ಹೆಚ್ಚಾದ ಕೊರೋನಾ ಕಾಟ: 'ಮಹಾ​ರಾ​ಷ್ಟ್ರ​ದಿಂದ ರಾಜ್ಯ ಪ್ರವೇ​ಶಕ್ಕೆ ನಿರ್ಬಂಧ'

By Kannadaprabha NewsFirst Published May 4, 2020, 11:59 AM IST
Highlights

ಕರ್ನಾಟಕ- ಮಹಾರಾಷ್ಟ್ರ ಗಡಿ​ಯಲ್ಲಿ ಮತ್ತಷ್ಟು ಕಟ್ಟೆ​ಚ್ಚರ ವಹಿ​ಸಲು ಡಿಸಿಎಂ ಕಾರ​ಜೋಳ ಸೂಚ​ನೆ| ಜಿಲ್ಲೆಯ ಮೂರು ತಾಲೂಕುಗಳಲ್ಲಿ ಸೋಂಕು ಇದೆ, ಅದು ಸದ್ಯ ನಿಯಂತ್ರಣಕ್ಕೂ ಬರುತ್ತಿದೆ| ಇಂತಹ ಸಂದರ್ಭದಲ್ಲಿ ನೆರೆಯ ರಾಜ್ಯಗಳಲ್ಲಿ ಹೆಚ್ಚಾಗಿರುವ ಕೋವಿಡ್‌ ಪ್ರಕರಣಗಳು ನಮ್ಮ ಜಿಲ್ಲೆಗಳಿಗೆ ವಿಸ್ತರಿಸಬಾರದೆಂಬ ಉದ್ದೇಶದಿಂದ ಗಡಿ ಭಾಗಗಳಲ್ಲಿ ಎಚ್ಚರಿಕೆಯಿಂದ ಜಿಲ್ಲಾಡಳಿತ ಕಾರ್ಯನಿರ್ವಹಿಸಬೇಕು|

ಬಾಗಲಕೋಟೆ(ಮೇ.04): ಆರೆಂಜ್‌ ಜಿಲ್ಲೆಯಾಗಿರುವ ಬಾಗಲಕೋಟೆಯಲ್ಲಿ ಸೋಂಕಿತರ ಸಂಖ್ಯೆ ನಿಯಂತ್ರಣದಲ್ಲಿದ್ದು ಬೇರೆ ರಾಜ್ಯಗಳ ಅದರಲ್ಲೂ ಮಹಾರಾಷ್ಟ್ರ ರಾಜ್ಯದಿಂದ ರಾಜ್ಯ ಪ್ರವೇಶಿಸಲು ಯಾರಿಗೂ ಅನುಮತಿ ನೀಡಿಲ್ಲ. ಗಡಿ ಭಾಗದಲ್ಲಿ ಮತ್ತಷ್ಟು ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಮೂರು ತಾಲೂಕುಗಳಲ್ಲಿ ಸೋಂಕು ಇದೆ. ಅದು ಸದ್ಯ ನಿಯಂತ್ರಣಕ್ಕೂ ಬರುತ್ತಿದೆ. ಇಂತಹ ಸಂದರ್ಭದಲ್ಲಿ ನೆರೆಯ ರಾಜ್ಯಗಳಲ್ಲಿ ಹೆಚ್ಚಾಗಿರುವ ಕೋವಿಡ್‌ ಪ್ರಕರಣಗಳು ನಮ್ಮ ಜಿಲ್ಲೆಗಳಿಗೆ ವಿಸ್ತರಿಸಬಾರದೆಂಬ ಉದ್ದೇಶದಿಂದ ಗಡಿ ಭಾಗಗಳಲ್ಲಿ ಎಚ್ಚರಿಕೆಯಿಂದ ಜಿಲ್ಲಾಡಳಿತ ಕಾರ್ಯನಿರ್ವಹಿಸಬೇಕು. ಆಯಾ ರಾಜ್ಯಗಳಿಂದ ಯಾರೂ ಬರದ ಹಾಗೇ ನೋಡಿಕೊಳ್ಳಬೇಕೆಂದರು.

ಬಾದಾಮಿಗೂ ವಕ್ಕರಿಸಿದ ಮಹಾಮಾರಿ ಕೊರೋನಾ: ಆತಂಕದಲ್ಲಿ ಜನತೆ

ಜಿಲ್ಲೆಯ ಲಾಕ್‌ಡೌನ್‌ ಸಡಿಲಿಕೆ ದುರುಪಯೋಗ ಪಡಿಸಿಕೊಳ್ಳಬಾರದು. ಕೃಷಿ ಚಟುವಟಿಕೆಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅಗತ್ಯವಾಗಿರುವ ದಿನಸಿ ವಸ್ತುಗಳು, ತರಕಾರಿ, ಹಿಟ್ಟಿನ ಗಿರಣಿ, ಖಾರಾ ಕುಟ್ಟುವ ಯಂತ್ರ ದಂತಹ ಘಟಕಗಳ ಆರಂಭವಿರುತ್ತದೆ. ನರೇಗಾ ಕಾಮಗಾರಿ ಚಾಲ್ತಿಯಲ್ಲಿರುತ್ತವೆ. ನಿಗದಿತ ಸಮಯದಲ್ಲಿ ಕಾರ್ಯನಿರ್ವಹಿಸಲಿವೆ. ಉಳಿದಂತೆ ಲಾಕ್‌ಡೌನ್‌ ಮುಂದುವರೆಯಲಿದೆ ಎಂದರು.

ಜಿಲ್ಲೆಯಿಂದ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಬೇರೆ ರಾಜ್ಯಗಳಿಗೆ ತೆರಳಲು ಸೇವಾ ಸಿಂಧು ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿ ಪಾಸ್‌ ಪಡೆಯಬಹುದಾಗಿದೆ. ಬೇರೆ ಜಿಲ್ಲೆಗಳಿಗೆ ತೆರಳಲು ಇದೆ ಮಾನದಂಡ ಅನುಸರಿಸಬಹುದು ಎಂದರು.

ಮಾಸ್ಕ್‌ ಇಲ್ಲದಿದ್ದರೆ ದಂಡ:

ಸಾರ್ವಜನಿಕರು ಮುಖಕವಚ (ಮಾಸ್ಕ್‌) ಕಡ್ಡಾಯವಾಗಿ ಧರಿಸಬೇಕು ಇಲ್ಲದಿದ್ದರೆ 100 ರಿಂದ 500 ವರೆಗೆ ದಂಡ ಹಾಕಬೇಕಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ, ಗುಟಕಾ, ಎಲೆ ಅಡಿಕೆ ತಿಂದು ಉಗುಳುವುದು ಸಹ ಅಪರಾಧ ವಾಗುತ್ತದೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ ಡಿಸಿಎಂ, ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಿದರು.

17ರ ವರೆಗೆ ನಿಷೇಧಾಜ್ಞೆ:

ಕೇಂದ್ರ ಸರ್ಕಾರದ ನಿರ್ದೆಶನದಂತೆ ಮೇ 4 ರಿಂದ 17 ವರೆಗೆ ನಿಷೇಧಾಜ್ಞೆ ಮುಂದುವರೆಸಲಾಗಿದ್ದು ರಾತ್ರಿ 7ರಿಂದ ಬೆಳಗ್ಗೆ 7ರವರೆಗೆ ವಿಧಿ​ಸಲಾಗಿದೆ. ಇದನ್ನು ಸಾರ್ವಜನಿಕರ ಅರಿತು ಜಿಲ್ಲಾಡಳಿತದ ಜೊತೆ ಸಹಕರಿಸಬೇಕೆಂದರು.
ಜಿಲ್ಲೆಯಾದ್ಯಂತ ಸಂತೆ, ಜಾತ್ರೆ ಸಂಪೂರ್ಣ ನಿಷೇಧಿ​ಸಲಾಗಿದೆ. ಮದುವೆಗಳನ್ನು ಮುಂದೂಡುವುದಾದರೆ ಒಳ್ಳೆಯದು, ಅಗತ್ಯ ಸಂದರ್ಭಗಳ ಹೊರತಾಗಿ ಜನತೆ ಬೀದಿಗಿಳಿಯಬೇಡಿ ಜಿಲ್ಲೆಯಲ್ಲಿ ಸಿಆರ್‌ಪಿಸಿ ಕಲಂ ಅಡಿ ನಿಷೇಧಾಜ್ಞೆ ಇದೆ ಎಂಬುದನ್ನು ಮರೆಯಬೇಡಿ ಎಂದರು. ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾ​ಧಿಕಾರಿ ಕ್ಯಾ.ರಾಜೇಂದ್ರ, ಪೊ​ಲೀಸ್‌ ವರಿಷ್ಠಾ​ಧಿಕಾರಿ ಲೋಕೇಶ ಜಗಲಾಸರ ಇದ್ದರು.
 

click me!