ಕೊಪ್ಪಳ: ಕೋವಿಡ್‌ ನಿರ್ವಹಣೆ, ದೇಶಕ್ಕೆ ಮುನಿರಾಬಾದ್‌ ಮಾದರಿ..!

By Kannadaprabha NewsFirst Published Jun 17, 2021, 11:44 AM IST
Highlights

* ಕೋವಿಡ್‌ ಉತ್ತಮ ನಿರ್ವಹಣೆ- ಮುನಿರಾಬಾದ್‌ ಗ್ರಾಪಂಗೆ ರಾಷ್ಟ್ರಮಟ್ಟದ ಗೌರವ
* ರಾಜ್ಯದ ಮೂರು ಗ್ರಾಪಂ ಗುರುತು, ಉತ್ತರ ಕರ್ನಾಟಕದ ಏಕೈಕ ಪಂಚಾಯಿತಿ
* ಚೆಕ್‌ಪೋಸ್ಟ್‌ ನಿರ್ಮಾಣ, ದಾಸೋಹ, ಆಹಾರ ಧಾನ್ಯ ವಿತರಣೆ
 

ಎಸ್‌. ನಾರಾಯಣ

ಮುನಿರಾಬಾದ್‌(ಜೂ.17):  2020ನೇ ಸಾಲಿನಲ್ಲಿ ಉತ್ತಮ ಕೋವಿಡ್‌ ನಿರ್ವಹಣೆಯಲ್ಲಿ ಮುನಿರಾಬಾದ್‌ ಗ್ರಾಪಂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಇದು ಗ್ರಾಮಸ್ಥರಿಗೆ ಹಾಗೂ ಜಿಲ್ಲೆಯವರಿಗೆ ಹೆಮ್ಮೆಯ ವಿಷಯವಾಗಿದೆ.

ಹಲವು ವರ್ಷಗಳಿಂದ ಶೌಚಾಲಯ ನಿರ್ಮಾಣದಲ್ಲಿ ಕೊಪ್ಪಳ ಜಿಲ್ಲೆ ಇಡೀ ದೇಶದ ಗಮನ ಸೆಳೆದಿತ್ತು. ಈಗ ಇದೇ ಜಿಲ್ಲೆಯ ಗ್ರಾಪಂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಇದು ಇಡೀ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದ ಏಕೈಕ ಗ್ರಾಪಂ ಆಗಿದೆ.

ಉತ್ತಮ ಕೋವಿಡ್‌ ನಿರ್ವಹಣೆ ಮಾಡಿದ ರಾಜ್ಯದ ಮೂರು ಗ್ರಾಪಂಗಳನ್ನು ಗುರುತಿಸಿದೆ. ಕೊಪ್ಪಳ ಜಿಲ್ಲೆಯ ಮುನಿರಾಬಾದ್‌, ಕೊಡಗು ಜಿಲ್ಲೆಯ ಹೊದ್ದೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಾಳೆಪುಣಿ ಗ್ರಾಪಂಗಳನ್ನು ಕೇಂದ್ರ ಸರ್ಕಾರದ ಗ್ರಾಮೀಣಾ ಅಭಿವೃದ್ಧಿ ಇಲಾಖೆ ಗುರುತಿಸಿದೆ.

ಕೇರಳ, ಮಹಾರಾಷ್ಟ್ರ ಹಾಗೂ ಬಿಹಾರ ರಾಜ್ಯದ ತಲಾ ಆರು ಗ್ರಾಪಂ, ಮಧ್ಯಪ್ರದೇಶದ ಎರಡು ಗ್ರಾಪಂ, ಅಸ್ಸಾಂ ರಾಜ್ಯದ ಮೂರು, ನಾಗಲ್ಯಾಂಡ್‌ ರಾಜ್ಯದ ದೀಮಾಪುರ ಜಿಲ್ಲೆಯ ಆರು ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಬಂಗಾರಮ್ಮಪಾಳೆಂ ಗ್ರಾಪಂಗಳಿಗೆ ಈ ಗೌರವ ಲಭಿಸಿದೆ.

ಕೊಪ್ಪಳ: ಎಣ್ಣೆ ಮತ್ತಿನಲ್ಲಿ ಗಾಂಧಿ ಪ್ರತಿಮೆ ಕೆಡವಿದ ಕುಡುಕ..!

ಮುನಿರಾಬಾದ್‌ ಗ್ರಾಪಂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ಮೂರು ಮುಖ್ಯ ಕಾರಣಗಳಿವೆ. ಮೊದಲನೆಯದು ಗ್ರಾಮದಲ್ಲಿ ಚೆಕ್‌ಪೋಸ್ಟ್‌ಗಳ ನಿರ್ಮಾಣ. ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿಕೊಂಡು ಗ್ರಾಮದ ಎರಡು ಪ್ರವೇಶ ದ್ವಾರಗಳಲ್ಲಿ ಚೆಕ್‌ಪೋಸ್ಟ್‌ನ್ನು ನಿರ್ಮಿಸಿದರು ಹಾಗೂ ಈ ಚೆಕ್‌ಪೋಸ್ಟ್‌ 24 ಗಂಟೆ ಕಾರ್ಯನಿರ್ವಹಿಸುತ್ತಿತ್ತು. ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಪಾಳಿಯಲ್ಲಿ ಈ ಚೆಕ್‌ಪೋಸ್ಟ್‌ನಲ್ಲಿ ಕಾಯುತ್ತಿದ್ದರು. ಇತರ ಊರಿನವರನ್ನು ಒಳಗಡೆ ಬಿಡುತ್ತಿರಲಿಲ್ಲ. ಈ ಚೆಕ್‌ಪೋಸ್ಟ್‌ಗಳಿಂದ ಕೊರೋನಾ ಹರಡುವಿಕೆಯನ್ನು ತಡೆಗಟ್ಟುವಲ್ಲಿ ತುಂಬಾ ಸಹಕಾರಿಯಾಯಿತು.

ಪೋಲಿಸ್‌ ಠಾಣೆ ವತಿಯಿಂದ ದಾಸೋಹ:

ಎರಡನೆಯದಾಗಿ ಇಲ್ಲಿನ ಪೊಲೀಸ್‌ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ ಸುಪ್ರೀತ್‌ ವಿರೂಪಾಕ್ಷಪ್ಪ ಕಳೆದ ವರ್ಷ ಮಾಚ್‌ರ್‍ ತಿಂಗಳಲ್ಲಿ ಲಾಕ್‌ಡೌನ್‌ ಪ್ರಾರಂಭವಾದಾಗಿನಿಂದ ಮೇ ತಿಂಗಳ ಲಾಕ್‌ಡೌನ್‌ ಅಂತ್ಯದವರೆಗೆ ಪ್ರತಿನಿತ್ಯ ಸುಮಾರು 500 ಬಡವರು, ನಿರ್ಗತಿಕರಿಗೆ 3 ಹೊತ್ತು ದಾಸೋಹ ವ್ಯವಸ್ಥೆ ಮಾಡಿದ್ದರು. ಲಾಕ್‌ಡೌನ್‌ ಅವಧಿಯಲ್ಲಿ 30,000 ಅಧಿಕ ಜನರಿಗೆ ದಾಸೋಹ ಮಾಡುವ ಮೂಲಕ ಮುನಿರಾಬಾದ್‌ ಪೊಲೀಸ್‌ ಠಾಣೆ ಇಡೀ ರಾಜ್ಯಕ್ಕೆ ಮಾದರಿಯಾಯಿತು.

ಆಹಾರ ಕಿಟ್‌ ವಿತರಣೆ:

ಮೂರನೆಯದಾಗಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಗ್ರಾಮದ ಬಡವರು ಹಾಗೂ ನಿರ್ಗತಿಕರಿಗೆ ಸುಮಾರು 500 ದವಸ-ಧಾನ್ಯಗಳ ಕಿಟ್‌ಗಳನ್ನು ವಿತರಿಸಿದರು. ಚೆಲ್ಲಯ್ಯ ಕ್ಯಾಂಪಿನ ಗ್ರಾಪಂ ಸದಸ್ಯರಾದ ಇಕ್ಬಾಲ್‌ ಹುಸೇನ್‌ ಅವರು 400 ಧಾನ್ಯಗಳ ಆಹಾರ ಕಿಟ್‌ಗಳನ್ನು ಹಾಗೂ ಉದ್ಯಮಿ ಶ್ರೀನಿವಾಸ್‌ರಾವ್‌ 400 ಧಾನ್ಯಗಳ ಆಹಾರ ಕಿಟ್‌ಗಳನ್ನು ವಿತರಿಸಿದರು.

ಇದಲ್ಲದೇ ಪಿಡಿಒ ಹಾಗೂ ಸಿಬ್ಬಂದಿ ಕೊರೋನಾ ಸೋಂಕಿತರನ್ನು ಗುರುತಿಸಿ ಅವರನ್ನು ಪ್ರತ್ಯೇಕಗೊಳಿಸಿ ಅವರು ಇರುವ ಓಣಿಯನ್ನು ಸೀಲ್‌ಡೌನ್‌ ಮಾಡಿದರು. ಹೊರಗಿನವರು ಬಂದರೂ ಅವರನ್ನು ತಪಾಸಣೆ ಮಾಡಲಾಗುತ್ತಿತ್ತು. ಸೋಕಿತರ ಸಂಪರ್ಕಿತರನ್ನೂ ಗುರುತಿಸಿ ತಪಾಸಣೆ ಮಾಡುವ ಕಾರ್ಯ ವೈಜ್ಞಾನಿಕವಾಗಿ ನಡೆಯಿತು. ಸೋಂಕಿತರು ಯಾವುದೇ ಕಾರಣಕ್ಕೂ ಹೊರಗಡೆ ಬರದಂತೆ ನೋಡಿಕೊಳ್ಳಲಾಯಿತು. ಕೊರೋನಾ ಸೋಂಕಿತರ ಮನೆಗಳಿಗೆ ಪಂಚಾಯಿತಿ ವತಿಯಿಂದ ರೇಷನ್‌ಗಳನ್ನು ಹಂಚಲಾಯಿತು. ಇವೆಲ್ಲ ಉತ್ತಮ ಕಾರ್ಯ ಮಾಡುವ ಮೂಲಕ ಮುನಿರಾಬಾದ್‌ ಗ್ರಾಪಂ ರಾಷ್ಟ್ರಮಟ್ಟದಲ್ಲಿ ತನ್ನ ಛಾಪು ಮೂಡಿಸಿದೆ.

ಗ್ರಾಮ ಪಂಚಾಯಿತಿ ಸಿಬ್ಬಂದಿ, ಸದಸ್ಯರು ಹಾಗೂ ಗ್ರಾಮಸ್ಥರು ಹಾಗೂ ದಾನಿಗಳು ಮಾಡಿದ ಉತ್ತಮ ಕೆಲಸದ ಪ್ರತಿಬಿಂಬವಿದು ಎಂದು ಮುನಿರಾಬಾದ್‌ ಪಿಡಿಒ ಜಯಲಕ್ಷ್ಮೀ ತಿಳಿಸಿದ್ದಾರೆ. 

ನನ್ನ ಕ್ಷೇತ್ರದ ಗ್ರಾಪಂ ಉತ್ತಮ ಕೊರೋನಾ ನಿರ್ವಹಣೆಗಾಗಿ ಇಡೀ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದು ನನಗೆ ಹೆಮ್ಮೆಯ ವಿಷಯವಾಗಿದೆ ಎಂದು ಕೊಪ್ಪಳ ಶಾಸಕ ರಾಘವೆಂದ್ರ ಹಿಟ್ನಾಳ ಹೇಳಿದ್ದಾರೆ. 

ನಾನು ಪ್ರತಿನಿಧಿಸುತ್ತಿದ್ದ ಗ್ರಾಪಂ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿಯಾಗಿರುವುದು ಸಂತೋಷದ ವಿಷಯ. ಹಿಂದೆ ನಾನು ಮುನಿರಾಬಾದ್‌ ಗ್ರಾಪಂ ಅಧ್ಯಕ್ಷನಾಗಿದ್ದಾಗ ಸ್ವಚ್ಛತೆಯಲ್ಲಿ ಅದು ವಿಭಾಗ ಮಟ್ಟದಲ್ಲಿ ಇಡೀ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿತ್ತು ಎಂದು ತಾಪಂ ಅಧ್ಯಕ್ಷ ಬಾಲಚಂದ್ರನ್‌ ಹೇಳಿದ್ದಾರೆ. 
 

click me!