ಮುಸ್ಲಿಂರನ್ನು ಕಾಂಗ್ರೆಸ್‌ ಕೇವಲ ವೋಟ್‌ ಬ್ಯಾಂಕ್‌ಗೆ ಬಳಸಿಕೊಂಡಿದೆ: ಈಶ್ವರಪ್ಪ

By Kannadaprabha NewsFirst Published Oct 10, 2021, 1:01 PM IST
Highlights

* ಬಿಜೆಪಿ ಟೀಕಿಸುವುದನ್ನೇ ಒಂದು ಉದ್ಯೋಗವನ್ನಾಗಿಸಿಕೊಂಡ ಕಾಂಗ್ರೆಸ್‌ ನಾಯಕರು
* ಆರ್‌ಎಸ್‌ಎಸ್‌ ಇರಲಿಲ್ಲ ಎಂದರೆ ನಮ್ಮ ದೇಶವೂ ಏನೇನೋ ಆಗುತ್ತಿತ್ತು
* ದೇಶವನ್ನು ಉಳಿಸುವ ನಿಟ್ಟಿನಲ್ಲಿ ಹಿಂದುಳಿದ ವರ್ಗದವರು ಬಿಜೆಪಿಯನ್ನು ಬೆಂಬಲಿಸಬೇಕು

ಗದಗ(ಅ.10): ಕಾಂಗ್ರೆಸ್‌(Congress) ಪಕ್ಷ ಹಲವಾರು ವರ್ಷಗಳ ಕಾಲ ಮುಸ್ಲಿಂರನ್ನು ವೋಟ್‌ ಬ್ಯಾಂಕ್‌ನ್ನಾಗಿ(Vote Bank) ಮಾಡಿಕೊಂಡು ಅಧಿಕಾರ ನಡೆಸಿದ್ದೇ ಸಾಧನೆಯಾಗಿದ್ದು, ಅವರು ಅಲ್ಪ ಸಂಖ್ಯಾತರ ಅಲ್ಪ ಏಳ್ಗೆಯನ್ನು ಮಾಡಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ(KS Eshwarappa) ಆರೋಪಿಸಿದ್ದಾರೆ. 

ಅವರು ಶನಿವಾರ ಇಲ್ಲಿನ ವಿಠಲಾರೂಢ ಮಂದಿರದಲ್ಲಿ ಬಿಜೆಪಿ(BJP) ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು. ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರನ್ನು ಕಾಂಗ್ರೆಸ್‌ ತನ್ನ ಅಧಿಕಾರಕ್ಕೆ ಬರಲು ಮಾತ್ರ ಬಳಕೆ ಮಾಡಿಕೊಂಡಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಪ್ರಧಾನಿ ಮೋದಿ(Narendra Modi) ನೇತೃತ್ವದ ಕೇಂದ್ರ ಸರಕಾರ ಎಲ್ಲ ಶೋಷಿತ ಸಮುದಾಯಗಳಿಗೆ ಆದ್ಯತೆ ನೀಡುತ್ತಲೇ ಬಂದಿದ್ದು, ಕೇಂದ್ರ ಮಂತ್ರಿ ಮಂಡಲದಲ್ಲಿ ಎಷ್ಟು ಜನರಿಗೆ ಅವಕಾಶ ನೀಡಿದ್ದಾರೆ ಎನ್ನುವುದನ್ನು ಟೀಕೆ ಮಾಡುವ ಕಾಂಗ್ರೆಸ್‌ ಪಕ್ಷದವರು ಗಮನಿಸಬೇಕು. ಇದರೊಟ್ಟಿಗೆ ಕೇಂದ್ರ ಸರಕಾರದ ಯೋಜನೆಗಳೇ ಅದಕ್ಕೆ ಸಾಕ್ಷಿಯಾಗಿವೆ ಎಂದರು.

ಕೇಂದ್ರ ಸರಕಾರ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ(Reservation) ಶೇ.27ಕ್ಕೆ ಹೆಚ್ಚಿಸಿರುವುದು ಮೋದಿ ಸರಕಾರದ ಐತಿಹಾಸಿಕ ನಿರ್ಧಾರವಾಗಿದೆ, ಅಹಿಂದ ಸಮುದಾಯದ ಜನರನ್ನು ಕಾಂಗ್ರೆಸ್‌ ಮತಕ್ಕಾಗಿ ದುರುಪಯೋಗ ಮಾಡಿಕೊಂಡಿದೆ ಹೊರತು, ಅವರ ಉದ್ಧಾರಕ್ಕಾಗಿ ಏನೇನೂ ಮಾಡಿಲ್ಲ. ಆದರೆ ಕೆಲ ಕಾಂಗ್ರೆಸ್‌ ನಾಯಕರು ಅನಗತ್ಯವಾಗಿ ಬಿಜೆಪಿಯನ್ನು ಟೀಕಿಸುವುದನ್ನೇ ಒಂದು ಉದ್ಯೋಗವನ್ನಾಗಿಸಿಕೊಂಡಿದ್ದಾರೆ. ಆದರೆ ಬಿಜೆಪಿ ಕಾರ್ಯವೈಖರಿಗೆ ಇಡೀ ದೇಶವೇ ಕೊಂಡಾಡುತ್ತಿದೆ. ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಮೂಲಕ ಪಕ್ಷವನ್ನು ಬೇರು ಮಟ್ಟದಿಂದ ಇನ್ನಷ್ಟುಗಟ್ಟಿಗೊಳಿಸಬೇಕಿದೆ ಎಂದರು.

RSS ಟೀಕಿಸಿದರೆ ಪ್ರಚಾರ ಸಿಗುವುದೆಂಬ ಕಲ್ಪನೆಯಲ್ಲಿ ಎಚ್‌ಡಿಕೆ: ಈಶ್ವರಪ್ಪ

ರಾಜ್ಯದಲ್ಲಿ ನಾವು ನಾಲ್ಕು ಬಾರಿ ಮುಖ್ಯಮಂತ್ರಿಯಾದರೂ ಪೂರ್ಣ ಬಹುಮತದಲ್ಲಿ ಆಗಿಲ್ಲ, ಸಮ್ಮಿಶ್ರ ಸರ್ಕಾರ(Coalition Government), ಕಡಿಮೆ ಸೀಟ್‌ ಹೀಗೆ ಆಗಿದೆ, ಮುಂಬರುವ ದಿನಗಳಲ್ಲಿ ಹಾಗಾಗದಂತೆ ಕಾರ್ಯಕರ್ತರು ಗಮನ ನೀಡಬೇಕು, ಸಂಪೂರ್ಣವಾಗಿ ನಮ್ಮ ಬಲದ ಮೇಲೆಯೇ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಬೇಕು ಎಂದರು.

ಜಿಲ್ಲಾ ಉಸ್ತುವಾರಿ ಹಾಗೂ ಲೋಕೊಪಯೋಗಿ ಸಚಿವ ಸಿ.ಸಿ.ಪಾಟೀಲ(CC Patil) ಮಾತನಾಡಿ, ಕಾಂಗ್ರೆಸ್‌ ನಾಯಕರು ಹಿಂದುಳಿದ ವರ್ಗದ ಜನರನ್ನು ಅಧಿಕಾರಕ್ಕಾಗಿ ಬಳಕೆ ಮಾಡಿದ್ದಾರೆ ಹೊರತು ಅವರ ಅಭಿವೃದ್ಧಿಗೆ ಶ್ರಮಿಸಿಲ್ಲ, ಆದರೆ, ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದಾಗಿನಿಂದ ಅವರ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಿದೆ. ಹಿಂದುಳಿದ ನಾಯಕರಿಗೆ ರಾಜಕೀಯ(Politics) ಸ್ಥಾನಮಾನ ಕಲ್ಪಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ನೆ.ಲ. ನರೇಂದ್ರಬಾಬು, ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ, ಶಾಸಕ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ವಿಪ ಸದಸ್ಯ ಎಸ್‌.ವಿ. ಸಂಕನೂರ, ಒಬಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ, ಕಾರ್ಯದರ್ಶಿ ರವಿ ದಂಡಿನ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ ಹೆಬ್ಬಳ್ಳಿ, ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್‌. ಕರೀಗೌಡ್ರ, ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಚಿತ್ರಗಾರ, ಪ್ರಕಾಶ ಬಾಕಳೆ ಉಪಸ್ಥಿತರಿದ್ದರು.

ಡಿ.ಕೆ. ಶಿವಕುಮಾರ(DK Shivakumar), ಸಿದ್ದರಾಮಯ್ಯ(Siddaramaiah) ಹಾಗೂ ಕುಮಾರಸ್ವಾಮಿ(HD Kumaraswamy) ಅವರಿಗೆ ಮುಸ್ಲಿಂರನ್ನು ಬಿಟ್ಟುಬಿಡಿ, ಮುಸ್ಲಿಂ(Muslim) ಸಮುದಾಯದಲ್ಲಿಯೂ ಸಾಕಷ್ಟು ಜನ ದೇಶ ಭಕ್ತರಿದ್ದಾರೆ. ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಿ, ಇವರೆಲ್ಲಾ ಆರ್‌ಎಸ್‌ಎಸ್‌(RSS) ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಆರ್‌ಎಸ್‌ಎಸ್‌ ಇರಲಿಲ್ಲ ಎಂದರೆ ನಮ್ಮ ದೇಶವೂ ಏನೇನೋ ಆಗುತ್ತಿತ್ತು. ದೇಶವನ್ನು ಉಳಿಸುವ ನಿಟ್ಟಿನಲ್ಲಿ ಹಿಂದುಳಿದ ವರ್ಗದವರು ಬಿಜೆಪಿಯನ್ನು ಬೆಂಬಲಿಸಬೇಕು ಅಂತ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.  

click me!