'ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುವುದೇ ಸಿದ್ದು, ಡಿಕೆಶಿ ದಂಧೆ ಆಗಿದೆ'

By Suvarna NewsFirst Published Jul 24, 2020, 2:16 PM IST
Highlights

ಕೊರೋನಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೊರೋನಾ ದೂರ ಮಾಡಲು ಹಗಲು ರಾತ್ರಿ ಕೆಲಸ ಮಾಡುತ್ತಿದೆ| ಅದಕ್ಕೆ ಬೇಕಾದ ಸಲಕರಣೆ ಕೊಂಡುಕೊಂಡಿದೆ. ಕೆಲವು ಬಾರಿ ವಸ್ತುಗಳಿಗೆ ಡಿಮ್ಯಾಂಡ್ ಇದ್ದಾಗ ದರ ಹೆಚ್ಚಿರುತ್ತದೆ.  ಡಿಮ್ಯಾಂಡ್ ಕಡಿಮೆ ಇದ್ದಾಗ ದರ ಕಡಿಮೆ ಇರುತ್ತೆ: ಸಚಿವ ಈಶ್ವರಪ್ಪ

ಶಿವಮೊಗ್ಗ(ಜು.24): ವಿಧಾನ ಪರಿಷತ್ ಸ್ಥಾನಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇತ್ತು. ಐದು ಸ್ಥಾನಗಳಿಗೆ ಆಯ್ಕೆ ಆಗುತ್ತಿದ್ದಂತೆ ಉಳಿದವರು ಸುಮ್ಮನಾಗಿದ್ದಾರೆ. ಐದು ಮಂದಿ ಆಯ್ಕೆಯಲ್ಲಿ ಯಾವುದೇ ಒಂದೇ ಒಂದು ಒಡಕಿನ ಧ್ವನಿ ಕೂಡ‌ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. 

ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಸಿದ್ದಿ ಜನಾಂಗದ ವ್ಯಕ್ತಿಯ ಆಯ್ಕೆಗೆ ಇಡೀ ದೇಶದ ಜನ ಸಂತೋಷ ಪಡುತ್ತಿದ್ದಾರೆ. ಪರಿಷತ್ ಸದಸ್ಯನಾಗುವ ಬಗ್ಗೆ ಕನಸಲ್ಲೂ ನೆನಸದ ವ್ಯಕ್ತಿಯೊಬ್ಬರನ್ನು ಆಯ್ಕೆ ಮಾಡಿದ್ದೇವೆ. ಸಿದ್ದಿ ಜನಾಂಗದ ವ್ಯಕ್ತಿ ಆಯ್ಕೆಯ ಮೂಲಕ ಆ ಒಂದು ಸ್ಥಾನಕ್ಕೆ ಗೌರವ ಬರುವಂತಹ‌ ಕೆಲಸ ಆಗಿದೆ. ಬಿಜೆಪಿ ಕಾರ್ಯಕರ್ತರು ಅಷ್ಟೇ ಅಲ್ಲ, ಬೇರೆ ಎಲ್ಲಾ ಪಕ್ಷದ ಕಾರ್ಯಕರ್ತರು ಸಿದ್ದಿ ಜನಾಂಗದ ವ್ಯಕ್ತಿಯ ಆಯ್ಕೆಗೆ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. 

'ಸಿದ್ದು ಸಿಎಂ ಆಗಿದ್ದಿದ್ರೆ ರಾಜ್ಯವನ್ನು ದೇವರಿಂದಲೂ ಉಳಿಸಲಾಗ್ತಿರಲಿಲ್ಲ'

ಮಂತ್ರಿ ಸ್ಥಾನಕ್ಕೆ ಅಪೇಕ್ಷೆ ಪಡೋದು ತಪ್ಪಲ್ಲ. ಎಂಎಲ್‌ಎ ಅಥವಾ ಎಂಎಲ್‌ಸಿ ಇರಬಹುದು ಮಂತ್ರಿ ಸ್ಥಾನ ಕೇಳುತ್ತಾರೆ. ತಪ್ಪಲ್ಲ ಆದರೆ ತೀರ್ಮಾನ ಆದ ನಂತರ ಹೊಂದಿಕೊಳ್ಳುತ್ತಾರೆ. ಮಂತ್ರಿ ಆದ ನಂತರ ಒಳ್ಳೆಯ ರೀತಿ ಸರ್ಕಾರ ನಡೆದುಕೊಂಡು ಹೋಗುವುದಕ್ಕೆ ಸಹಕಾರ ಕೊಡುತ್ತಾರೆ. ಮಾಜಿ ಸಚಿವ ಹೆಚ್. ವಿಶ್ವನಾಥ್ ಅವರಿಗೆ ಮಂತ್ರಿ ಸ್ಥಾನ‌ ಕೊಡುವ ಬಗ್ಗೆ ಗೊತ್ತಿಲ್ಲ. ಕೇಂದ್ರದ ನಾಯಕರು ಮತ್ತು ಮುಖ್ಯಮಂತ್ರಿಗಳು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. 

ಕೊರೋನಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೊರೋನಾ ದೂರ ಮಾಡಲು ಹಗಲು ರಾತ್ರಿ ಕೆಲಸ ಮಾಡುತ್ತಿದೆ. ಅದಕ್ಕೆ ಬೇಕಾದ ಸಲಕರಣೆ ಕೊಂಡುಕೊಂಡಿದೆ. ಕೆಲವು ಬಾರಿ ವಸ್ತುಗಳಿಗೆ ಡಿಮ್ಯಾಂಡ್ ಇದ್ದಾಗ ದರ ಹೆಚ್ಚಿರುತ್ತದೆ.  ಡಿಮ್ಯಾಂಡ್ ಕಡಿಮೆ ಇದ್ದಾಗ ದರ ಕಡಿಮೆ ಇರುತ್ತೆ. ಈ ಹಿಂದೆ 4 ಸಾವಿರ ಕೋಟಿ ಹಗರಣ ಆಗಿದೆ ಅಂದ್ರು, ಇದೀಗ 2 ಸಾವಿರ ಕೋಟಿ ಭ್ರಷ್ಟಾಚಾರ ಆಗಿದೆ ಅಂತಾ ಅವರೇ ಹೇಳುತ್ತಿದ್ದಾರೆ. ಸರ್ಕಾರ ಅಷ್ಟು ಖರೀದಿನೇ ಮಾಡಿಲ್ಲ. ಇನ್ನು ಭ್ರಷ್ಟಾಚಾರ ಆಗೋದು ಎಲ್ಲಿಂದ ಬಂತು ಎಂದು ಪ್ರಶ್ನೆ ಮಾಡಿದ್ದಾರೆ. 

ಡಿಕೆಶಿ ಮತ್ತು ಸಿದ್ದರಾಮಯ್ಯ ಮಧ್ಯೆ ಕಾಂಪಿಟೇಷನ್ ಇದೆ. ನಾನು ಈ ಸರ್ಕಾರದ ವಿರುದ್ಧ ಹೇಳಿಕೆ ಕೊಟ್ಟರೆ ದೊಡ್ಡ ಮನುಷ್ಯ ಆಗ್ತೀನಿ, ನಾನು ಹೀರೋ ಆಗ್ತೀನಿ ಎಂಬ ಕಾಂಪಿಟೇಷನ್ ಇದೆ. ಹೀಗಾಗಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುವುದೇ ಇವರಿಬ್ಬರ ದಂಧೆ ಆಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ  ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. 

ಸತ್ಯ ಧಾನ್ಯ, ಸುಳ್ಳು ತೌಡು...ಸಿದ್ದರಾಮಯ್ಯಗೆ ಸಚಿವ ಸುಧಾಕರ್ ಸತ್ಯದ ಪಾಠ!

ರಾಜ್ಯದ ಜನತೆ ಎಲ್ಲವನ್ನು ಗಮನಿಸುತ್ತಿದ್ದಾರೆ. ಕೊರೋನಾ ವೇಳೆ ಕಾಂಗ್ರೆಸ್‌ವರು ರಾಜಕೀಯ ಮಾಡುತ್ತಿದ್ದಾರೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ವೈಯಕ್ತಿಕ ಪೈಪೋಟಿಯಿಂದಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಇದು ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ. ಇಬ್ಬರೂ ಕೂಡಾ ಹಳೆ ರಾಜಕಾರಣಿಗಳು, ಒಬ್ಬರು ಮುಖ್ಯಮಂತ್ರಿ ಆಗಿದ್ದವರು, ಮತ್ತೊಬ್ಬರು ಮಂತ್ರಿ ಆಗಿದ್ದವರು. ಕೊರೋನಾ ಬಂದ ಸಂದರ್ಭದಲ್ಲಿ ರಾಜ್ಯ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಗಳಿಗೆ ದಯವಿಟ್ಟು ಪೂರ್ಣ ಸಹಕಾರ ಕೊಡಿ. ಈ ಸಂದರ್ಭದಲ್ಲಿ ರಾಜಕಾರಣ ಮಾಡಬೇಡಿ. ಕೊರೋನಾ ಮುಗಿದ ಮೇಲೆ ಎಲ್ಲವನ್ನು ಬಹಿರಂಗ ಮಾಡಿ ನಮ್ಮ ಅಭ್ಯಂತರವಿಲ್ಲ. ಆದರೆ ಇಂತಹ ಸಮಯದಲ್ಲಿ ಸುಖಾ ಸುಮ್ಮನೆ ಆರೋಪ ಮಾಡೋದು ಬೇಡ. ಕೊರೊನಾ ಸಂದರ್ಭದಲ್ಲಿ ದಯವಿಟ್ಟು ಸಹಕಾರ ಕೊಡಿ ಎಂದು ಹೇಳಿದ್ದಾರೆ.

ಸರ್ಕಾರದ ಬಗ್ಗೆ ಟೀಕೆ ಮಾಡಿದರೇ ನಿಮ್ಮ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತದೆ ವಿನಃ ಯಾವುದೇ ಕಾರಣಕ್ಕೂ ಸರ್ಕಾರಕ್ಕಾಗಲಿ, ಮಂತ್ರಿಗಳಿಗಾಗಲಿ ಕೆಟ್ಟ ಹೆಸರು ಬರುವುದಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ತಿರುಗೇಟು ನೀಡಿದ್ದಾರೆ. 
 

click me!