ಹದಗೆಟ್ಟರಸ್ತೆ, ಚರಂಡಿ ದುರಸ್ತಿ ಮಾಡದಿದ್ದರೆ ಮೂರ್ನಾಡು ಬಂದ್‌: ಗ್ರಾಮಸ್ಥರ ಎಚ್ಚರಿಕೆ

By Kannadaprabha NewsFirst Published Sep 7, 2022, 12:04 PM IST
Highlights

ಕುಂಬಳದಾಳು, ಹೊದ್ದೂರು, ಮೂರ್ನಾಡು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕು. ತಪ್ಪಿದಲ್ಲಿ ಮೂರ್ನಾಡು ಬಂದ್‌ಗೆ ಕರೆ ನೀಡುವುದಾಗಿ ಈ ಭಾಗದ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಡಳಿತ ಹಾಗೂ ಜಿ.ಪಂ.ಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಗ್ರಾಮದ ರಸ್ತೆ ಅವ್ಯವಸ್ಥೆ ಬಗ್ಗೆ ವಿವರಿಸಿದರು.

ಮಡಿಕೇರಿ (ಸೆ.7) : ಕುಂಬಳದಾಳು, ಹೊದ್ದೂರು, ಮೂರ್ನಾಡು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕು. ತಪ್ಪಿದಲ್ಲಿ ಮೂರ್ನಾಡು ಬಂದ್‌ಗೆ ಕರೆ ನೀಡುವುದಾಗಿ ಈ ಭಾಗದ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಡಳಿತ ಹಾಗೂ ಜಿ.ಪಂ.ಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಗ್ರಾಮದ ರಸ್ತೆ ಅವ್ಯವಸ್ಥೆ ಬಗ್ಗೆ ವಿವರಿಸಿದರು. ಮೂರ್ನಾಡು, ಕುಂಬಳದಾಳು ಪ್ರವೇಶಿಸುವ ರಸ್ತೆಯನ್ನು ಅಗೆದು ಹಾಕಿ ವರ್ಷಗಳೇ ಕಳೆದಿದ್ದರೂ ಈವರೆಗೂ ಡಾಮರು ಹಾಕಿಲ್ಲ. ಮೂರ್ನಾಡು ಪಟ್ಟಣದಲ್ಲಿ ಚರಂಡಿಯನ್ನು ಅಗೆದು ಹಾಕಲಾಗಿದೆ. ಇದರಿಂದ ಪಾದಚಾರಿಗಳು ಮತ್ತು ಶಾಲಾ ಮಕ್ಕಳು ಬಿದ್ದು ಬಿದ್ದು ಗಾಯಗಳಾಗಿರುವ ಘಟನೆಗಳೂ ನಡೆದಿದೆ. ಆದ್ದರಿಂದ ತಕ್ಷಣ ರಸ್ತೆ ಡಾಮರೀಕರಣ ಮತ್ತು ಚರಂಡಿ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಿದ್ದುಗೆ ಹಿನ್ನಡೆ ಮಡಿಕೇರಿ ಚಲೋ ಯಾತ್ರೆ ರದ್ದು, ಗುಪ್ತಚರ ಇಲಾಖೆ ಸ್ಫೋಟಕ ಮಾಹಿತಿ!

 

ಕುಂಬಳದಾಳು ರಸ್ತೆಯಿಂದ ಕೊಡವ ಸಮಾಜದವರೆಗೆ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಕೊಡವ ಸಮಾಜದಲ್ಲಿ ಸಮಾರಂಭ ನಡೆಯುವ ಸಂದರ್ಭ ರಸ್ತೆಯಲ್ಲಿ ಏಕಮುಖ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕು, ಮುಖ್ಯ ದ್ವಾರದ ಬಳಿ ಬಸ್‌ಗಳು ಮತ್ತು ಲಾರಿ ಸಂಚಾರಕ್ಕೆ ಅಡಚಣೆಯಾಗಿರುವ ವಿದ್ಯುತ್‌ ಕಂಬವನ್ನು ತಕ್ಷಣ ತೆರವುಗೊಳಿಸಬೇಕೆಂದು ಆಗ್ರಹಿಸಿದರು.

ಕುಂಬಳದಾಳು ಜ್ಞಾನಜ್ಯೋತಿ ಶಾಲೆಯ ಬಳಿ ರಸ್ತೆ ಬದಿಯಲ್ಲಿ ನಿಂತಿರುವ ಹಳೆಯ ವಾಹನಗಳಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಮೂರ್ನಾಡು, ಹೊದ್ದೂರು ನಾಪೋಕ್ಲು ರಸ್ತೆ ಕಳೆದ ಏಳು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು, ಸ್ಥಳ ಪರೀಶಿಲಿಸಿ ತಕ್ಷಣ ಡಾಂಬರೀಕರಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಬೇಡಿಕೆಗಳಿಗೆ ಮುಂದಿನ ಒಂದು ತಿಂಗಳೊಳಗೆ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಮೂರ್ನಾಡು ಬಂದ್‌ ಮಾಡಿ ಮೌನ ಮೆರವಣಿಗೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೊಡಗಿನಲ್ಲಿ ಮತ್ತೆ ಪ್ರವಾಹ; ಮತ್ತೆ ಮರುಕಳಿಸಲಿದೆಯಾ 2018ರ ಕರಾಳ ದಿನ..?

ಗ್ರಾಮದ ಪ್ರಮುಖರಾದ ತೆಕ್ಕಡೆ ಸುಗು ಗಣಪತಿ, ಕೂಡಂಡ ಪೃಥ್ವಿ, ತೆಕ್ಕಡೆ ಸುನಂದ, ದಂಬೆಕೋಡಿ ಈಶ್ವರ, ತೆಕ್ಕಡೆ ಪೂರ್ಣೇಶ್‌, ಚೆಟ್ಟಿಮಾಡ ಪ್ರಶಾಂತ್‌ ಹಾಗೂ ದೇವಜನ ವಿಖ್ಯಾತ್‌ ಮನವಿ ನೀಡುವ ಸಂದರ್ಭದಲ್ಲಿ ಹಾಜರಿದ್ದರು.

click me!