ನನಗೆ ನಾನೇ ಗಾಡ್‌ಫಾದರ್‌ : ನಾನು ಏಕಾಂಗಿ ಎಂದ ಅಬಕಾರಿ ಸಚಿವ

By Kannadaprabha NewsFirst Published Nov 3, 2020, 11:15 AM IST
Highlights

ನನಗೆ ಯಾರೂ ವಿರೋಧಿಗಳಿಲ್ಲ. ನನಗೆ ನಾನೇ ಗಾಡ್ ಫಾದರ್ . ನಾನು ಏಕಾಂಗಿ ಕೂಡ ಎಂದು ಸಂಸದ ಮುನಿಸ್ವಾಮಿ ಹೇಳಿದ್ದಾರೆ. 

ಕೋಲಾರ (ನ.03):  ಮುಳಬಾಗಲು ಕ್ಷೇತ್ರದಲ್ಲಿ ಇನ್ನೂ ಮುಂದೆ ನನಗೇ ಯಾರು ಗಾಡ್‌ಫಾದರ್‌ ಇಲ್ಲ. ಎಲ್ಲದಕ್ಕೂ ನಾನು ಏಕಾಂಗಿ ಎಂದು ಸಚಿವ ಎಚ್‌.ನಾಗೇಶ್‌ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಹಾಗೂ ಸಂಸದ ಎಸ್‌.ಮುನಿಸ್ವಾಮಿ ಅವರಿಗೆ ಟಾಂಗ್‌ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಳಬಾಗಲು ನಗರಸಭೆ ಚುನಾವಣೆ ಸಂದರ್ಭದಲ್ಲಿ ಮುಖಂಡರೆನಿಸಿಕೊಂಡವರು ಸಾಮಾನ್ಯ ಕಾರ್ಯಕರ್ತನಿಗಿಂತ ಕೀಳಾಗಿ ನಡೆದುಕೊಂಡಿದ್ದು ಶೋಭೆ ತರುವಂತಹದ್ದಲ್ಲ. ಇನ್ನು ಕೆಲವರು ನನಗೆ ಚಾಲೆಂಜ್‌ ಮಾಡಿದ್ರು, ನನಗೆ ಸದಸ್ಯರಿಲ್ಲವೆಂದು ಯೂಟ್ಯೂಬ್‌ಗಳಲ್ಲಿ ವಿಡಿಯೋ ಹರಿಬಿಟ್ಟರು. ನಾನು ದೇವರ ಮೇಲೆ ಭಾರ ಹಾಕಿ ಸುಮ್ಮನೆ ಕುಳಿತಿದ್ದೆ. ಕೊನೆಗೆ ಚುನಾವಣೆಯಲ್ಲಿ ಏನಾಯಿತೆಂದು ನಿಮಗೇ ತಿಳಿದಿದೆ ಎಂದರು

ಕ್ಷೇತ್ರದ ಮುಖಂಡರ ಬೆಂಬಲವಿದೆ

ತಾಲೂಕಿನಲ್ಲಿ ಬೇರೆಯವರಿಗೆ ಚುಕ್ಕಾಣಿ ನೀಡಿ ವ್ಯವಸ್ಥೆ ಕೆಟ್ಟುಹೋಗಿದೆ, ನೀವು ಬಂದು ಸರಿ ಮಾಡಿದ್ದೀರಿ, ಮತ್ತೆ ಹಿಂದಕ್ಕೆ ಹೋಗಬಾರದೆಂದು ಕ್ಷೇತ್ರದ ಎಲ್ಲ ಮುಖಂಡರು ನನಗೆ ಸಾಥ್‌ ನೀಡುತ್ತಿದ್ದಾರೆ. ನನ್ನ ಬೆಂಬಲಿತ ಅಭ್ಯರ್ಥಿ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಜೆಡಿಎಸ್‌ಗೆ 18 ಸದಸ್ಯರ ಬೆಂಬಲಕ್ಕೆ ನಾನು 7 ಸದಸ್ಯರನ್ನು ನೀಡಿದ್ದೇನೆ. ಎದುರಾಳಿ ಬೇರೆ ರೀತಿ ಹೊಂದಾಣಿಕೆ ಮಾಡಿಕೊಂಡು ಬಂದಿದ್ದರು. ನಾನು ಈ ಹೊಂದಾಣಿಕೆ ಮಾಡಿಕೊಂಡು ಗೆಲುವು ಸಾಧಿಸಿದ್ದೇವೆ. ಯಾರ ಯಾರ ಯೋಗ್ಯತೆ ಏನು, ಬಣ್ಣ, ಗುಣ, ವರ್ತನೆ ಏನು ಎಂದು ಗೊತ್ತಾಗಿದೆ ಎಂದರು

ಜೆಡಿಎಸ್ ಪಕ್ಷ ತೊರೆಯಲು ನಿರ್ಧರಿಸಿದ ಹಿರಿಯ ಮುಖಂಡ : ಶೀಘ್ರ ಗುಡ್ ಬೈ ...

ವಿಧಾನಸಭೆ ಚುನಾವಣೆಯಲ್ಲಿ ಗೆದ್ದೆ, ನಾನೇನು ಮಗು ಅಲ್ಲ, ಕಿವಿ ಮೇಲೆ ಹೂ ಇಟ್ಟುಕೊಂಡಿಲ್ಲ.ಅವರು (ಕೊತ್ತೂರು ಮಂಜುನಾಥ್‌)ನನ್ನನ್ನು ಕ್ಷೇತ್ರಕ್ಕೆ ಕರೆದುಕೊಂಡು ಬಂದರು ಅಂತ ಎರಡು ವರ್ಷ ಬಿಟ್ಟೆ, ನನಗೆ ಏನೂ ಹೇಳದೆ ಸಭೆ, ಸಮಿತಿಗಳನ್ನು ಅವರೇ ಮಾಡೋದು, ಶಾಸಕರಾಗಿ ನಿಮ್ಮ ರೋಲ್‌ ಇಲ್ವಾ ಎಂದು ಜನ ಕೇಳ್ತಿದ್ರು. ಸಚಿವನಾದ ಮೇಲೂ ಹಾಗೇ ಮಾಡಿದ್ರು, ನನಗೆ ಸಹಿಸೋಕೆ ಆಗಲಿಲ್ಲ, ಮಕ್ಕಳನ್ನು ಬೆಳೆಸುವಾಗ ಹಾಲು ನೀಡಬೇಕು ನಿಜ. ಆದರೆ ಕೊನೆಯವರೆಗೂ ಹಾಲು ಕುಡಿಸಿಕೊಂಡೇ ತೊಂದರೆ ನೀಡಿದರೆ ಹೇಗೆ ಎಂದು ಪ್ರಶ್ನಿಸಿದರು

ಮಂತ್ರಿಯಾಗಿ ನನಗೆ ಸ್ಥಾನಮಾನ ಇದೆ, ಮುನಿಸ್ವಾಮಿ ನನಗೆ ಸಂಬಂಧಿಕರು, ಸಹೋದರರು, ಚಿಕ್ಕವರು, ಅದಕ್ಕಾಗಿ ಕ್ಷಮಿಸಿಕೊಂಡು ಹೋಗುತ್ತಿದ್ದೇವೆ. ಇವರಿಗೂ ಒಂದು ವರ್ಷ ನೀಡಿದ್ದೇನೆ. ಇನ್ನೂ ಸ್ವಲ್ಪ ದಿನ ಬಿಟ್ಟು ನೋಡಿ ಮತ್ತೆ ನನ್ನದೇ ಆಟ ಶುರು ಮಾಡ್ತೀನಿ ಎಂದು ಹೇಳಿದರು.

click me!