
ಬೆಂಗಳೂರು: ನಗರದ ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳನ್ನು ಶುಚಿಗೊಳಿಸಲು ಯಾಂತ್ರಿಕೃತ ಯಂತ್ರಗಳ ಪ್ರಾಯೋಗಿಕ ಬಳಕೆಗೆ ಆಯುಕ್ತ ಪಿ.ಸುನೀಲ್ ಕುಮಾರ್ ಅವರು ಗುರುವಾರ ಚಾಲನೆ ನೀಡಿದರು. ಈ ವೇಳೆ ಯಂತ್ರಗಳನ್ನು ಬಳಸುವ ಕುರಿತು ಪೌರಕಾರ್ಮಿಕರಿಗೆ ಪ್ರಾತ್ಯಕ್ಷಿಕೆ, ಮಾಹಿತಿಯನ್ನು ನೀಡಲಾಯಿತು.
ಸಹಕಾರ ನಗರದಲ್ಲಿ ಯಂತ್ರದ ಉಪಯುಕ್ತತೆಯ ಪರಿಶೀಲನೆ ನಡೆಸಿ ಮಾತನಾಡಿದ ಆಯುಕ್ತರು, ದೈನಂದಿನ ರಸ್ತೆ ಸ್ವಚ್ಛತಾ ಕಾರ್ಯವನ್ನು ಉನ್ನತೀಕರಣಗೊಳಿಸಲು ಹಾಗೂ ಪೌರ ಕಾರ್ಮಿಕರ ಕೆಲಸವನ್ನು ಸರಳೀಕರಣಗೊಳಿಸಲು ಈ ಯಂತ್ರಗಳನ್ನು ಬಳಸಲು ಆರಂಭಿಸಲಾಗಿದೆ. ಕಸಗುಡಿಸುವ ಯಂತ್ರದ ಜೊತೆಗೆ ಬ್ಲೋವರ್ ಮಷೀನ್, ರಸ್ತೆ ಕಸವನ್ನು ಶೇಖರಣೆ ಮಾಡಲು ಟ್ರಾಲಿ ಡಸ್ಟ್ಬಿನ್ಗಳನ್ನು ಪ್ರಾಯೋಗಿಕವಾಗಿ ಇನ್ನು ಮುಂದೆ ಉಪಯೋಗಿಸಲಾಗುತ್ತದೆ. ಪೌರ ಕಾರ್ಮಿಕರ ಸುರಕ್ಷತೆಗಾಗಿ ಟ್ರಾಫಿಕ್ ಕೋನ್ಗಳನ್ನು ಸಹ ಖರೀದಿಸಲಾಗಿದೆ ಎಂದರು.
ಇದನ್ನೂ ಓದಿ: ಮೆಟ್ರೋ ದರ ಏರಿಕೆ ಕೇಂದ್ರ ಸರ್ಕಾರದ ಆದೇಶ, ರಾಜ್ಯದ ಪಾತ್ರವಿಲ್ಲ; ಬಿಜೆಪಿ ಮೊಸಳೆ ಕಣ್ಣೀರು ನಿಲ್ಲಿಸಲಿ- ಸಿದ್ದರಾಮಯ್ಯ
ಹೊಸ ಯಂತ್ರಗಳನ್ನು ಬಳಸಿಕೊಂಡು ಕಾರ್ಮಿಕರು ಇನ್ನಷ್ಟು ಪರಿಣಾಮಕಾರಿಯಾಗಿ ಸ್ವಚ್ಛತಾ ಕಾರ್ಯ ನಡೆಸಬೇಕು. ಇದರ ಸಾಧಕ ಬಾಧಕಗಳನ್ನು ಗಮನಿಸಿ ಇನ್ನಷ್ಟು ಯಂತ್ರಗಳನ್ನು ಖರೀದಿಸಲು ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಸಾರ್ವಜನಿಕರಿಂದ ಕಸ ನಿರ್ವಹಣೆ ಬಗ್ಗೆ ಯಾವುದೇ ದೂರು ಬಾರದಂತೆ ಕೆಲಸ ನಿರ್ವಹಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಸುನೀಲ್ ಕುಮಾರ್ ಹೇಳಿದರು.
ಇದನ್ನೂ ಓದಿ: ಮೆಟ್ರೋ ದರ ಏರಿಸಿದ್ದು ನಾವಲ್ಲ, ಕೇಂದ್ರ : ಸಿಎಂ ಸಿದ್ದರಾಮಯ್ಯ
ರಸ್ತೆಗಳನ್ನು ಸ್ವಚ್ಛಗೊಳಿಸಲು 33 ರಸ್ತೆ ಗುಡಿಸುವ ಯಂತ್ರಗಳು, 14 ಬ್ಲೋವರ್ ಮಷೀನ್, 35 ಚಕ್ರ ಸಹಿತ ಡಸ್ಟ್ ಬಿನ್ ಹಾಗೂ 23 ಜೊತೆ ಟ್ರಾಫಿಕ್ ಕೋನ್ಸ್ಗಳನ್ನು ₹10 ಲಕ್ಷ ವೆಚ್ಚದಲ್ಲಿ ಖರೀದಿಸಲಾಗಿದೆ.
ಪೌರಕಾರ್ಮಿಕರು ಕರ್ತವ್ಯದ ವೇಳೆಯಲ್ಲಿ ಸಮೀಪದಲ್ಲಿ ಸಾರ್ವಜನಿಕ ಶೌಚಾಲಯ ಲಭ್ಯವಿಲ್ಲದಿದ್ದರೆ ಹೊಟೇಲ್ಗಳಲ್ಲಿನ ಶೌಚಗೃಹ ಬಳಸಬಹುದು. ಈಗಾಗಲೇ ಹೊಟೇಲ್ ಮಾಲೀಕರ ಸಭೆ ನಡೆಸಿ ಶೌಚಗೃಹ ಬಳಸಲು ಅವಕಾಶ ನೀಡುವಂತೆ ಕೋರಲಾಗಿದೆ. ಆದರೂ, ಕೆಲವೆಡೆ ಅವಕಾಶ ನೀಡುತ್ತಿಲ್ಲ ಎಂಬ ವಿಷಯ ಗಮನಕ್ಕೆ ಬಂದಿದೆ. ಈ ವಿಷಯದಲ್ಲಿ ಯಾವುದೇ ತೊಂದರೆ ಉಂಟಾದರೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬಹುದು ಎಂದು ಸುನೀಲ್ ಕುಮಾರ್ ತಿಳಿಸಿದರು.