ಲಾಕ್‌ಡೌನ್‌ ಸಡಿಲಿಕೆ: KSRTCಯಿಂದ ರಾತ್ರಿ ಬಸ್‌ ಕಾರ್ಯಾಚರಣೆ ಪ್ರಾರಂಭ

By Kannadaprabha NewsFirst Published Jun 4, 2020, 10:13 AM IST
Highlights

ಲಾಕ್‌ಡೌನ್‌ ಸಡಿಲಿಸಿ, ಅಂತರ್‌ರಾಜ್ಯ ಹಾಗೂ ಕಂಟೈನ್‌ಮೆಂಟ್‌ ವಲಯಗಳನ್ನು ಹೊರತುಪಡಿಸಿ ಮೇ 19ರಿಂದ ಪ್ರಮುಖ ಸ್ಥಳಗಳಿಗೆ ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಬಸ್‌ ಸಂಚಾರ ಆರಂಭ| ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಒಂದು ವಾಹನದಲ್ಲಿ ಎಸ್‌ಒಪಿ ಪ್ರಕಾರ 30 ಆಸನಗಳಿಗೆ ಸೀಮಿತಗೊಳಿಸಿ, ಸಾರಿಗೆ ಕಾರ್ಯಾಚರಣೆ ಪ್ರಾರಂಭ|

ಹೊಸಪೇಟೆ(ಜೂ.04): ರಾತ್ರಿ ಸಾರಿಗೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಹೊಸಪೇಟೆಯ ಈಕರಸಾ ಸಂಸ್ಥೆ ವಿಭಾಗೀಯ ನಿಯಂತ್ರಣಾ​ಧಿಕಾರಿ ಜಿ. ಶೀನಯ್ಯ ತಿಳಿಸಿದ್ದಾರೆ.

ಕೋವಿಡ್‌-19 ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಲಾಕ್‌ಡೌನ್‌ ಆದೇಶದಂತೆ ಸಾರಿಗೆ ಕಾರ್ಯಾಚರಣೆಯನ್ನು ಮಾರ್ಚ್‌ 24ರಿಂದ ಮೇ 18ರ ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಲಾಕ್‌ಡೌನ್‌ ಸಡಿಲಿಸಿ, ಅಂತರ್‌ರಾಜ್ಯ ಹಾಗೂ ಕಂಟೈನ್‌ಮೆಂಟ್‌ ವಲಯಗಳನ್ನು ಹೊರತುಪಡಿಸಿ ಮೇ 19ರಿಂದ ಇನ್ನುಳಿದ ಪ್ರಮುಖ ಸ್ಥಳಗಳಿಗೆ ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಒಂದು ವಾಹನದಲ್ಲಿ ಎಸ್‌ಒಪಿ ಪ್ರಕಾರ 30 ಆಸನಗಳಿಗೆ ಸೀಮಿತಗೊಳಿಸಿ, ಸಾರಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿರುತ್ತದೆ. 

70 ದಿನಗಳ ಬಳಿಕ ಭಟ್ಕಳದಲ್ಲಿ ಸಾರಿಗೆ ಬಸ್‌ ಸೇವೆ ಆರಂಭ

ಮುಂದುವರೆದು ಸರ್ಕಾರದ ಆದೇಶದಂತೆ ಜೂ.1ರಿಂದ ಬೆಳಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಜನದಟ್ಟಣೆ/ ಅವಶ್ಯಕತೆಗನುಗುಣವಾಗಿ ಸಾರಿಗೆ ಕಾರ್ಯಾಚರಣೆಯನ್ನು ಹಾಗೂ ದೂರದ ರಾತ್ರಿ ಸಾರಿಗೆಗಳನ್ನು ಸಾರ್ವಜನಿಕ ಅನುಕೂಲಕ್ಕಾಗಿ ಪ್ರಾರಂಭಿಸಲಾಗಿರುತ್ತದೆ. 

ಅಲ್ಲದೆ ಹೊಸಪೇಟೆ, ಸಂಡೂರು, ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಕಂಪ್ಲಿಯಿಂದ ಬೆಂಗಳೂರಿಗೆ ಮತ್ತು ಇತರೆ ಪ್ರಮುಖ ಸ್ಥಳಗಳಿಗೆ ಮುಂಗಡ ಆಸನ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಸಾರ್ವಜನಿಕರು ಸದರಿ ಸಾರಿಗೆಗಳ ಸೌಲಭ್ಯವನ್ನು ಪಡೆದುಕೊಳ್ಳಲು ಹೊಸಪೇಟೆಯ ಈಕರಸಾ ಸಂಸ್ಥೆ ವಿಭಾಗೀಯ ನಿಯಂತ್ರಣಾ​ಧಿಕಾರಿ ಜಿ. ಶೀನಯ್ಯ ಅವರು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
 

click me!