ವಿಶ್ವನಾಥ್‌ಗೂ ಮಂತ್ರಿ ಮಾಡಲು ಒತ್ತಾಯಿಸುತ್ತೇವೆ: ಆರ್‌.ಶಂಕರ್‌

By Kannadaprabha NewsFirst Published Jan 16, 2021, 10:16 AM IST
Highlights

ಈಗಿನ ಸರ್ಕಾರದಲ್ಲಿ ಕುರುಬ ಸಮಾಜದ ನಾಲ್ವರು ಸಚಿವರಿದ್ದೇವೆ. ವಿಶ್ವನಾಥ್‌ ಅವರಿಗೂ ಅವಕಾಶ ಸಿಗಬೇಕಿತ್ತು. ಮುಂದೆ ಅವರೂ ಸಚಿವರಾಗುತ್ತಾರೆಂಬ ಭರವಸೆಯಿದೆ| ಮಗು ಅತ್ತರೆ ಮಾತ್ರ ತಾಯಿ ಹಾಲು ಕೊಡುತ್ತದೆ. ಅದೇ ರೀತಿ ನಮ್ಮ ಹಕ್ಕನ್ನು ಪ್ರತಿಪಾದಿಸಿದರೆ ನ್ಯಾಯ ಸಿಗುತ್ತದೆ: ಆರ್‌. ಶಂಕರ್‌| 

ಹಾವೇರಿ(ಜ.16): ಒಂದು ಸರ್ಕಾರವನ್ನು ತೆಗೆದು ಈ ಸರ್ಕಾರ ಬರಲು ಕಾರಣರಾದವರು ನಾವು. ಯಡಿಯೂರಪ್ಪನವರು ನಮಗೆ ಸಚಿವ ಸ್ಥಾನ ನೀಡಿದ್ದಾರೆ. ಎಚ್‌.ವಿಶ್ವನಾಥ್‌ ಅವರಿಗೂ ಇಂದಲ್ಲ ನಾಳೆ ಅವಕಾಶ ಸಿಕ್ಕೇ ಸಿಗುತ್ತದೆ. ಈ ಬಗ್ಗೆ ನಾವೂ ಒತ್ತಾಯಿಸುತ್ತೇವೆ ಎಂದು ಸಚಿವ ಆರ್‌.ಶಂಕರ್‌ ಹೇಳಿದ್ದಾರೆ. 

ಕಾಗಿನೆಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕುರುಬರ ಎಸ್ಟಿ ಮೀಸಲಾತಿ ಪಾದಯಾತ್ರೆ ಚಾಲನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಿನ ಸರ್ಕಾರದಲ್ಲಿ ಕುರುಬ ಸಮಾಜದ ನಾಲ್ವರು ಸಚಿವರಿದ್ದೇವೆ. ವಿಶ್ವನಾಥ್‌ ಅವರಿಗೂ ಅವಕಾಶ ಸಿಗಬೇಕಿತ್ತು. ಮುಂದೆ ಅವರೂ ಸಚಿವರಾಗುತ್ತಾರೆಂಬ ಭರವಸೆಯಿದೆ. ಮಗು ಅತ್ತರೆ ಮಾತ್ರ ತಾಯಿ ಹಾಲು ಕೊಡುತ್ತದೆ. ಅದೇ ರೀತಿ ನಮ್ಮ ಹಕ್ಕನ್ನು ಪ್ರತಿಪಾದಿಸಿದರೆ ನ್ಯಾಯ ಸಿಗುತ್ತದೆ. ನಮ್ಮ ಈ ಹೋರಾಟ ಯಾರ ವಿರುದ್ಧವೂ ಅಲ್ಲ. ಜನಪ್ರತಿನಿಧಿಗಳಾದ ನಾವು ಎಲ್ಲ ಸಮಾಜದವರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕು. ಯಾವುದೇ ಒಂದು ಸಮಾಜದಿಂದ ನಾವು ಗೆಲ್ಲಲು ಸಾಧ್ಯವಿಲ್ಲ. ಆದರೆ, ಇದು ನಮ್ಮ ಸಮಾಜಕ್ಕೆ ಸಿಗಲೇಬೇಕಿದ್ದ ಮೀಸಲಾತಿಗಾಗಿ ಹೋರಾಟವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಹಿರಂಗ ಹೇಳಿಕೆ ನೀಡುತ್ತಿರೋ ಅಸಮಾಧಾನಿತ ಶಾಸಕರಿಗೆ ಬಿಜೆಪಿ ಸಾರಥಿ ಪರೋಕ್ಷ ಎಚ್ಚರಿಕೆ

ಸಮಾಜದ ಮತ್ತೋರ್ವ ಸಚಿವ ಎಂಟಿಬಿ ನಾಗರಾಜ ಮಾತನಾಡಿ, ಅನೇಕ ವರ್ಷಗಳಿಂದಲೂ ಕುರುಬ ಸಮಾಜಕ್ಕೆ ಮೀಸಲಾತಿಗಾಗಿ ಹೋರಾಟ ನಡೆಸಿದರೂ ನ್ಯಾಯ ಸಿಕ್ಕಿಲ್ಲ. ಈಗ ಪಕ್ಷ ಭೇದ ಮರೆತು ಸಮಾಜದ ಹಿತಕ್ಕಾಗಿ ಒಂದಾಗಿದ್ದೇವೆ. ಎಸ್ಟಿಮೀಸಲಾತಿ ಪಡೆಯುವುದು ನಿಶ್ಚಿತ ಎಂದು ಹೇಳಿದರು.
 

click me!