
ಬೆಳಗಾವಿ : ಬೆಳಗಾವಿಯ ಶ್ರೀನಗರದಲ್ಲಿ ₹40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಜಿಲ್ಲಾ ಬಾಲಭವನದ ಒಳಾಂಗಣ ಬಾಕ್ಸ್ ಕ್ರಿಕೆಟ್ ಮೈದಾನವನ್ನು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸಿದರು.
ಬಳಿಕ ಮೈದಾನದಲ್ಲಿ ಕ್ರಿಕೆಟ್ ಆಡಿದ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಜನರ ಗಮನ ಸೆಳೆದರು. ಮೊದಲಿಗೆ ಹೆಬ್ಬಾಳಕರ್ ಬೌಲಿಂಗ್ ಮಾಡಿದರೆ, ಸತೀಶ್ ಜಾರಕಿಹೊಳಿ ಬ್ಯಾಟಿಂಗ್ ಮಾಡಿದರು. ನಂತರ, ಮೈದಾನಕ್ಕಿಳಿದ ಶಾಸಕ ಆಸೀಫ್ ಸೇಠ್ ಅವರು ಹೆಬ್ಬಾಳ್ಕರ್ ಎಸೆದ ಬೌಲಿಗೆ ಕ್ಲೀನ್ ಬೋಲ್ಡ್ ಆದರು. ಬಳಿಕ, ಸಚಿವೆ ಹೆಬ್ಬಾಳಕರ್ ಕೂಡ ಬ್ಯಾಟಿಂಗ್ ಮಾಡಿದರು. ಈ ವೇಳೆ, ಸತೀಶ್ ಜಾರಕಿಹೊಳಿ ಕೀಪಿಂಗ್ ಮಾಡಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ ಅವರ ಆಸಕ್ತಿಯಿಂದ ಯೋಜನೆ ರೂಪುಗೊಂಡಿದ್ದು, ಬಾಲಭವನ, ಜಿಲ್ಲಾ ಪಂಚಾಯಿತಿ ಹಾಗೂ ಶಾಸಕ ಆಸೀಫ್ ಸೇಠ್ ಅವರ ಶಾಸಕರ ಅನುದಾನದಿಂದ ಹಣ ಒದಗಿಸಲಾಗಿದೆ ಎಂದು ಹೇಳಿದರು.