
ಶಿವಮೊಗ್ಗ(ಅ.04): ಇಡೀ ದೇಶದಲ್ಲಿ ಕಾಂಗ್ರೆಸ್ ಕುತಂತ್ರ ರಾಜಕಾರಣ ಮಾಡುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿದೆ. ಸುಳ್ಳನ್ನು ವೈಭವೀಕರಿಸುತ್ತಿದೆ. ರೈತರು ಮತ್ತು ಸಾಮಾನ್ಯ ಜನರು ಕಾಂಗ್ರೆಸ್ ಮಾತನ್ನು ನಂಬಬಾರದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಫೇಲ್ ಯುದ್ಧ ವಿಮಾನ ಖರೀದಿ ಸಂದರ್ಭದಲ್ಲೂ ಸಹ ಕಾಂಗ್ರೆಸ್ನವರು ಅಪ ಪ್ರಚಾರ ಮಾಡಿದರು. ಸುಪ್ರೀಂ ಕೋರ್ಟ್ ಸೂಚನೆ ನೀಡಿದ ಮೇಲೆ ಬಾಯಿ ಮುಚ್ಚಿಕೊಂಡು ಕುಳಿತುಕೊಂಡರು ಎಂದು ಲೇವಡಿ ಮಾಡಿದರು. ದೇಶದಲ್ಲಿ ನೂತನ ಭೂ ಸುಧಾರಣೆ ಕಾಯ್ದೆ ಜಾರಿಯಾದಾಗ ಇಡೀ ದೇಶದ ರೈತರು ಸಂತಸಪಟ್ಟಿದ್ದಾರೆ. ಆದರೆ, ರೈತರಲ್ಲದವರು ಮಾತ್ರ ಇದನ್ನು ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್ನವರ ಕುತಂತ್ರ ರಾಜಕಾರಣವನ್ನು ಅರ್ಥ ಮಾಡಿಕೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದರು.
'ಚುನಾವಣೆ ಎಂದರೆ ಬಿಜೆಪಿಗೆ ಗೆಲವು ಕನ್ಫರ್ಮ್'
ಬಿ.ಎಸ್.ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕಾರದ ವೇಳೆ ಹಸಿರು ಶಾಲು ಹಾಕಿಕೊಂಡರು. ನಂತರ ಕೇಸರಿ ಶಾಲು ಹಾಕಿಕೊಂಡರು ಅಂತಾರೆ. ಸಿದ್ದರಾಮಯ್ಯ ಅವರೇ ನಿಜಕ್ಕೂ ಹಸಿರು ಇಲ್ಲ, ಕೇಸರಿನೂ ಇಲ್ಲ. ಈ ರೀತಿ ರಾಜಕಾರಣ ಮಾಡುತ್ತಿರುವ ನಿಮಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.