾಗಿ ವಿತರಿಸಿದ್ದಾರೆ.

ಫೇಸ್‌ಬುಕ್ ನೋಡಿ 14 ಸಾವಿರ ಕೆಜಿ ಕುಂಬಳ ಖರೀದಿಗೆ ಮುಂದಾದ ಸರ್ಕಾರ

ಸಮಸ್ಯೆ ಕುರಿತು ಕೃಷಿ ಭವನ ಹಾಗೂ ಸ್ವತಃ ಕೃಷಿ ಸಚಿವರ ಆಪ್ತ ಸಹಾಯಕರಿಗೆ ಸಂದೇಶ ಕಳುಹಿಸಿದರೂ ಖರೀದಿಗೆ ವ್ಯವಸ್ಥೆ ಆಗಿಲ್ಲ. ಆಸಕ್ತ ಖರೀದಿದಾರರು ಬಂದರೆ ತಾನು ಮನೆಯಿಂದಲೇ ಕೆ.ಜಿ.ಗೆ 25-28 ರು.ಗೆ ಮಾರಲು ಸಿದ್ಧ ಎನ್ನುತ್ತಾರೆ. ಕೃಷಿ ಬೆಳೆಗಾರರ ವಾಟ್ಸಪ್‌ ಬಳಗಗಳಲ್ಲಿ ಸಂಪರ್ಕ ಸಂಖ್ಯೆ ಸಹಿತ ಸಮಸ್ಯೆ ಕುರಿತು ಸಂದೇಶ ಪ್ರಸಾರ ಮಾಡಲಾಗಿದೆ. ಸುಮಾರು 4-5 ಕ್ವಿಂಟಲ್‌ ಫಸಲು ಮಾರಾಟಕ್ಕೆ ಸಿದ್ಧವಿದೆ. ಸಂಪರ್ಕ ಸಂಖ್ಯೆ: 04998 205330. 09400745330.

-ಕೃಷ್ಣಮೋಹನ ತಲೆಂಗಳ

click me!