ಬಿಜೆಪಿ 8 ಕ್ಷೇತ್ರ ಗೆದ್ದರೆ ಸಿದ್ದರಾಮಯ್ಯನವರೇ ರಾಜೀನಾಮೆ ಕೊಡ್ತೀರಾ?

By Web DeskFirst Published Nov 27, 2019, 7:51 AM IST
Highlights

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಸವಾಲು| ಜೆಡಿಎಸ್‌ನ 17 ಶಾಸಕರು ಆ ಪಕ್ಷದ ಕಾರ್ಯವೈಖರಿಗೆ ಬೇಸತ್ತು ಬಿಜೆಪಿಗೆ ಬಂದಿದ್ದಾರೆ| ಇದೀಗ ಅವರು ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಗೆಲುವು ಸಾಧಿಸಲಿದ್ದಾರೆ| ಉಪಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಹೀನಾಯವಾಗಿ ಸೋಲುತ್ತದೆ ಎಂಬುವುದು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಗೆ ತಿಳಿದಿದೆ| ಸುಮ್ಮನೇ ಪ್ರಚಾರಕ್ಕೆ ಹೋಗುತ್ತಿದ್ದಾರೆ ಎಂದ ಈಶ್ವರಪ್ಪ|

ಕೊಪ್ಪಳ(ನ.27): ಉಪಚುನಾವಣೆಯಲ್ಲಿ 8 ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ? ಎಂದು ಸಚಿವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಸವಾಲು ಹಾಕಿದ್ದಾರೆ. 

ಮಂಗಳವಾರ ಮುನಿರಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಕಾಂಗ್ರೆಸ್‌, 17 ಶಾಸಕರು ಆ ಪಕ್ಷದ ಕಾರ್ಯವೈಖರಿಗೆ ಬೇಸತ್ತು ಬಿಜೆಪಿಗೆ ಬಂದಿದ್ದಾರೆ. ಇದೀಗ ಅವರು ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಗೆಲುವು ಸಾಧಿಸಲಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಹೀನಾಯವಾಗಿ ಸೋಲುತ್ತದೆ ಎಂಬುವುದು ಸಿದ್ದರಾಮಯ್ಯಗೆ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ತಿಳಿದಿದೆ. ಸುಮ್ಮನೇ ಪ್ರಚಾರಕ್ಕೆ ಹೋಗುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅನರ್ಹ ಶಾಸಕರನ್ನು ಸೋಲಿಸುವುದೇ ನಮ್ಮ ಗುರಿ ಎಂಬ ಕುಮಾರಸ್ವಾಮಿ ಹೇಳಿಕೆಗೆ, ಮಗ (ನಿಖಿಲ್‌), ತಂದೆ (ದೇವೇಗೌಡ) ಗೆಲ್ಲಿಸದೆ ಇರುವವರು ಅನರ್ಹರನ್ನು ಸೋಲಿಸಲು ಹೇಗೆ ಸಾಧ್ಯ? ಇದು ಹಾಸ್ಯಾಸ್ಪದವಾಗಿದೆ ಎಂದರು.
ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಕುರಿತು, ಯಾವುದೆ ಪಕ್ಷಕ್ಕೆ ಬಹುಮತ ಬಾರದಿರುವಾಗ ಇಂಥ ಬೆಳವಣಿಗೆ ಸಹಜ. ಚುನಾವಣೆ ಪೂರ್ವದಲ್ಲಿ ಶಿವಸೇನೆ ಬಿಜೆಪಿ ಜತೆ ಇತ್ತು. ನಂತರ ರಾಜಕೀಯ ಸನ್ನಿವೇಶದಂತೆ ಬದಲಾಗಿದೆ. ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯಿಂದ ನಿಜವಾಗಿ ಮುಖಭಂಗವಾಗಿರುವುದು ಕಾಂಗ್ರೆಸ್‌ಗೆ. ಶಿವಸೇನೆಯ ಜೊತೆ ಸೇರಿ ಸರ್ಕಾರ ರಚಿಸಿದ್ದರಿಂದ ಇಡೀ ದೇಶದ ಮುಸ್ಲಿಂಮರಿಗೆ ಕಾಂಗ್ರೆಸ್‌ನ ಅಧಿಕಾರ ಲಾಲಸೆ ಅರ್ಥವಾಗಿದೆ ಎಂದರು.

ದೇಶದಲ್ಲಿ ಕಾಂಗ್ರೆಸ್‌ ಆಡಳಿತದ ಬಗ್ಗೆ ಮುಸ್ಲಿಂರಿಗೆ ಗೊತ್ತಾಗಬೇಕಾಗಿದೆ. ಕಾಂಗ್ರೆಸ್‌ನ ಅಧಿಕಾರ ಲಾಲಸೆ ಅರ್ಥವಾಗಬೇಕಿದೆ ಎಂದ ಈಶ್ವರಪ್ಪ, ಸೋನಿಯಾ ಗಾಂಧಿ ಕಾಂಗ್ರೆಸ್‌ ಅಧಿಕಾರಕ್ಕಾಗಿ ಏನಾದರೂ ಮಾಡುತ್ತಾರೆ ಎಂದರು.
ಮಧ್ಯಂತರ ಚುನಾವಣೆ ಬರುತ್ತೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ, ಕಾಂಗ್ರೆಸ್‌ ಪಕ್ಷದಲ್ಲಿ ಬುಡ ಸರಿಯಲ್ಲ. ಇಂತಹ ಸಂದರ್ಭದಲ್ಲಿ ಮಧ್ಯಂತರ ಚುನಾವಣೆ ಬಯುಸ್ತಾರೆ ಎನ್ನುವುದು ನಾಚಿಗೇಡಿತನ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪರಿಷತ್‌ ಸದಸ್ಯ ಸಿ.ವಿ. ಚಂದ್ರದ್ರಶೇಖರ, ಬಿಜೆಪಿ ಮುಖಂಡರಾದ ಅಪ್ಪಣ್ಣ ಪದಕಿ, ಸುರೇಶ, ಮಂಜುನಾಥ ಹಳ್ಳಿಕೇರಿ, ಹಾಲೇಶ ಕಂದಾರಿ, ದೇವರಾಜ್‌ ಹಾಲುಸಮುದ್ರ ಸೇರಿದಂತೆ ಪಕ್ಷದ ಮುಖಂಡರು ಇದ್ದರು.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

click me!