ವಿದ್ಯುತ್‌ ದೀಪಾಲಂಕಾರದಲ್ಲಿ ಜಗಮಗಿಸುತ್ತಿದೆ KRS

By Kannadaprabha NewsFirst Published Oct 5, 2019, 1:57 PM IST
Highlights

ಶ್ರೀರಂಗಪಟ್ಟಣ ದಸರಾಗೆ ಆಗಮಿಸಿದ್ದ ಜನರನ್ನು ಕೆಆರ್‌ಎಸ್‌ ಬೃಂದಾವನಕ್ಕೆ ಸೆಳೆಯುವ ಉದ್ದೇಶದಿಂದ ವಿದ್ಯುತ್‌ ದೀಪಾಲಂಕಾರ ಅಳವಡಿಸಲಾಗಿದೆ. ಬಣ್ಣ ಬಣ್ಣದ ವಿದ್ಯುತ್ ದೀಪಗಳು ಕೆಆರ್‌ಎಸ್ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದ್ದು, ಪ್ರವಾಸಿಗರನ್ನು ರಂಜಿಸುತ್ತಿದೆ.

ಮಂಡ್ಯ(ಅ.05): ವಿಶ್ವವಿಖ್ಯಾತ ಮೈಸೂರು ಹಾಗೂ ಶ್ರೀರಂಗಪಟ್ಟಣ ದಸರಾಗೆ ಆಗಮಿಸಿದ್ದ ಜನರನ್ನು ಕೆಆರ್‌ಎಸ್‌ ಬೃಂದಾವನಕ್ಕೆ ಸೆಳೆಯುವ ಉದ್ದೇಶದಿಂದ ವಿದ್ಯುತ್‌ ದೀಪಾಲಂಕಾರ ಅಳವಡಿಸಲಾಗಿದೆ.

ದೇಶ-ವಿದೇಶ ಹಾಗೂ ವಿವಿಧ ರಾಜ್ಯಗಳಿಂದ ಕೃಷ್ಣರಾಜಸಾಗರದ ಸೌಂದರ್ಯ ಸವೆಯಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಮತ್ತಷ್ಟುಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಧ್ವನಿ-ಬೆಳಕು ಕಾರ್ಯಕ್ರಮದ ಜೊತೆಗೆ ವಿವಿಧ ನಟ, ನಟಿಯರಿಂದ ಸಂಗೀತ ಕಾರ್ಯಕ್ರಮ, ನಾನಾ ಬಗೆಯ ಹೂಗಳಿಂದ ಪುಷ್ಪ ಪ್ರದರ್ಶನ ಏರ್ಪಡಿಸಿಸಲಾಗಿದೆ.

ರಾಜ್ಯ ಸರ್ಕಾರ ಕಾವೇರಿ ನೀರಾವರಿ ಇಲಾಖೆಯ ಮೂಲಕ 1 ಕೋಟಿ ರು. ಅನುದಾನ ನೀಡಿದೆ. ಈ ಬಾರಿ ವೈಭವಿತವಾಗಿ ಕೆಆರ್‌ಎಸ್‌ ಬೃಂದಾವನದಲ್ಲಿ ಬಣ್ಣ ಬಣ್ಣದ ವಿದ್ಯುತ ದೀಪಗಳಿಂದ ಅಲಂಕಾರ ಜೊತೆಗೆ ಧ್ವನಿ ಬೆಳಕು ಕಾರ‍್ಯಕ್ರಮದ ಮೂಲಕ ಪ್ರವಾಸಿಗರನ್ನು ಸೆಳೆಯಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಯೋಜಿಸಿದೆ. ತಾರೆಯರು ವೇದಿಕೆ ಕಾರ್ಯಕ್ರಮವನ್ನು ನಡೆಸುವ ಮೂಲಕ ಸಡಗರವನ್ನು ಇನ್ನಷ್ಟುಇಮ್ಮಡಿಗೊಳಿಸಿದ್ದಾರೆ.

ಅಣೆಕಟ್ಟೆಹಾಗೂ ಬೃಂದಾವನದ ಕಾರಂಜಿಗೆ ಆಕರ್ಷಕ ಬಣ್ಣದ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ. ಮುಂದಿನ 8 ದಿನಗಳ ಕಾಲ ಪ್ರತಿನಿತ್ಯ ಸಂಜೆ ವೇಳೆ ಸಂಗೀತ ಕಾರ್ಯಕ್ರಮ ಆಯೋಜಿಸಿ ಚಿತ್ತಾಕರ್ಷಕ ರೀತಿಯಲ್ಲಿ ಜಗಮಗಿಸುವ ವಿದ್ಯುತ್‌ ದೀಪಗಳು ಹಾಗೂ ಸಂಗೀತದ ರಸದೌತಣವನ್ನು ಪ್ರವಾಸಿಗರಿಗೆ ಉಣಬಡಿಸಲು ಇಲಾಖೆ ಮುಂದಾಗಿದೆ ಎಂದು ಕೆಆರ್‌ಎಸ್‌ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ವಾಸು ತಿಳಿಸಿದ್ದಾರೆ.

click me!