Davanagere: ರೈತನ ಮೇಲಿನ ದ್ವೇಷಕ್ಕೆ 780 ಅಡಿಕೆ ಗಿಡ ಕತ್ತರಿಸಿದ ದುಷ್ಕರ್ಮಿಗಳು

By Sathish Kumar KHFirst Published Aug 6, 2023, 11:28 AM IST
Highlights

ರೈತನ ಮೇಲಿನ ಹಳೆಯ ದ್ವೇಷಕ್ಕೆ ಆತ ಮೂರ್ನಾಲ್ಕು ವರ್ಷಗಳಿಂದ ಬೆಳೆದಿದ್ದ 780 ಅಡಿಕೆ ಗಿಡಿಗಳನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಕತ್ತರಿಸಿ ಬೀಸಾಡಿದ್ದಾರೆ.

ದಾವಣಗೆರೆ (ಆ.06): ದಾವಣಗೆರೆ ಜಿಲ್ಲೆಯ ಮುದಹದಡಿ ಗ್ರಾಮದಲ್ಲಿ ರೈತನ ಮೇಲಿದ್ದ ವೈಯಕ್ತಿಕ ದ್ವೇಷಕ್ಕಾಗಿ ಆತನು ಬೆಳೆದ 780ಕ್ಕೂ ಹೆಚ್ಚಿನ ಅಡಿಕೆ ಮರಗಳನ್ನು ಕಿಡಿಗೇಡಿಗಳು ಕತ್ತರಿಸಿ ಹಾಕಿದ್ದಾರೆ. ಈ ಮೂಲಕ ರೈತನು ಕಳೆದ ಮೂರ್ನಾಲ್ಕು ವರ್ಷಗಳಿಂದ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದಿದ್ದ ಅಡಿಕೆ ಮರಗಳನ್ನು ಕತ್ತರಿಸುವ ಮೂಲಕ ರೈತನ ಜೀವನಕ್ಕೇ ಕೊಳ್ಳಿ ಇಟ್ಟಿದ್ದಾನೆ.

ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಯಾವುದೇ ದ್ವೇಷ ವೈಷಮ್ಯಗಳಿದ್ದರೂ ಪರಸ್ಪರ ಹಲ್ಲೆ, ಜಗಳ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ, ಆಸ್ತಿ ಹಾನಿ ಮಾಡುವ ಪ್ರಕರಣಗಳು ಕಂಡುಬರುತ್ತಿರಲಿಲ್ಲ. ಆದರೆ, ಇತ್ತೀಚಿನ ಕೆಲವು ದಿನಗಳಲ್ಲಿ ವೈಯಕ್ತಿಕ ದ್ವೇಷಕ್ಕಾಗಿ ಹೊಲದಲ್ಲಿ ಬೆಳೆದ ಬೆಳೆಗಳನ್ನು ಹಾನಿ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯಲ್ಲಿ ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಟೊಮೆಟೊ ಬೆಳೆ ಇನ್ನೇನು ಫಸಲು ಬಿಟ್ಟು ಕೊಯ್ಲಿಗೆ ಬಂದಿದ್ದ ಹಂತದಲ್ಲಿ ಬುಡ ಸಮೇತ ಕಿತ್ತುಹಾಕಿದ್ದರು. ಈಗ ಇದೇ ರೀತಿಯ ಮತ್ತೊಂದು ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

ಟೊಮೆಟೊ ಬೆಳೆದ ರೈತನ ಅಭಿವೃದ್ಧಿ ಸಹಿಸದೇ, ಫಲಬಿಟ್ಟ ಟೊಮೆಟೊ ಗಿಡ ಕತ್ತರಿಸಿದ ಕಿಡಿಗೇಡಿಗಳು

ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯ ಮುದಹದಡಿ ಗ್ರಾಮದಲ್ಲಿ ಕಿಡಿಗೇಡಿಗಳ ಕುಕೃತ್ಯವು ನಡೆದಿದೆ. ಕಳೆದ ಮೂರು ವರ್ಷಗಳಿಂದ ಅಡಿಕೆ ಸಸಿ ನಾಟಿ ಮಾಡಿ, ಪಾಲನೆ ಪೋಷಣೆ ಮಾಡಿದ್ದ ರೈತ ತಾನು ಇಡೀ ಗ್ರಾಮಕ್ಕೆ ಮಾದರಿ ರೈತನಾಗಬೇಕು ಎಂದು ನಿರೀಕ್ಷೆ ಮಾಡಿದ್ದನು. ಇನ್ನು ಮೂರು ವರ್ಷಗಳು ಕಳೆದರೆ ಅಡಿಕೆ ಗಿಡಗಳು ಮರವಾಗಿ ಬೆಳೆದು ಫಸಲು ಬಿಡುಯತ್ತಿದ್ದವು. ಆದರೆ, ರೈತನ ಅಭಿವೃದ್ಧಿಯನ್ನು ಸಹಿಸದ ಕಿಡಿಗೇಡಿಗಳು ರಾತ್ರಿ ವೇಳೆ ಅಡಿಕೆ ತೋಟಕ್ಕೆ ನುಗ್ಗಿ ಒಂದು ಎಕರೆ ಪ್ರದೇಶದಲ್ಲಿನ ಅಡಿಕೆ ಗಿಡಗಳನ್ನು ಕತ್ತರಸಿ ಬೀಸಾಡಿದ್ದಾರೆ. 

ಮುದಹದಡಿ ಗ್ರಾಮದ ರೈತರ ತನ್ನ ಒಂದು ಎಕರೆ ಪ್ರದೇಶದಲ್ಲಿ 780 ಕ್ಕೂ ಹೆಚ್ಚು ಅಡಿಕೆ ಮರಗಳನ್ನ ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ರೈತ ಬೀರೇಶ ಎಂಬ ರೈತರಿಗೆ ಸೇರಿ ಅಡಿಕೆ ತೋಟವಾಗಿದ್ದು, ಸುಮಾರು ಮೂರರಿಂದ ನಾಲ್ಕು ವರ್ಷದ ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದರಿಂದ ಆಕಾಶವೇ ಕಳಚಿ ಬಿದ್ದಂತಾಗಿದೆ. ಅಡಿಕೆ ಬೆಳೆಯನ್ನು ನಾಟಿ ಮಾಡಿ ಭಾರಿ ಪ್ರಮಾಣದಲ್ಲಿ ನಿರೀಕ್ಷೆ ಇಟ್ಟುಕೊಂಡಿದ್ದನು. ಇನ್ನು ಮೂರು ವರ್ಷಗಳ ಕಾಲ ಅಡಿಕೆ ಗಿಡಗಳನ್ನು ನಾಟಿ ಮಾಡಿ ಬೆಳೆಸಲು ಲಕ್ಷಾಂತರ ರೂ, ಹಣವನ್ನು ಖರ್ಚು ಮಾಡಿದ್ದನು. ಆದರೆ, ಈಗ ಬಾಳಿಗೆ ಭರವಸೆಯಾಗಿದ್ದ ಅಡಿಕೆ ಮರಗಳನ್ನೇ ಕಿಡಿಗೇಡಿಗಳು ಕತ್ತರಿಸಿ ಬೀಸಾಡಿದ್ದರಿಂದ ಇಡೀ ಬದುಕು ಕುಸಿದು ಬಿದ್ದಂತಾಗಿದೆ. 

ಒಂದೂವರೆ ಎಕರೆ ಟೊಮೆಟೊ ಬೆಳೆ ನಾಶ ಮಾಡಿದ ಕಿಡಿಗೇಡಿಗಳು: ಅನ್ನದಾತ ಕಣ್ಣೀರು

ಇನ್ನು ಯಾರೋ ತಮ್ಮ ಗ್ರಾಮದ ಕಿಡಿಗೇಡಿಗಳು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಅಡಿಕೆ ಗಿಡಗಳನ್ನು ಕತ್ತರಿಸಿ ಬೀಸಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ಥ ರೈತ ಬೀರೇಶ ಸ್ಥಳೀಯ ಹದಡಿ ಪೊಲೀಸ್‌ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಿಡಿಗೇಡಿಗಳಿಗೆ ಬಲೆ ಬೀಸಿದ್ದಾರೆ. 

click me!