ಬೆಂಗಳೂರು ಮೆಟ್ರೋಗೆ ಹಳಿಗೆ ಹಾರಿ ಮೃತಪಟ್ಟ ಯುವಕ ನ್ಯಾಷನಲ್ ಕಾಲೇಜು ವಿದ್ಯಾರ್ಥಿ ಧ್ರುವ ಕಕ್ಕರ್!

By Sathish Kumar KHFirst Published Mar 21, 2024, 4:45 PM IST
Highlights

ಬೆಂಗಳೂರಿನ ಅತ್ತಿಗುಪ್ಪೆ ನಿಲ್ದಾಣದಲ್ಲಿ ಮೆಟ್ರೋ ಹಳಿಗೆ ಜಿಗಿದು ಸಾವನ್ನಪ್ಪಿದ ಯುವಕ ಮುಂಬೈ ಮೂಲದವನಾಗಿದ್ದು, ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ ಎಂಬುದು ತಿಳಿದುಬಂದಿದೆ.

ಬೆಂಗಳೂರು (ಮಾ.21): ಬೆಂಗಳೂರಿನ ನಮ್ಮ ಮೆಟ್ರೋ ನೇರಳೆ ಮಾರ್ಗದ ಅತ್ತಿಗುಪ್ಪೆ ನಿಲ್ದಾಣದಲ್ಲಿ ರೈಲು ಹಳಿಗೆ ಜಿಗಿದು ಸಾವನ್ನಪ್ಪಿದ ಯುವಕ ಮುಂಬೈ ಮೂಲದವನಾಗಿದ್ದು, ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ ಎಂಬುದು ತಿಳಿದುಬಂದಿದೆ.

ಬೆಂಗಳೂರು ನಮ್ಮ ಮೆಟ್ರೋ ಈಗ ಸೂಸೈಡ್‌ ಪಾಯಿಂಟ್‌ ಆಗುತ್ತಿದೆ. ಇನ್ನು ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತಲು ಮೊಬೈಲ್‌ ಫೋನಿನಲ್ಲಿ ಮಾತನಾಡುತ್ತಾ ನಿಂತಿದ್ದನು. ಇನ್ನು ರೈಲು ಸಂಪೂರ್ಣವಾಗಿ ಹತ್ತಿರ ಬಂದ ನಂತರ ಹಳಿಯ ಮೇಲೆ ಜಿಗಿದಿದ್ದಾನೆ. ಇನ್ನು ಹೈ ವೋಲ್ಟೇಜ್‌ ವಿದ್ಯುತ್ ಸಂಪರ್ಕ ಹಾಗೂ ಒಟ್ಟು 8 ಭೋಗಿಗಳನ್ನು ಹೊಂದಿದ ಟನ್‌ಗಟ್ಟಲೆ ಭಾರವಿರುವ ಮೆಟ್ರೋ ರೈಲು ಆತನ ದೇಹದ ಮೇಲೆ ಹರಿದಿದೆ. ಈ ವೇಳೆ ಯುವಕ ದೇಹ ಎರಡು ತುಂಡಾಗಿದೆ. ಯುವಕನ ರುಂಡ ಹಾಗೂ ಮುಂಡ ಇಬ್ಭಾಗವಾಗಿವೆ. 

ಅತ್ತಿಗುಪ್ಪೆ ನಿಲ್ದಾಣದಲ್ಲಿ ಮೆಟ್ರೋ ಹಳಿಗೆ ಜಿಗಿದು ಯುವಕ ಸಾವು; ಮಾಗಡಿ ರಸ್ತೆ- ಚಲ್ಲಘಟ್ಟ ಮೆಟ್ರೋ ಸಂಚಾರ ಸ್ಥಗಿತ!

ರೈಲ್ವೆ ಹಳಿಗೆ ಹಾರಿದ ಯುವಕನ ಮೃತ ದೇಹವನ್ನು ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ರೈಲ್ವೆ ಹಳಿಯಿಂದ ಹೊರಗೆ ತೆಗೆಯಲಾಗಿದೆ. ಆಗ ಮೃತ ಯುವಕ ಬಳಿ ಸಿಕ್ಕಿದ್ದ ಮೊಬೈಲ್ ಫೋನ್, ಪರ್ಸ್ ಹಾಗೂ ಅದರಲ್ಲಿದ್ದ ಗುರುತಿನ ಚೀಟಿಯನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮೃತ ಯುವಕ ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜು ವಿದ್ಯಾರ್ಥಿ ಎಂಬುದು ತಿಳಿದುಬಂದಿದೆ. ಇನ್ನು ಈ ವಿದ್ಯಾರ್ಥಿಯ ಹೆಸರು ಧೃವ ಕಕ್ಕರ್ (20) ಎಂದು ತಿಳಿದುಬಂದಿದೆ. ಆದರೆ, ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ತಿಳಿದುಬಂದಿಲ್ಲ.

ಇನ್ನು ಪೊಲೀಸರ ಮಹಜರ್ ನಂತರ ಮೃತಪಟ್ಟ ವ್ಯಕ್ತಿ ಸುಮಾರು 19 ವರ್ಷ ವಯಸ್ಸಿನ ಪುರುಷನಾಗಿದ್ದಾನೆ. ಇನ್ನು ಯುವಕನ ದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಇನ್ನು ಪೊಲೀಸರ ನೇತೃತ್ವದಲ್ಲಿ ಮೃತದೇಹವನ್ನು ಮೆಟ್ರೋ ಹಳಿಯಿಂದ ತೆರವುಗೊಳಿಸಿದ ನಂತರ ಎಂದಿನಂತೆ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ರೈಲು ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!