ಇರುವುದೊಂದೇ ರೇಷನ್‌ ಅಂಗಡಿ: 1500 ಕಾರ್ಡುದಾರರು!

By Kannadaprabha NewsFirst Published Apr 8, 2020, 2:18 PM IST
Highlights

ತರೀಕೆರೆ ಪಟ್ಟಣದ ಗಡೀ ಭಾಗದ ಬಡಾವಣೆಗಳ ಸುಮಾರು 1500ಕ್ಕೂ ಹೆಚ್ಚು ರೇಷನ್‌ ಕಾರ್ಡುದಾರರು ವರ್ಷದ ಪ್ರತಿ ತಿಂಗಳು ರೇಷನ್‌ಗಾಗಿ ತಂತಮ್ಮ ಬಡಾವಣೆಗಳಿಂದ ಎರಡು ಮೂರು ಕಿ.ಮೀ ದೂರದ ಎಪಿಎಂಸಿ ಆವರಣದಲ್ಲಿರುವ ನ್ಯಾಯ ಬೆಲೆ ಅಂಗಡಿಗೆ ಬರಬೇಕಾಗಿದೆ.

ಚಿಕ್ಕಮಗಳೂರು(ಏ.08): ತರೀಕೆರೆ ಪಟ್ಟಣದ ಕೋಡಿಕ್ಯಾಂಪ್‌, ಗಿರಿನಗರ, ಗಾಳಿಹಳ್ಳಿ ಕ್ರಾಸ್‌, ಎಂ.ಜಿ.ರಸ್ತೆಯ ಕಾಮೂಷ್‌ ನಗರ, ಆಶ್ರಯ ಬಡಾವಣೆಯ ಕೆಲವೆಡೆ, ಹಳೆಯೂರಿನ ಭಾಗ, ಕುವೆಂಪು ಆಶ್ರಯ ಬಡಾವಣೆ, ಪಟ್ಟಣದ ಗಡೀ ಭಾಗದ ಬಡಾವಣೆಗಳ ಸುಮಾರು 1500ಕ್ಕೂ ಹೆಚ್ಚು ರೇಷನ್‌ ಕಾರ್ಡುದಾರರು ವರ್ಷದ ಪ್ರತಿ ತಿಂಗಳು ರೇಷನ್‌ಗಾಗಿ ತಂತಮ್ಮ ಬಡಾವಣೆಗಳಿಂದ ಎರಡು ಮೂರು ಕಿ.ಮೀ ದೂರದ ಎಪಿಎಂಸಿ ಆವರಣದಲ್ಲಿರುವ ನ್ಯಾಯ ಬೆಲೆ ಅಂಗಡಿಗೆ ಬರಬೇಕಾಗಿದೆ.

ಇಷ್ಟೂಬಡಾವಣೆಯ ರೇಷನ್‌ ಕಾರ್ಡುದಾರರು ಅಂಗಡಿಗೆ ಬಂದರೆ ತಮ್ಮ ಸರದಿಗಾಗಿ ಗಂಟೆ ಗಟ್ಟಲೆ ಕಾಯಬೇಕು. ಹೀಗೆ ಕಾದು ಕಾದು ಅಕ್ಕಿ ಮತ್ತಿತರ ರೇಷನ್‌ಗಳನ್ನು ತಮ್ಮ ದೂರದ ಮನೆಗಳಿಗೆ ತಲೆ ಮೇಲೆ ಹೊತ್ತು ಸಾಗಬೇಕು. ಬಹುತೇಕ ನ್ಯಾಯ ಬೆಲೆ ಅಂಗಡಿಗಳಿಗೆ ಮಹಿಳೆÜಯರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ನ್ಯಾಯಬೆಲೆ ಅಂಗಡಿಯಲ್ಲಿ ನೀಡುವ ಪದಾರ್ಥಗಳನ್ನು ಮಹಿಳೆಯರೇ ತಲೆ ಮೇಲೆ ಹೊತ್ತು ತರಬೇಕು. ಇಲ್ಲವೇ ಅಟೋ ನೆರವು ಪಡೆಯಬೇಕು, ನಿಜಕ್ಕೂ ಬಡವರು, ವಯೋವೃದ್ಧರು, ಅಸಹಾಯಕರಿಗೆ ಈ ನ್ಯಾಯಬೆಲೆ ಅಂಗಡಿಯಿಂದ ತಂತಮ್ಮ ಬಡಾವಣೆಗಳಿಗೆ ರೇಷನ್‌ ತೆಗೆದುಕೊಂಡು ಹೋಗುವುದೆಂದರೆ ಬಹಳ ಪ್ರಯಾಸದ ಕೆಲಸವಾಗಿದೆ.

ಮೂಗುತಿಯೇ ಭಾರ

ಇಷ್ಟೂಮೀರಿ ದಿನದ ಮಿಕ್ಕ ಎಲ್ಲ ಕೆಲಸವನ್ನು ಬದಿಗಿರಿಸಿ ರೇಷನ್‌ಗಾಗಿ ತಮ್ಮ ಮನೆಗಳಿಂದ ಈ ನ್ಯಾಯ ಬೆಲೆ ಅಂಗಡಿಗೆ ಬಂದಾಗ, ಅಂಗಡಿ ಬಾಗಿಲು ತೆರೆದಿತ್ತು ಎಂದರೆ ಅದು ರೇಷನ್‌ ಕಾರ್ಡುದಾರರ ಅದೃಷ್ಟವೇ ಸೈ. ಅಂಗಡಿಯಲ್ಲಿ ಕಾರ್ಡುದಾರರಿಗೆ ಅಪೇಕ್ಷಿತ ಪದಾರ್ಥ ದೊರೆತರೆ ಮತ್ತೂ ಅದೃಷ್ಟ. ಆಕಸ್ಮಾತ್‌ ರೇಷನ್‌ ಅಂಗಡಿ ಬಾಗಿಲು ಮುಚ್ಚಿದ್ದರೆ ಅಂಗಡಿಗೆ ಬಂದಿದ್ದೂ ವ್ಯರ್ಥ ಸಮಯವೂ ವ್ಯರ್ಥ. ಹೀಗಾಗಿ ರೇಷನ್‌ ಖರೀದಿಸುವುದು ಅಂದರೆ ಮೂಗಿಗಿಂತ ಮೂಗುತಿಯೇ ಭಾರ ಎನ್ನುವಂತಾಗುತ್ತದೆ.

ಈ ಸಮಸ್ಯೆ ಇಂದು ನೆನ್ನೆ ಮೊನೆಯದಲ್ಲ, ಕಳೆದ ಹತ್ತಿಪ್ಪತ್ತು ವರ್ಷಗಳಷ್ಟುಹಿಂದಿನದು. ನ್ಯಾಯಬೆಲೆ ಅಂಗಡಿಗೆ ಗಾಳಿಹಳ್ಳಿ ಶಾಖೆ ಅಂತ ನಾಮಫಲಕ ಇದೆ, ಆದರೆ ಪ್ರಸ್ತುತ ನ್ಯಾಯ ಬೆಲೆ ಅಂಗಡಿ ಇರುವುದು ಎಪಿಎಂಸಿ ಆವರಣದಲ್ಲಿ! ಎಪಿಎಂಸಿ ಆವರಣ ಇರುವುದು ಪಟ್ಟಣದ ಕೇಂದ್ರ ಸ್ಥಳದಲ್ಲಿ, ಮೂರಕ್ಕೆ ಮುಕ್ಕಾಲು ಭಾಗ ರೇಷನ್‌ಕಾರ್ಡುದಾರರು ಇರುವುದು ತರೀಕೆರೆ ಗಡಿ ಪ್ರದೇಶದಲ್ಲಿ!

ವಿದೇಶದಿಂದ ಬಂದು ಬೆಂಗಳೂರಲ್ಲಿ ಧಾರ್ಮಿಕ ಪ್ರಚಾರ ಮಾಡಿದವರ ವಿರುದ್ಧ FIR

ಹೇಳಿ ಕೇಳಿ ವಾರದ ಎಲ್ಲಾ ದಿನಗಳು ಎಪಿಎಂಸಿ ಆವರಣವು ರೈತರಿಂದ, ವರ್ತಕರಿಂದ ಮತ್ತು ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತದೆ, ಅಲ್ಲದೆ ಎಪಿಎಂಸಿ ಆವರಣದ ವಿವಿಧ ಬಗೆಯ ವಾಣಿಜ್ಯ ಮಳಿಗೆಗಳಿಗೆ ಸರಕು ಸಾಗಾಣಿಕೆಯ ಲಾರಿ, ಲಗೇಜ್‌ ಗುಡ್ಸ್‌ ಗಾಡಿಗಳ ಸಂಚಾರವಿರುವುದರಿಂದ ವಿವಿಧ ಬಗೆಯ ಪದಾರ್ಥಗಳನ್ನು ವಾಹನಗಳಿಗೆ ಲೋಡ್‌ ಮತ್ತು ಅನ್‌ಲೋಡ್‌ ಮಾಡಬೇಕಾಗಿರುವುದರಿಂದ ಈ ಪ್ರದೇಶ ಸಹಜವಾಗಿಯೇ ಜನದಟ್ಟಣೆಯಿಂದ ಕೂಡಿರುತ್ತದೆ. ಪ್ರಸ್ತುತ ಕೊರೋನಾ ಹಿನ್ನೆಲೆ ಅಂಗಡಿಯ ಮುಂದೆ ಇದೀಗ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ರೇಷನ್‌ ಪದಾರ್ಥಗಳನ್ನು ಖರೀದಿಸಲಾಗುತ್ತಿದೆ.

ಸದರಿ ಈ ನ್ಯಾಯ ಬೆಲೆ ಅಂಗಡಿಯನ್ನು ಗಾಳಿಹಳ್ಳಿ ಕ್ರಾಸ್‌ಗೆ ವರ್ಗಾಯಿಸಿ ಕೊಡಿ ಎಂದು ಅನೇಕರು ಮನವಿ ಮಾಡಿದ್ದಾರೆ. ಅದರೆ ಅದು ಇನ್ನೂ ಕಾರ್ಯಗತವಾಗಿಲ್ಲ. ಈಗಲಾದರೂ ಸಂಬಂಧಿಸಿದ ಆಹಾರ ಇಲಾಖೆ ಈ ನ್ಯಾಯ ಬೆಲೆ ಅಂಗಡಿಗೆ ಸದ್ಯ ಇರುವ ಒತ್ತಡ ತಪ್ಪಿಸಲಿ. ಹಾಗೂ ಒತ್ತಡ ತಪ್ಪಿಸಿದರೆ ರೇಷನ್‌ ಖರೀದಿಸುವವರಿಗೆ ನಿರಾಳವಾಗುತ್ತದೆ. ಹಾಗೂ ಸಮಾಧಾನದಿಂದ ತಮಗೆ ಬೇಕಾದ ಆಹಾರ ಪದಾರ್ಥಗಳನ್ನು ಕೇಳಿ ಪಡೆಯಲು ಅನುಕೂಲವಾಗುತ್ತದೆ ಎಂಬುದು ಪಡಿತರದಾರರ ಅಭಿಪ್ರಾಯ.

ತರೀಕೆರೆ ಎಪಿಎಂಸಿ ಆವರಣದಲ್ಲಿರುವ ನ್ಯಾಯಬೆಲೆ ಅಂಗಡಿಗೆ ಒತ್ತಡ ನಿವಾರಿಸುವ ಸಲುವಾಗಿ ರೇಷನ್‌ ಕಾರ್ಡುದಾರರ ಸಂಖೆಯನ್ನು ವಿಭಾಗಿಸಲಾಗುವುದು. ವಿವಿಧ ಬಡಾವಣೆಗಳ ಸಮೀಪದ ಪ್ರದೇಶದಲ್ಲಿ ಜನರಿಗೆ ಅನುಕೂಲವಾಗುವಂತೆ, ಸಾಮಾಜಿಕ ಅಂತರವನ್ನೂ ಕಾಪಾಡಿಕೊಂಡು, ನ್ಯಾಯ ಬೆಲೆ ಅಂಗಡಿಗಳನ್ನು ತೆರೆಯುವಂತೆ ತಾಲೂಕು ಆಡಳಿತಕ್ಕೆ ಸೂಚನೆ ನೀಡುತ್ತೇನೆ ಶಾಸಕ ಡಿ.ಎಸ್‌.ಸುರೇಶ್‌ ತಿಳಿಸಿದ್ದಾರೆ.

-ಅನಂತ ನಾಡಿಗ್‌

click me!