ಮಂಡ್ಯ: 'ಮೋದಿ- ಬಿಎಸ್‌ವೈ ಸಂಬಂಧ ಹಳಸಿದೆ'..!

By Kannadaprabha NewsFirst Published Oct 5, 2019, 2:10 PM IST
Highlights

ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪನವರ ಸಂಬಂಧ ಸಂಪೂರ್ಣವಾಗಿ ಹಳಸಿ ಹೋಗಿದೆ. ಮೂರು ಬಾರಿ ದೆಹಲಿಗೆ ಹೋದರೂ ಪ್ರಧಾನಿಗಳು ಸಮಯಾವಕಾಶ ಕೊಡಲಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು ಪ್ರಧಾನಿಗೆ ಯಡಿಯೂರಪ್ಪ ಅವ್ರನ್ನು ಕಂಡರೆ ಅಸಮಾಧಾನವಿದೆ ಎಂದಿದ್ದಾರೆ.

ಮಂಡ್ಯ(ಅ.05): ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪನವರ ಸಂಬಂಧ ಸಂಪೂರ್ಣವಾಗಿ ಹಳಸಿ ಹೋಗಿದೆ. ಮೂರು ಬಾರಿ ದೆಹಲಿಗೆ ಹೋದರೂ ಪ್ರಧಾನಿಗಳು ಸಮಯಾವಕಾಶ ಕೊಡಲಿಲ್ಲ. ಪ್ರಧಾನಿಗೆ ಇವರನ್ನು ಕಂಡರೆ ಅಸಮಾಧಾನವಿದೆ. ಹೀಗಾಗಿ ರಾಜ್ಯ ಸರ್ಕಾರದ ಜೊತೆ ಕೇಂದ್ರ ಚಲ್ಲಾಟವಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ರಾಜ್ಯ ಸರ್ಕಾರ ಬೊಕ್ಕಸ ಬರಿದಾಗಿದೆ ಎಂದು ಬೊಬ್ಬೇ ಹೊಡೆಯುತ್ತಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಈ ಅನರ್ಹ ಶಾಸಕರ ಕ್ಷೇತ್ರಕ್ಕೆ ಅನುದಾನ ಕೊಡಲು ಹಣ ಎಲ್ಲಿಂದ ಬಂತು. ನನ್ನನ್ನು ಮಂಡ್ಯ ಮುಖ್ಯಮಂತ್ರಿ ಅಂತ ಬಣ್ಣಿಸಿದ ಯಡಿಯೂರಪ್ಪ ಸಿಎಂ ತಕ್ಷಣ ಅದೇ ದಿನ ಸಂಜೆ 850 ಕೋಟಿ ಹಣವನ್ನು ಶಿಕಾರಿಪುರದ ಅಭಿವೃದ್ಧಿಗೆ ಬಿಡುಗಡೆ ಮಾಡಿದರಲ್ಲ ಎಂದು ಪ್ರಶ್ನಿಸಿದ್ದಾರೆ.

ಮೋದಿ ನನಗೆ ಕಾಲ್ ಮಾಡಿದ್ರು, ಆದ್ರೆ ಬಿಎಸ್‌ವೈ ದೆಹಲಿಗೆ ಹೋದ್ರೂ ಭೇಟಿ ಆಗ್ತಿಲ್ಲ:

ಪ್ರಧಾನಿ ಭೇಟಿ ಮಾಡಲು ಸಿಎಂ ಯಡಿಯೂರಪ್ಪ ಮೂರು ಬಾರಿ ದೆಹಲಿಗೆ ಹೋದರು. ಏಕೆ ಮೋದಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಆದರೆ ನಾನು ಸಿಎಂ ಆಗಿದ್ದಾಗ ಸ್ವತಃ ಮೋದಿ ಅವರೇ ನನಗೆ ಕರೆ ಮಾಡಿದ್ದರು. ನೆರೆ ಬಗ್ಗೆ ಮಾಹಿತಿ ಪಡೆದುಕೊಂಡರು. ಯಾವ ಸಮಯದಲ್ಲಿ ಬೇಕಾದರೂ ಫೋನ್‌ ಮಾಡಿ ಅಂತ ಹೇಳಿದರು. ರಾಜ್ಯದಲ್ಲಿ ಅವರ ಪಕ್ಷದ ಸಿಎಂ ಇದ್ದರೂ ಯಾಕೆ ದರ್ಶನ ಭಾಗ್ಯ ಸಿಗುತ್ತಿಲ್ಲ. ಪ್ರಧಾನಿ ಮತ್ತು ಸಿಎಂ ನಡುವೆ ವಿಶ್ವಾಸದ ಕೊರತೆಯಾಗಿದೆ. ಸಂಬಂಧ ಹಳಸಿದೆ. ಯಡಿಯೂರಪ್ಪ ನಡವಳಿಕೆಯನ್ನು ಮೋದಿ ನೋಡುತ್ತಿದ್ದಾರೆ. ಯಡಿಯೂರಪ್ಪ ಅಂದರೆ ಮೋದಿಗೆ ಅಸಮಾಧಾನ. ಹಣ ಬಿಡುಗಡೆ ಮಾಡಲು ಇನ್ನೆರಡು ದಿನ, ಇನ್ನೆರಡು ದಿನ ಅಂತ ಸತಾಯಿಸಿ ಈ ರಾಜ್ಯ ಸರ್ಕಾರ ಚೆಲ್ಲಾಟ ಆಡುತ್ತಿದೆ ಎಂದು ಲೇವಡಿ ಮಾಡಿದರು.

ಸರ್ಕಾರದ ಜವಾಬ್ದಾರಿ ಬಿಟ್ಟು ಬಿಡಿ:

ನೆರೆ ಹಾವಳಿ ನಿರ್ವಹಣೆ ಮತ್ತು ಸಂತ್ರಸ್ತರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂತಾದರೆ ನೀವು (ಬಿಜೆಪಿಯವರು) ಸರ್ಕಾರ ಜವಾಬ್ದಾರಿ ಬಿಟ್ಟು ಬಿಡಿ. ಕ್ಯಾಬಿನೆಟ್‌ ಸಭೆಯಲ್ಲಿ ಮಂತ್ರಿಗಳೇ ಸಿಎಂ ವಿರುದ್ಧ ತಿರುಗಿ ಬೀಳುತ್ತಾರೆ. ಬೆಳಗಾವಿಯಲ್ಲಿ ರೈತರು ಕಷ್ಟಹೇಳೋಕೆ ಹೋದರೆ ಸಿಎಂ ಯಡಿಯೂರಪ್ಪ ಅವರಿಗೆ ಕಷ್ಟಗಳನ್ನು ಕೇಳಿಸಿಕೊಳ್ಳುವ ವ್ಯವಧಾನ ಇಲ್ಲ. ಉಪ ಮುಖ್ಯಮಂತ್ರಿಗಳು ಮತ್ತು ಸಿಎಂ ಪುತ್ರ ಖಜಾನೆ ಖಾಲಿ ಅಂತಾರೆ, ಇದು ವಿಜಯೇಂದ್ರನ ಖಜಾನೆಯೋ ಸರ್ಕಾರದ ಖಜಾನೆಯೋ ಎಂದು ಪ್ರಶ್ನೆ ಮಾಡಿದರು.

ವಿದ್ಯುತ್‌ ದೀಪಾಲಂಕಾರದಲ್ಲಿ ಜಗಮಗಿಸುತ್ತಿದೆ KRS

ಕೇಂದ್ರ ಸರ್ಕಾರದ ಜವಾಬ್ದಾರಿ ಬಿಟ್ಟು ಬಿಡಿ. ರಾಜ್ಯ ಸರ್ಕಾರ ಏನು ಜವಾಬ್ದಾರಿ ಹೊತ್ತು ಕೊಂಡಿದೆ. ನಾನು ಸಿಎಂ ಆಗಿದ್ದಾಗ ಕೊಡಗಿನಲ್ಲಿ ವಿಕೋಪ ಬಂತು. ನಾನು ಕೇಂದ್ರ ಸರ್ಕಾರದ ಪರಿಹಾರಕ್ಕೆ ಕಾದು ಕೂರಲಿಲ್ಲ. ಕೇಂದ್ರದ ಪÜರಿಹಾರಕ್ಕೆ ಕಾದು ಕುಳಿತಿದ್ರೆ ಕೊಡಗಿನ ಜನಕ್ಕೆ ಪರಿಹಾರ ಕೊಡಲು ಆಗುತ್ತಿರಲಿಲ್ಲ. ವಿಕೋಪ ಆದ ನಂತರ ಮೂರು ಬಾರಿ ಕೊಡಗಿಗೆ ಭೇಟಿ ಕೊಟ್ಟೆ. ಒಬ್ಬ ಮಂತ್ರಿ ನಿಯೋಜಿಸಿದ್ದೆ. ಕೂಡಲೇ ತಲಾ ಒಂದು ಲಕ್ಷ ಪರಿಹಾರ ಘೋಷಿಸಿದೆ. ಮನೆ ಬಿದ್ದಾಗ ಅದಕ್ಕೂ ರಾಜ್ಯ ಸರ್ಕಾರದಿಂದ 50 ಸಾವಿರ ಪರಿಹಾರ ಕೊಟ್ಟೆ. ಈಗ ನಿಮ್ಮ ಕೊಡುಗೆ ಕಾಳಜಿ ಏನು ಎಂದರು.

28 ಸಾವಿರ ಕೋಟಿ ಹಣವಿತ್ತು:

ಈ ಸರ್ಕಾರದಲ್ಲಿ ಮಾತು ಎತ್ತಿದರೆ ಹಣ ಇಲ್ಲ ಅಂತ ಹೇಳುತ್ತಾರೆ. ನಾನು ಅಧಿಕಾರ ಬಿಟ್ಟು ಹೊರ ಬಂದಾಗ 28 ಸಾವಿರ ಕೋಟಿ ರು. ಖಜಾನೆಯಲ್ಲಿ ಹಣವಿತ್ತು. ಆ ಹಣ ಏನಾಗಿದೆ ಅಂತ ಯಡಿಯೂರಪ್ಪ ಹೇಳಬೇಕು. ರಾಜ್ಯದ ಖಜಾನೆಗೆ ಯಾವತ್ತು ದರಿದ್ರ ಬಂದಿಲ್ಲ. ಹಣ ಇದೆ, ಖರ್ಚು ಮಾಡೋ ಹೃದಯ ವೈಶಾಲ್ಯತೆ ಯಡಿಯೂರಪ್ಪಗೆ ಇಲ್ಲ. ಮಂಡ್ಯ ಸಂಸದರು ಸ್ವಾಭಿಮಾನ ಮತದಿಂದ ಗೆದ್ದು ಕಿತ್ತು ಗುಡ್ಡೆ ಹಾಕಿದ್ದು ಏನು? ಜಿಲ್ಲಾ ಉಸ್ತುವಾರಿ ಸಚಿವ ಅಶೋಕ್‌ ಜನಪ್ರತಿನಿಧಿ ಕರೆಯದೇ, ಡಿಸಿ ಕಚೇರಿಯಲ್ಲಿ ಸಭೆ ಮಾಡದೇ, ಪ್ರವಾಸಿ ಮಂದಿರದಲ್ಲಿ ಐಬಿಯಲ್ಲಿ ಮಾಡ್ತಿದ್ದಾರೆ. ಇವರುಗಳಿಗೆ ಜವಾಬ್ದಾರಿಯೇ ಇಲ್ಲ ಎಂದರು.

ನನ್ನನ್ನೇ ಯಾಕೆ ಟಾರ್ಗೆಟ್ ಮಾಡ್ತಿರಾ..? ಮಾಧ್ಯಮಕ್ಕೆ ಹೆಚ್‌ಡಿಕೆ ಪ್ರಶ್ನೆ..!

ಸುದ್ಧಿಗೋಷ್ಠಿಯಲ್ಲಿ ಶಾಸಕರಾದ ಸಿ.ಎಸ್‌.ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ಕೆ.ಸುರೇಶ್‌ ಗೌಡ, ಮನ್ಮುಲ್‌ ಅಧ್ಯಕ್ಷ ರಾಮಚಂದ್ರು, ಉಪಾಧ್ಯಕ್ಷ ರಘುನಂದನ್‌, ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌, ಎಚ್‌ .ಟಿ.ಮಂಜು, ನಲ್ಲಿಗೆರೆ ಬಾಲು ಸೇರಿದಂತೆ ಹಲವರು ಇದ್ದರು.

ಅ.05ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ; 

click me!