
ಮೈಸೂರು (ಆ.29): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕಾಗಿ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆಯನ್ನು ಹತ್ತಿರದಿಂದ ವೀಕ್ಷಿಸಲು ಬಯಸುವ ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಅರಣ್ಯ ಇಲಾಖೆ ಆಘಾತ ನೀಡಿದೆ. ಅರಮನೆ ಆವರಣದಲ್ಲಿರುವ ಗಜಪಡೆಯನ್ನು ವೀಕ್ಷಿಸಲು ಬರುವ ಸಾರ್ವಜನಿಕರನ್ನು ನಿಯಂತ್ರಿಸುವ ನೆಪದಲ್ಲಿ ಇಲಾಖೆಯು ಹೊಸದಾಗಿ ಪ್ರವೇಶ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿದೆ. ಅರಣ್ಯ ಇಲಾಖೆಯ ಹೊಸ ನಿಯಮದಂತೆ, ದಸರಾ ಆನೆಗಳನ್ನು ನೋಡಲು ಬಯಸುವ 12 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ 100 ರೂಪಾಯಿ ಹಾಗೂ ಮಕ್ಕಳಿಗೆ (12 ವರ್ಷದೊಳಗಿನ) 50 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಟಿಕೆಟ್ ನೀಡಿದರೂ ವೀಕ್ಷಣೆಗೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ:
ಅದರಂತೆ ಒಂದು ಟಿಕೆಟ್ಗೆ ಕೇವಲ 20 ನಿಮಿಷಗಳ ಕಾಲ ಮಾತ್ರ ಆನೆಗಳನ್ನು ನೋಡಲು ಅವಕಾಶವಿರುತ್ತದೆ. ಆನೆಗಳಿಂದ ಕನಿಷ್ಠ 2 ಮೀಟರ್ (ಅಥವಾ 100 ಮೀಟರ್ ಬ್ಯಾರಿಕೇಡ್ ಅಂತರ) ಕಾಯ್ದುಕೊಳ್ಳಬೇಕು, ಹತ್ತಿರ ಹೋಗುವಂತಿಲ್ಲ. ಆನೆಗಳ ಮುಂದೆ ಸೋಶಿಯಲ್ ಮೀಡಿಯಾಗಾಗಿ 'ರೀಲ್ಸ್' ಮಾಡುವುದು, ಫೋಟೋ ತೆಗೆದುಕೊಳ್ಳುವುದು ಅಥವಾ ಆನೆಗಳಿಗೆ ಆಹಾರ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಕೊಡಗಿನ ದುಬಾರೆ ಕ್ಯಾಂಪ್ನಲ್ಲಿ ಇತ್ತೀಚೆಗೆ ನಡೆದ ಆನೆ ದಾಳಿ ದುರಂತದ ಹಿನ್ನೆಲೆಯಲ್ಲಿ ಇಲಾಖೆಯು ಈ ಎಸ್ಒಪಿ (Standard Operating Procedure) ಜಾರಿಗೆ ತಂದಿದೆ ಎನ್ನಲಾಗಿದೆ. ಕೋಟಿ ಆಂಜನೇಯ ಸ್ವಾಮಿ ದೇವಾಲಯ ಹಾಗೂ ತ್ರಿನೇಶ್ವರ ದೇವಾಲಯದ ಕಡೆಯಿಂದ ಬ್ಯಾರಿಕೇಡ್ಗಳನ್ನು ಹಾಕಿ, ಕೌಂಟರ್ಗಳ ಮೂಲಕ ಶುಕ್ರವಾರದಿಂದ ಪ್ರಾಯೋಗಿಕವಾಗಿ ಟಿಕೆಟ್ ವಿತರಣೆ ಆರಂಭಿಸಲಾಗಿದೆ.
ದಸರಾ ಆನೆಗಳನ್ನು ನೋಡಲು ಹಣ ವಸೂಲಿ ಮಾಡುತ್ತಿರುವ ಅರಣ್ಯ ಇಲಾಖೆಯ ಈ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. "ಜನರನ್ನು ನಿಯಂತ್ರಿಸಲು ಬ್ಯಾರಿಕೇಡ್ ವ್ಯವಸ್ಥೆ ಮಾಡುವುದು ಸರಿಯೇ ಹೊರತು, ಸಾರ್ವಜನಿಕರಿಂದ ಹಣ ವಸೂಲಿ ಮಾಡುವುದು ಖಂಡನೀಯ" ಎಂದು ಪ್ರವಾಸಿಗರು ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ, "ಸಾಮಾನ್ಯ ಪ್ರವಾಸಿಗರಿಗೆ ಟಿಕೆಟ್ ಕಡ್ಡಾಯ ಮಾಡಿ ತಡೆಯುವ ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರು, ತಮ್ಮ ಸಂಬಂಧಿಕರು ಹಾಗೂ ಪರಿಚಿತರನ್ನು ಉಚಿತವಾಗಿ ಆನೆಗಳ ಬಳಿ ಕರೆದೊಯ್ಯುತ್ತಿದ್ದಾರೆ" ಎಂದು ಪ್ರತ್ಯಕ್ಷದರ್ಶಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ತಕ್ಷಣವೇ ಈ ಟಿಕೆಟ್ ವ್ಯವಸ್ಥೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.