
ಮೈಸೂರು: ಮಸೀದಿ ಮುಂದೆ ಗಣಪತಿ ಮೆರವಣಿಗೆ ಹೋಗಬಾರದು ಅನ್ನೋ ಹೇಳಿಕೆಯನ್ನು ಸವಾವಾಲಾಗಿ ಸ್ವೀಕರಿಸಿದ ಹಿಂದೂ ಜಾಕರಣ ವೇದಿಕೆ ಟಿ ನರಸೀಪುರ ಗಣಪ ಮೆರವಣಿಗೆ ಅದ್ದೂರಿಯಾಗಿ ನೆರವೇರಿಸಿತ್ತು. ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ನಾಯಕರು ಟಿ ನರಸೀಪುರದಲ್ಲಿ ಭಾರಿ ಹೋರಾಟ ನಡೆಸಿ ಕೊನೆಗೂ ಗಣೇಶ ಮೆರವಣಿಗೆ ಅದ್ಧೂರಿಯಾಗಿ ಮಾಡಿದ್ದರು. ಆದರೆ ಮೆರವಣಿಗೆ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಗರಂ ಆಗಿದೆ. ಪ್ರತಾಪ್ ಸಿಂಹ ಸೇರಿದಂತೆ ಹಲವರ ವಿರುದ್ದ ದೂರು ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಯದುವೀರ್ ಒಡೆಯರ್, ಕಾನೂನಾತ್ಮಕವಾಗಿ ಎದುರಿಸಲು ನಮಗೂ ಅವಕಾಶ ಇದೆ, ಅದನ್ನ ಪ್ರತಾಪ್ ಸಿಂಹ ಮಾಡ್ತಾರೆ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ಮಾತನಾಡಿದ ಸಂಸದ ಯದುವೀರ್, ಕಾನೂನಾತ್ಮಕವಾಗಿ ಏನು ಕ್ರಮ ಕೈಗೊಳ್ಳಬೇಕಿತ್ತು, ಅದನ್ನ ತೆಗೆದುಕೊಂಡಿದ್ದಾರೆ. ನಾವೂ ಕೂಡ ಕಾನೂನಾತ್ಮಕವಾಗಿ ಎದುರಿಸಬೇಕಾಗಿದೆ. ಅವರು ಏನು ಭಾಷಣ ಮಾಡಿದ್ದಾರೆ ನಾನು ನೋಡಿಲ್ಲ. ಅದನ್ನ ಸರ್ಕಾರ ತೀರ್ಮಾನ ಮಾಡುತ್ತೆ, ನ್ಯಾಯಾಲಯ ಇರುತ್ತೆ. ಭಾಷಣದ ಬಗ್ಗೆ ಕಾನೂನಲ್ಲಿ ಕ್ರಮ ಇದ್ದರೆ ಅವರು ತೆಗೆದುಕೊಂಡಿರುತ್ತಾರೆ. ಇದು ಬರಿ ಪ್ರಾರಂಭ, ಕಾನೂನಾತ್ಮಕವಾಗಿ ಎದುರಿಸಲು ನಮಗೂ ಅವಕಾಶ ಇದೆ. ಅದನ್ನ ಅವರು ಮಾಡ್ತಾರೆ. ವ್ಯಕ್ತಿ ಅವರ ಅಭಿಪ್ರಾಯ ಸಲ್ಲಿಸಿದ್ದಾರೆ. ಅವರ ಅಭಿಪ್ರಾಯ ಅದು, ಪಕ್ಷದ ಅಭಿಪ್ರಾಯ ಅಲ್ಲ. ಅವರು ಕಾನೂನಾತ್ಮಕವಾಗಿ ಎದುರಿಸುತ್ತಾರೆ ಎಂದು ತಿಳಿಸಿದ್ದಾರೆ.
ಇನ್ನು, ತಮ್ಮ ವಿರುದ್ಧ ಎಫ್ಐಆರ್ ದಾಖಲು ಮಾಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಪ್ರಚೋದನೆ ಕೊಟ್ಟಿದ್ದು ನಾನಲ್ಲ, ಇನ್ಸ್ಪೆಕ್ಟರ್. ಪ್ರಚೋದನೆ ಕೊಟ್ಟಿದೆ ಇನ್ಸ್ಪೆಕ್ಟರ್. ಆತನ ಮೇಲೆ ಎಫ್ಐಆರ್ ಆಗಬೇಕಿತ್ತು. ವರ್ಗಾವಣೆ ಮಾಡಿ ಇನ್ಸ್ಪೆಕ್ಟರ್ ಮೇಲೆ ಕ್ರಮ ತೆಗೆದುಕೊಳ್ಳಬೇಕಿತ್ತು. ಆತ ಕೊಟ್ಟ ಚಿತಾವಣೆಗೆ ನಾವು ಸ್ಪಂದಿಸಿದ್ದೇವೆ. ಮಸೀದಿ ಮುಂದೆ ಇನ್ಸ್ಪೆಕ್ಟರ್ ಆಡಿದ ಮಾತುಗಳನ್ನ ಅಷ್ಟೇ ಪ್ರಸ್ತಾಪ ಮಾಡಿದ್ದೇನೆ. ಏನು ಏಳುತ್ತೆ ನೋಡ ಬಾ ಎಂದು ಕರೆದೆ. ಇದನ್ನ ಮಾತ್ರ ನಾನು ಕೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಅಲ್ಲದೇ, ಪೊಲೀಸರ ಬಗ್ಗೆ ನನಗೆ ಅಪಾರ ಗೌರವ ಇದೆ. ತರ್ಲೆ ಇನ್ಸ್ಪೆಕ್ಟರ್ ಇಂದ ಇದೆಲ್ಲಾ ಆಗಿದೆ. ಅದನ್ನ ಬಿಟ್ಟು ನನ್ನ ಮೇಲೆ ಎಫ್ಐಅರ್ ಆಗಿದೆ. ಗೃಹ ಸಚಿವರ ಒತ್ತಡಕ್ಕೆ ಮಣಿದು ಎಫ್ಐಆರ್ ದಾಖಲು ಮಾಡಿದ್ದಾರೆ. ನಾನು ಯಾವುದೇ ಕಮಿಷನ್ ಹೊಡೆದಿಲ್ಲ, ಮುಡಾದಲ್ಲಿ ಅಕ್ರಮವಾಗಿ ಸೈಟ್ ಪಡೆದಿಲ್ಲ. ನ್ಯಾಯಾಲಯದ ಮೊರೆ ಹೋಗುತ್ತೇನೆ. ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ. ಐಜಿಪಿ, ಎಸ್ಪಿ, ಡಿವೈಎಸ್ಪಿ ನೀವು ಒತ್ತಡಕ್ಕೆ ಮಣಿದು ಎಫ್ಐಆರ್ ದಾಖಲು ಮಾಡಿದ್ದಾರೆ. ನಾನು ಅಪ್ಪನ ಹೆಸರು ಹೇಳಿಕೊಂಡು ಇಲ್ಲಿಗೆ ಬಂದಿಲ್ಲ. ನನ್ನನ ರಾಜಕಾರಣಿಯ ರೀತಿ ನೋಡಬೇಡಿ, ನಾನೊಬ್ಬ ಪತ್ರಕರ್ತ. ಪತ್ರಕರ್ತರು ಸಂವಿಧಾನವನ್ನ ಚೆನ್ನಾಗಿ ತಿಳಿದುಕೊಂಡಿರುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.