ಉತ್ತರಕನ್ನಡ: ಗೋವಾದಿಂದ ಕರ್ನಾಟಕದಲ್ಲೂ ಮಿಷನ್ ರೇಬಿಸ್..!

By Girish GoudarFirst Published Aug 17, 2023, 1:30 AM IST
Highlights

ಉತ್ತರಕನ್ನಡ ಜಿಲ್ಲೆಯ ಗೋವಾ ಗಡಿ ತಾಲೂಕುಗಳಾದ ಕಾರವಾರ, ಜೊಯಿಡಾದಲ್ಲಿ ಬೀದಿ ನಾಯಿಗಳನ್ನು ಹಿಡಿಯುವ ಅಥವಾ ಅವುಗಳಿಗೆ ಲಸಿಕೆ ನೀಡುವ ಕಾರ್ಯವೇ ನಡೆದಿಲ್ಲ. ಹೀಗಾಗಿ ದೇಶದಲ್ಲೇ ರೇಬಿಸ್ ಮುಕ್ತ ರಾಜ್ಯ ವಾಗಿರುವ ಗೋವಾ ಇದೀಗ ತನ್ನ ಸುತ್ತಲೂ ಇರುವ ಕರ್ನಾಟಕದ ಗಡಿ ತಾಲೂಕುಗಳಲ್ಲೂ "ಮಿಷನ್ ರೇಬಿಸ್" ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. 

ಉತ್ತರಕನ್ನಡ(ಆ.17): ರಾಜ್ಯದಲ್ಲಿ ಬೀದಿ ನಾಯಿಗಳ ಕಾಟದಿಂದ ಅದೆಷ್ಟೋ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೀದಿ ನಾಯಿಗಳನ್ನು ಹಿಡಿದು ಸಂತಾನ ಹರಣ ಚಿಕಿತ್ಸೆ ಜೊತೆ ರೇಬಿಸ್ ಚುಚ್ಚುಮದ್ದು ನೀಡುವಂತೆ ಹಲವು ವರ್ಷಗಳಿಂದ ಜನರು ಸರಕಾರವನ್ನು ಆಗ್ರಹಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕೆಲವು ಜಿಲ್ಲೆಗಳಲ್ಲಿ ಮಾತ್ರ ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. 

ಆದ್ರೆ ಉತ್ತರಕನ್ನಡ ಜಿಲ್ಲೆಯ ಗೋವಾ ಗಡಿ ತಾಲೂಕುಗಳಾದ ಕಾರವಾರ, ಜೊಯಿಡಾದಲ್ಲಿ ಬೀದಿ ನಾಯಿಗಳನ್ನು ಹಿಡಿಯುವ ಅಥವಾ ಅವುಗಳಿಗೆ ಲಸಿಕೆ ನೀಡುವ ಕಾರ್ಯವೇ ನಡೆದಿಲ್ಲ. ಹೀಗಾಗಿ ದೇಶದಲ್ಲೇ ರೇಬಿಸ್ ಮುಕ್ತ ರಾಜ್ಯ ವಾಗಿರುವ ಗೋವಾ ಇದೀಗ ತನ್ನ ಸುತ್ತಲೂ ಇರುವ ಕರ್ನಾಟಕದ ಗಡಿ ತಾಲೂಕುಗಳಲ್ಲೂ "ಮಿಷನ್ ರೇಬಿಸ್" ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. 

ಮಂಗಳಮುಖಿ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ಪುರುಷ ; ಮಂಗಳಮುಖಿಯರಿಂದಲೇ ಗೂಸಾ!

ಕಾರವಾರದಲ್ಲಿ ಈವರೆಗೆ 24ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ರೇಬಿಸ್ ಇರುವುದು ಗೋವಾ ಸರ್ಕಾರ ಇಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಪತ್ತೆಯಾಗಿದೆ. ಹೀಗಾಗಿ ತನ್ನ ಅನುದಾನ ಬಳಸಿ ಗಡಿ ಭಾಗದ ತಾಲೂಕುಗಳಾದ ಕಾರವಾರ,ಜೋಯಿಡಾ ತಾಲೂಕಿನಲ್ಲಿ ಈ ಯೋಜನೆ ಜಾರಿ ಮಾಡಿದ್ದು, ಕಾರವಾರದಲ್ಲಿ ಕಳೆದ ಎರಡು ವಾರದಿಂದ ಗೋವಾ ಸರ್ಕಾರದ ಮಿಷನ್ ರೇಬಿಸ್ ತಂಡ 2500ಕ್ಕೂ ಹೆಚ್ಚು ಶ್ವಾನಗಳಿಗೆ ರೇಬಿಸ್ ಚುಚ್ಚುಮದ್ದು ನೀಡಿದೆ. ಪಣಜಿಯಿಂದ ಕಾರ್ಯಾಚರಣೆ ನಡೆಸುವ ಮಿಷನ್ ರೇಬಿಸ್ ತಂಡ ಪ್ರತೀ ದಿನ ಕಾರವಾರ ತಾಲೂಕಿಗೆ ಆಗಮಿಸುತ್ತಿದ್ದು, ಎರಡು ತಂಡಗಳು ಇಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. 

ಕೇವಲ ಉಚಿತ ಚುಚ್ಚುಮದ್ದು ನೀಡುವ ಜತೆಗೆ 24×7 ಹೆಲ್ಪ್ ಲೈನ್ ಸಹ ತೆರೆದಿದ್ದು ಶ್ವಾನಗಳು, ಹಸುಗಳು, ಬೆಕ್ಕುಗಳಿಗೆ ತಮ್ಮ ಅನುದಾನದಲ್ಲಿ  ಉಚಿತ ಚಿಕಿತ್ಸೆ ನೀಡುತ್ತಿದೆ. ಗೋವಾ ರಾಜ್ಯದ ಗಡಿ ತಾಲೂಕಾದ ಕಾರವಾರದಲ್ಲಿ ಹತ್ತುಸಾವಿರಕ್ಕೂ ಹೆಚ್ಚು ಶ್ವಾನಗಳಿವೆ. ಇವುಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಅಧಿಕ. ಇತ್ತೀಚೆಗೆ ಬೀದಿ ನಾಯಿಗಳ ಕಡಿತವೂ ಹೆಚ್ಚಾಗಿದ್ದು, ಈ ಹಿಂದೆ ಬೀದಿ ನಾಯಿ ಕಡಿತಕ್ಕೆ ಹಸುವೊಂದು ರೇಬಿಸ್ ಬಂದು ಸಾವನ್ನಪ್ಪಿತ್ತು. ಇನ್ನು ಸ್ಥಳೀಯ ಆಡಳಿತ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದರೂ ಯಾವುದೇ ಕಾರ್ಯಾಚರಣೆಗೆ ಇಳಿದಿಲ್ಲ. ಪಶುಸಂಗೋಪನಾ ಇಲಾಖೆಯಲ್ಲಿ ರೇಬಿಸ್ ಸೊಂಕು ಎಷ್ಟು ಹಬ್ಬಿವೆ ಎಂಬ ಮಾಹಿತಿ ಕೂಡಾ ಇಲ್ಲ. ರೋಗ ಪತ್ತೆಗೆ ಲ್ಯಾಬ್ ವ್ಯವಸ್ಥೆ, ಸಂತಾನ ಹರಣ ಚಿಕಿತ್ಸೆ, ರೇಬಿಸ್ ಚುಚ್ಚುಮದ್ದು ನೀಡಲು ವೈದ್ಯರ ಕೊರತೆ ಜತೆ ಶ್ವಾನಗಳನ್ನು ಹಿಡಿಯಲು ಸಹ ಸಿಬ್ಬಂದಿಗಳಿಲ್ಲ.

ಕಾರವಾರ, ಜೊಯಿಡಾವನ್ನು ತಮ್ಮ ರಾಜ್ಯಕ್ಕೆ ಸೇರಿಸಬೇಕು ಎಂದು‌ ಸದಾ ಗಡಿ ಕ್ಯಾತೆ ತೆಗೆಯುತ್ತಿರುವ ಗೋವಾ ಸರ್ಕಾರ ಇದೀಗ ಗಡಿಭಾಗದಲ್ಲಿರುವ ಪಕ್ಕದ ರಾಜ್ಯದ ತಾಲೂಕುಗಳಲ್ಲೂ ಮಿಷನ್ ರೇಬೀಸ್ ಜಾರಿಗೊಳಿಸುತ್ತಿರುವುದಕ್ಕೆ ಗಡಿ ಭಾಗದ ಜನರು ಗೋವಾ ಸರ್ಕಾರವನ್ನು ಶ್ಲಾಘಿಸಲಾರಂಭಿಸಿದ್ದಾರೆ.

click me!