'ಕಾಂಗ್ರೆಸ್‌ ಟೂಲ್‌ಕಿಟ್‌ ರೂವಾರಿ ಎಚ್ಕೆ: ಸಚಿವ ಪಾಟೀಲ

By Kannadaprabha NewsFirst Published May 21, 2021, 3:51 PM IST
Highlights

* ಎಚ್‌.ಕೆ.ಪಾಟೀಲ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಸಿ.ಸಿ. ಪಾಟೀಲ 
* ಕಾಂಗ್ರೆಸ್‌ ಎಷ್ಟರ ಮಟ್ಟಿಗೆ ಕೆಳಮಟ್ಟಕ್ಕೆ ಹೋಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು
* ಪ್ರಾಮಾಣಿಕವಾಗಿ ದುಡಿಯುತ್ತಿರುವ ಮೋದಿಗೆ ಬೆಂಬಲವಾಗಿರೋಣ

ಗದಗ(ಮೇ.21): ದೇಶಾದ್ಯಂತ ಕೊರೋನಾ ತಾಂಡವದ ಸಂದರ್ಭದಲ್ಲೇ ಕಾಂಗ್ರೆಸ್‌ನವರು ನಡೆಸುತ್ತಿರುವ ‘ಟೂಲ್‌ ಕಿಟ್‌’ನ ಪ್ರಮುಖ ರೂವಾರಿ ಮಾಜಿ ಸಚಿವ ಎಚ್‌.ಕೆ. ಪಾಟೀಲ ಎಂದು ವಾರ್ತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಗಂಭೀರ ಆರೋಪ ಮಾಡಿದ್ದಾರೆ.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಮೋದಿ ಹೆಸರು ಕೆಡಿಸುವ ಪ್ರಯತ್ನ ಇದಾಗಿದೆ. ರಾಜ್ಯ, ರಾಷ್ಟ್ರದಲ್ಲಿ ಇರುವವರೇ ಬಿಜೆಪಿ ಹೆಸರು ಕೆಡಿಸಲು ನಿರತರಾಗಿದ್ದಾರೆ. ಏನೇನು ವೈಭವೀಕರಿಸಬೇಕು ಎನ್ನುವುದನ್ನು ನಿರ್ಧರಿಸಿದ್ದಾರೆ. ಬಿಜೆಪಿ ಜೊತೆ ಭಿನ್ನಾಭಿಪ್ರಾಯ ಹೊಂದಿದವರ ಸಹಾಯ ಪಡೆಯಲಾಗಿದೆ. ಸೋಕಾಲ್ಡ್‌ ಬುದ್ಧಿ ಜೀವಿಗಳು, ಗೋಮಾಂಸ ತಿನ್ನುವಂಥವರ ಸಹಾಯ ಪಡೆಯಲಾಗಿದೆ. ಟೂಲ್‌ಕಿಟ್‌ ನೆಪದಲ್ಲಿ ವೈಭವೀಕರಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಸ್ಮಶಾನದಲ್ಲಿ ಉರಿಯುತ್ತಿರುವ ಚಿತೆಗಳು, ನರಳಾಡುವ ರೋಗಿಗಳು, ವ್ಯಾಕ್ಸಿನ್‌ ಅಭಾವ ಸೃಷ್ಟಿಸಿ ಟೂಲ್‌ಕಿಟ್‌ ಅಭಿಯಾನ ಆರಂಭ ಮಾಡಿದ್ದಾರೆ. ಕಾಂಗ್ರೆಸ್‌ ಎಷ್ಟರ ಮಟ್ಟಿಗೆ ಕೆಳಮಟ್ಟಕ್ಕೆ ಹೋಗಿದೆ ಎನ್ನುವುದನ್ನು ದೇಶ ಅರ್ಥ ಮಾಡಿಕೊಳ್ಳಬೇಕು. ಪ್ರಾಮಾಣಿಕವಾಗಿ ದುಡಿಯುತ್ತಿರುವ ನರೇಂದ್ರ ಮೋದಿಗೆ ಬೆಂಬಲವಾಗಿರೋಣ, ಕೊರೋನಾ ವಿರುದ್ಧ ನೂರಕ್ಕೆ ನೂರು ಜಯಗಳಿಸುವ ವಿಶ್ವಾಸವಿದೆ. ಪ್ರಧಾನಿಗಳೂ ಆ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ನಾವೆಲ್ಲರೂ ಒಗ್ಗಟ್ಟಿನಿಂದ ಈ ಕೆಟ್ಟಪರಿಸ್ಥಿತಿಯಿಂದ ಹೊರಗೆ ಬರೋಣ, ಧೈರ್ಯದಿಂದ ಎಲ್ಲವನ್ನು ಎದುರಿಸೋಣ ಎಂದರು.

'ಕೊರೋನಾ ಅನ್ನೋದು ನಮ್ ತಲೆಯಲ್ಲಿಲ್ಲ, ಅದ್ಕೆ ಮಾಸ್ಕ್ ಹಾಕಲ್ಲ': ಗ್ರಾಮಸ್ಥರ ಉಡಾಫೆ ಉತ್ತರ

ಎಚ್ಕೆ ಮನೆ ಮುಂದೆ ಕುತ್ಕೋಬೇಕಾ?

ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ವಿಶ್ವಾಸವಿಲ್ಲದ ಹಿನ್ನೆಲೆಯಲ್ಲಿ ಸಿಎಂ ಹಾಗೂ ಪಿಎಂ ಕೋವಿಡ್‌ ನಿರ್ವಹಣೆಯನ್ನು ಆಯಾ ಜಿಲ್ಲಾಧಿಕಾರಿಗೆ ವಹಿಸಿದ್ದಾರೆ ಎನ್ನುವ ಎಚ್‌.ಕೆ. ಪಾಟೀಲ ಅವರ ಹೇಳಿಕೆಗೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿ.ಸಿ. ಪಾಟೀಲ, ಏನ್‌ ಜಿಲ್ಲಾ ಉಸ್ತುವಾರಿ ಸಚಿವರಾದರೆ ಅವರ (ಎಚ್ಕೆ ಪಾಟೀಲ) ಮನೆ ಮುಂದೆ ಕುಳಿತುಕೊಳ್ಳಬೇಕಾ? ಎಂದು ಹರಿಹಾಯ್ದರು. ಇವರು (ಎಚ್ಕೆ) ಹೇಳಿದವರಿಗೆ ನಾವು ಟೆಂಡರ್‌ ಕೊಡಬೇಕು. ಅಂದರೆ ಉಸ್ತುವಾರಿ ಸಚಿವರು ಚೊಲೊ.. ಇಲ್ಲಾಂದ್ರ ನಾವು ಸರಿ ಇಲ್ಲ ಅಲ್ಲವೇ? ಎಂದು ತಿರುಗೇಟು ನೀಡಿದರು.

ಪಿಎಂ ಕೇರ್‌ನಿಂದ ಬಂದ ವೆಂಟಿಲೇಟರ್‌ಗಳು ಡಬ್ಬಾ ಅನ್ನೋದು ಓರ್ವ ಮಾಜಿ ಸಚಿವ, ಹಿರಿಯ ರಾಜಕಾರಣಿ ಮಾತನಾಡುವ ಮಾತಾ? ಇದು ಅವರ ಘನತೆಗೆ ತಕ್ಕುದಲ್ಲ. ಸುಟ್ಟಮನೆಯಲ್ಲಿ ಗಳ ಹಿರಿಯುವವರು ಇವರಂತವರೇ ಎಂದು ಸಚಿವ ಪಾಟೀಲ್‌ ಅಬ್ಬರಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!