ಶಿರಸಿಯ ದಿನೇಶ ಹೆಗಡೆಗೆ ನಾಸಾ ಪ್ಯೂಚರ್‌ ಇನ್ವೆಸ್ಟಿಗೇಟರ್‌ ಪ್ರಶಸ್ತಿ

By Kannadaprabha NewsFirst Published Aug 20, 2021, 12:52 PM IST
Highlights

*  ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ, ಸಶಿಗುಳಿ ಗ್ರಾಮದ ಸಾಧಕ
*  ಅಲಬಾಮಾ ವಿಶ್ವವಿದ್ಯಾಲಯದ ಡಾಕ್ಟರೇಟ್‌ ವಿದ್ಯಾರ್ಥಿಯಾಗಿರುವ ದಿನೇಶ 
*  ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಪತಾಕೆ ಹಾರಿಸಿದ ಕನ್ನಡಿಗ 
 

ಶಿರಸಿ(ಆ.20):  ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನೀಡುವ ‘ಫ್ಯೂಚರ್‌ ಇನ್ವೆಸ್ಟಿಗೇಟರ್‌’ ಪ್ರಶಸ್ತಿಗೆ ಜಿಲ್ಲೆಯ ಸಿದ್ದಾಪುರ ತಾಲೂಕಿನ ದಿನೇಶ ವಸಂತ ಹೆಗಡೆ (27) ಆಯ್ಕೆಯಾಗಿದ್ದಾರೆ.

ಹಂಟ್ಸಿವಲ್‌ನಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದ ಡಾಕ್ಟರೇಟ್‌ ವಿದ್ಯಾರ್ಥಿಯಾಗಿರುವ ದಿನೇಶ ಅವರು ಸಲ್ಲಿಸಿರುವ ಸಂಶೋಧನಾ ಪ್ರಸ್ತಾವನೆಯನ್ನು ಬಾಹ್ಯಾಕಾಶ ವಿಜ್ಞಾನ ವಿಭಾಗವು ನಾಸಾ ಅಥ್‌ರ್‌ ಮತ್ತು ಸ್ಪೇಸ್‌ ಸೈನ್ಸ್‌ ಮತ್ತು ಟೆಕ್ನಾಲಜಿ ಅನುದಾನದಲ್ಲಿ ನಾಸಾ ‘ಫ್ಯೂಚರ್‌ ಇನ್‌ವೆಸ್ಟಿಗೇಟರ್‌’ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಈ ಪ್ರಶಸ್ತಿಯಲ್ಲಿ 135000 ಅಮೆರಿಕನ್‌ ಡಾಲರ್‌(1.42 ಕೋಟಿ) ಅನ್ನು ಸ್ಟೈಫಂಡ್‌, ಟ್ಯೂಷನ್‌, ಸಂಶೋಧನಾ ಚಟುವಟಿಕೆಗಳು ಮತ್ತು ಪ್ರಯಾಣ ವೆಚ್ಚಗಳನ್ನು ಭರಿಸಲು, ಕಾರ್ಯಾಗಾರಗಳು ಮತ್ತು ಸಮ್ಮೇಳನಗಳಿಗೆ ಹಾಜರಾಗಲು ಮತ್ತು ಸಂಶೋಧನೆಯನ್ನು ಮುಂದುವರಿಸಲು ನೀಡಲಾಗುವುದು ಎಂದು ವಿಶ್ವವಿದ್ಯಾನಿಯಲದ ಅಧಿಕೃತ ವೆಬ್‌ಸೈಟ್‌ತನ್ನ ನ್ಯೂಸ್‌ಲೆಟರ್‌ನಲ್ಲಿ ತಿಳಿಸಿದೆ.

ಮಂಗಳನಲ್ಲಿ ವಾಸಿಸುವುದಕ್ಕೆ ನಾಸಾ ತರಬೇತಿ: ಅರ್ಜಿ ಆಹ್ವಾನ!

ಎರಡನೇ ವರ್ಷದ ಡಾಕ್ಟರೇಟ್‌ ವಿದ್ಯಾರ್ಥಿಯಾಗಿರುವ ದಿನೇಶ, ಬಾಹ್ಯಾಕಾಶ ವಿಜ್ಞಾನ ವಿಭಾಗದಲ್ಲಿ ಮತ್ತು ಯುಎಎಚ್‌ ಸೆಂಟರ್‌ ಫಾರ್‌ಸ್ಪೇಸ್‌ ಪ್ಲಾಸ್ಮಾ ಮತ್ತು ಏರೋನಾಮಿಕ್‌ ರಿಸರ್ಚ್‌ನಲ್ಲಿ ಪದವಿ ಸಂಶೋಧನಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಹವಾಮಾನದ ಕುರಿತು ತಮ್ಮ ಸಂಶೋಧನೆಯನ್ನು ಮುಂದುವರಿಸಲು ಈ ಅನುದಾನವನ್ನು ನೀಡಲಾಗಿದೆ. ದಿನೇಶ ಅವರು ಬಾಹ್ಯಾಕಾಶ ಹವಾಮಾನದ ಅನಿಶ್ಚಿತತೆಗಳ ಪರಿಮಾಣಾತ್ಮಕ ಅಧ್ಯಯನ ವಿಷಯದ ಕುರಿತು ಸಂಶೋಧನಾ ಪ್ರಸ್ತಾವನೆ ಸಲ್ಲಿಸಿದ್ದರು. ಬಾಹ್ಯಾಕಾಶ ಹವಾಮಾನ ವಿಜ್ಞಾನಿ ಮತ್ತು ಬಾಹ್ಯಾಕಾಶ ವಿಜ್ಞಾನದ ವಿಶೇಷ ಪ್ರಾಧ್ಯಾಪಕರಾದ ಡಾ. ನಿಕೊಲಾಯ್‌ ಪೊಗೊರೆಲೋವ್‌ ಅವರು ದಿನೇಶ ಅವರಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ, ಸಶಿಗುಳಿ ಗ್ರಾಮದ ದಿನೇಶ ವಸಂತ ಹೆಗಡೆ, ವಾಜಗದ್ದೆ ಮತ್ತು ಹಾರ್ಸಿಕಟ್ಟಾದಲ್ಲಿ ಕನ್ನಡ ಮಾಧ್ಯಮದಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅಧ್ಯಯನ ಮಾಡಿದ್ದರು.
ಮೈಸೂರಿನ ಯುವರಾಜ ಕಾಲೇಜಿನಲ್ಲಿ ತನ್ನ ಬಿಎಸ್ಸಿ ಪದವಿ ಮುಗಿಸಿ ನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರ ಎಂಎಸ್ಸಿ ಪದವಿ ಗಳಿಸಿ, ಹೆಚ್ಚಿನ ಅಧ್ಯಯನಕ್ಕೆ ಅಮೆರಿಕಕ್ಕೆ ತೆರಳಿದ ದಿನೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದ ಪತಾಕೆ ಹಾರಿಸಿದ್ದಾರೆ.

ಮಂಗಳ ಗ್ರಹದ ಮೇಲೆ ಬಂಡೆ ಸಂಗ್ರಹಿಸಲು ವಿಫಲವಾದ ಪರ್ಸಿವರೆನ್ಸ್‌!

ಕಾಲೇಜು ದಿನಗಳಲ್ಲೇ ವಿಜ್ಞಾನದ ಜತೆಗೆ ಸಾಂಸ್ಕೃತಿಕವಾಗಿಯೂ ಭಾಗವಹಿಸುತ್ತಿದ್ದ ದಿನೇಶ ಅವರು ಮೈಸೂರಿನ ನಿರಂತರ ರಂಗ ತಂಡದಲ್ಲಿ ನಟನಾಗಿ ಗುರುತಿಸಿಕೊಂಡಿದ್ದರು. ಅಲ್ಲದೇ ಅನೇಕ ಕಾಲೇಜು ನಾಟಕೋತ್ಸವಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆ ಇವರದು.

ಭೂ ವಿಜ್ಞಾನ, ಹೆಲಿಯೊಫಿಸಿಸ್‌, ಗ್ರಹ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ ವಿಷಯಗಳನ್ನು ಅಧ್ಯಯನ ಮಾಡುತ್ತಿರುವ, ನಾಸಾ ವಿಜ್ಞಾನದ ಮಿಷನ್‌ನಿರ್ದೇಶನಾಲಯದೊಂದಿಗೆ ಈ ಕೆಳಗಿನ ಒಂದು ಅಥವಾ ಹೆಚ್ಚಿನ ಕ್ಷೇತ್ರಗಳಲ್ಲಿ ಹೊಂದಿಕೊಂಡಂತೆ ಸಂಶೋಧನೆಯನ್ನು ಮಾಡುತ್ತಿರುವ ಸಂಶೋಧನಾ ವಿದ್ಯಾರ್ಥಿಗಳಿಗೆ ನಾಸಾ ಈ ಅತ್ಯುತ್ತಮ ಪ್ರಶಸ್ತಿ ನೀಡುತ್ತದೆ.

ಸೌರ ಮಾರುತದ ಗುಣಲಕ್ಷಣಗಳನ್ನು ಅಧ್ಯಯನ ಮಾಡುತ್ತಿರುವ ದಿನೇಶ, ಪ್ಲಾಸ್ಮಾ ಸ್ಥಿತಿಯಲ್ಲಿ ಮುಖ್ಯವಾಗಿ ಪೊಟಾನ್‌ಗಳು ಮತ್ತು ಎಲೆಕ್ಟ್ರಾನ್‌ಗಳನ್ನು ಒಳಗೊಂಡಿರುವ ನಿರಂತರ ಹರಿವು ಸೂರ್ಯನಿಂದ ಹೊರಕ್ಕೆ ಹೇಗೆ ಹರಿಯುತ್ತದೆ ಮತ್ತು ತನ್ನ ಒಳಗೆ ಹುದುಗಿರುವ ಸೌರ ಕಾಂತೀಯ ಕ್ಷೇತ್ರವನ್ನು ಅದರೊಂದಿಗೆ ಹೇಗೆ ಒಯ್ಯುತ್ತದೆ ಎನ್ನುವ ವಿಚಾರದ ಕುರಿತು ಅಧ್ಯಯನ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ನಾನು ಆಯ್ಕೆ ಆಗಿಲ್ಲ ಎಂದು ಆರಂಭದಲ್ಲಿ ಭಾವಿಸಿದ್ದೆ. ನಂತರ ಬಂದ ಆಫರ್‌ಲೆಟರ್‌ನನ್ನ ಆತ್ಮವಿಶ್ವಾಸ, ಸಂತೋಷ, ಭವಿಷ್ಯದ ಗುರಿ, ಕನಸು ಎಲ್ಲವನ್ನು ಇಮ್ಮಡಿಗೊಳಿಸಿತು ಎಂದು ದಿನೇಶ ಹೆಗಡೆ ತಿಳಿಸಿದ್ದಾರೆ. 

click me!