
ಚಿಕ್ಕಮಗಳೂರು (ಜು.2): ರಾಜ್ಯದಲ್ಲಿ ಗೃಹಜ್ಯೋತಿಗೆ ಪರಿಶೀಲನೆ ಆರಂಭವಾಗಿದೆ. ವಾಣಿಜ್ಯ ಉದ್ದೇಶಕ್ಕೆ ಬಳಕೆ ಸೇರಿದಂತೆ ಗೃಹಜ್ಯೋತಿ ಯೋಜನೆಯನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ದೂರು ಬಂದಿದೆ. ಹೀಗಾಗಿ, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಗೃಹಜ್ಯೋತಿ’ ಯೋಜನೆಗೆ ಜಾತಿ ಪ್ರಮಾಣ ಪತ್ರ, ಪಾನ್ ಕಾರ್ಡ್ ಕೇಳುವುದಲ್ಲಿ ತಪ್ಪೇನಿದೆ?. ಶಾಲಾ ದಾಖಲಾತಿ ವೇಳೆ ಜಾತಿ ಬರೆಸುವುದಿಲ್ಲವೇ ಎಂದು ಪ್ರಶ್ನಿಸಿದರು. ಹಾಗಂತ ಜಾತಿ ಆಧಾರದಲ್ಲಿ ಯೋಜನೆ ನೀಡುವುದಿಲ್ಲ. ಯುನಿಟ್ ಬಳಕೆ ಆಧಾರದಲ್ಲಿ ನೀಡಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.
''ಗೃಹಜ್ಯೋತಿ'' ಯೋಜನೆಯಡಿ ಪ್ರಸ್ತುತ 1.64 ಕೋಟಿ ಜನ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ. ವಾಣಿಜ್ಯ ಉದ್ದೇಶಕ್ಕೆ ಬಳಕೆ ಸೇರಿದಂತೆ ಕೆಲವರು ಗೃಹಜ್ಯೋತಿ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ದೂರು ಬಂದಿದೆ. ಹೀಗಾಗಿ, ಪರಿಶೀಲನೆ ನಡೆಸಲಾಗುತ್ತಿದೆ. ಈ ವೇಳೆ ಜಾತಿ ಪ್ರಮಾಣ ಪತ್ರ ಹಾಗೂ ಪಾನ್ ಕಾರ್ಡ್ಗಳನ್ನು ದಾಖಲೆಗಾಗಿ ಪಡೆಯಲಾಗುತ್ತಿದೆ.