ಮೋದಿಯನ್ನ ಪ್ರಧಾನಿಯಾಗಿ ಪಡೆದಿರುವುದು ಈ ದೇಶದ ಜನರ ಪುಣ್ಯ: ಹಾಲಪ್ಪ ಆಚಾರ

By Kannadaprabha NewsFirst Published Jun 27, 2021, 12:04 PM IST
Highlights

* ದೇಶವನ್ನು 70 ವರ್ಷ ಆಳಿದರೂ ಯಾವ ಅಭಿವೃದ್ಧಿಯನ್ನೂ ಮಾಡದ ಕಾಂಗ್ರೆಸ್
* ಮೋದಿ ಅವರಿಂದ 7 ವರ್ಷಗಳಲ್ಲಿ ಇಡೀ ದೇಶವೇ ಸಮಗ್ರ ಅಭಿವೃದ್ಧಿ 
* ದೇಶ ಕಂಡ ಪ್ರಧಾನಿಗಳಲ್ಲಿ ಮೋದಿ ಅಗ್ರಗಣ್ಯರು 

ಯಲಬುರ್ಗಾ(ಜೂ.27): ಈ ದೇಶ ಕಂಡ ಪ್ರಧಾನಮಂತ್ರಿಗಳಲ್ಲಿ ನರೇಂದ್ರ ಮೋದಿ ಅಗ್ರಗಣ್ಯರಾಗಿದ್ದಾರೆ ಎಂದು ಶಾಸಕ ಹಾಲಪ್ಪ ಆಚಾರ ಹೇಳಿದ್ದಾರೆ. 

ಕುಕನೂರ ತಾಲೂಕಿನ ಗಾವರಾಳ, ತಿಪ್ಪರಸನಾಳ, ಬೆದವಟ್ಟಿ, ಕದ್ರಳ್ಳಿ ಹಾಗೂ ಯಲಬುರ್ಗಾ ತಾಲೂಕಿನ ಕುಡಗುಂಟಿ ಗ್ರಾಮಗಳಲ್ಲಿ ಪಿಎಂಜಿಎಸ್‌ವೈ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಮೋದಿ ಅವರು ಈ ದೇಶದ ಪ್ರಧಾನಿಯಾದ ಮೇಲೆ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲವಾಗಿದೆ. ಸುಭದ್ರ ಆಡಳಿತ ನೀಡುವ ಮೂಲಕ ಇಡೀ ವಿಶ್ವದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.

ಈ ಹಿಂದೆ ಕಾಂಗ್ರೆಸ್‌ನವರು ದೇಶವನ್ನು 70 ವರ್ಷ ಆಳಿದರೂ ಯಾವ ಅಭಿವೃದ್ಧಿಯನ್ನೂ ಮಾಡಲಿಲ್ಲ. ಆದರೆ ಕಾಂಗ್ರೆಸ್‌ ನಾಯಕರು ಮಾತ್ರ ಬೇನಾಯಿ ಆಸ್ತಿ ಗಳಿಸಿಕೊಂಡು ಸಾಕಷ್ಟು ಅಭಿವೃದ್ಧಿಯಾಗಿದ್ದಾರೆ. ಇದೀಗ ನರೇಂದ್ರ ಮೋದಿ ಅವರು 7 ವರ್ಷಗಳಲ್ಲಿ ಇಡೀ ದೇಶವೇ ಸಮಗ್ರ ಅಭಿವೃದ್ಧಿ ಆಗುತ್ತಿರುವುದನ್ನು ಕಂಡು ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲು ಆಗದೆ ಹತಾಶೆಯರಾಗಿ ಇಲ್ಲಇಲ್ಲದ ಆರೋಪ ಮಾಡುತ್ತಿದ್ದಾರೆ. ಇಂತಹ ಪ್ರಧಾನಿಯನ್ನು ಪಡೆದಿರುವುದು ಈ ದೇಶದ ಜನರ ಪುಣ್ಯವಾಗಿದೆ ಎಂದು ಗುಣಗಾನ ಮಾಡಿದರು.

'ಮುಖ್ಯಮಂತ್ರಿಯಾಗುವ ಬಗ್ಗೆ ಕಾಂಗ್ರೆಸ್ಸಿಗರು ಹಗಲುಗನಸು ಕಾಣ್ತಿದ್ದಾರೆ'

ತಾಲೂಕಿನ ಕುಡಗುಂಟಿ ಗ್ರಾಮದಿಂದ ಬಳಗೇರಿ ಮೂಲಕ ಕುಕನೂರಿಗೆ ಹೋಗಲು ಹಾಗೂ ರೈತರ ಜಮೀನುಗಳಿಗೆ ಈ ರಸ್ತೆ ಅತಿ ಹೆಚ್ಚು ಉಪಯುಕ್ತವಾಗಿದ್ದು, ಈ ಭಾಗದ ಜನರ ಬಹುವರ್ಷಗಳ ಬೇಡಿಕೆಯಾಗಿತ್ತು. ಸಂಸದ ಸಂಗಣ್ಣ ಕರಡಿ ಅವರು ಈ ಪಿಎಂಜಿಎಸ್‌ವೈ ಯೋಜನೆಯಡಿ 3.12 ಕೋಟಿ ಅನುದಾನದಲ್ಲಿ ಸುಸಜ್ಜಿತ ರಸ್ತೆಯನ್ನಾಗಿ ನಿರ್ಮಿಸಲು ಇದೀಗ ಕಾಲ ಕೂಡಿಬಂದಿದೆ ಎಂದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಕೊಪ್ಪಳ ಏತ ನೀರಾವರಿ ಯೋಜನೆ ಹಿನ್ನಡೆಗೆ ಮಾಜಿ ಸಚಿವರಾದ ಶಿವರಾಜ ತಂಗಡಗಿ ಹಾಗೂ ಬಸವರಾಜ ರಾಯರಡ್ಡಿ ಅವರ ದಿವ್ಯ ನಿರ್ಲಕ್ಷ್ಯ ಕಾರಣವಾಗಿದೆ. ಇನ್ನೂ ಕೊಪ್ಪಳದಲ್ಲಿ ಉಡಾನ್‌ ಯೋಜನೆ ಸ್ಥಾಪನೆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ನಿಯೋಗ ಕೊಂಡೊಯ್ದು ಮನವಿ ಮಾಡಲಾಗುವುದು. ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಜಿಪಂ ಮಾಜಿ ಉಪಾಧ್ಯಕ್ಷ ಶಿವಶಂಕರರಾವ್‌ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಕೆಂಚವ್ವ ಆರ್‌. ಹಿರೇಮನಿ, ಉಪಾಧ್ಯಕ್ಷ ಶರಣಪ್ಪ ಕುರಿ, ವೀರಣ್ಣ ಹುಬ್ಬಳ್ಳಿ, ವೀರಭದ್ರಪ್ಪ ಆವಾರಿ, ಶಂಭು ಜೋಳದ, ಜಗನ್ನಾಥಗೌಡ ಪಾಟೀಲ, ರಸೂಲಸಾಬ್‌ ದಮ್ಮೂರ, ಬಸನಗೌಡ ತೊಂಡಿಹಾಳ, ಕಳಕಪ್ಪ ಕಂಬಳಿ, ಶಿವಕುಮಾರ ನಾಗಲಾಪುರಮಠ, ಶರಣಪ್ಪ ಇಳಗೇರ, ಶರಣಗೌಡ ವೀರಾಪುರ, ವೆಂಕಟೇಶ ಗಾದಿ, ಸುಧಾಕರ ದೇಸಾಯಿ, ಶಿವಣ್ಣ ವಾದಿ, ಕರಿಬಸಯ್ಯ ಬಿನ್ನಾಳ, ಲಕ್ಷ್ಮಣ ಕಾಳಿ, ಶರಣಕುಮಾರ ಅಮರಗಟ್ಟಿ, ಶರಣಪ್ಪ ಮೇಟಿ ಹಾಗೂ ಪಿಎಂಜಿಎಸ್‌ವೈ ಎಇಇ ಅಶೋಕ ಛಲವಾದಿ ಇದ್ದರು.
 

click me!