5 ಉತ್ಸವಗಳು ರಾಜ್ಯಮಟ್ಟದ ಉತ್ಸವಗಳಾಗಿ ಆಚರಣೆ: ಸಚಿವ ಸಿ.ಟಿ.ರವಿ

By Suvarna NewsFirst Published Jan 9, 2020, 12:10 PM IST
Highlights

ವಿಜಯನಗರ ವೈಭವ ಧ್ವನಿ ಮತ್ತು ಬೆಳಕು ರೂಪಕ ಪ್ರೀಮಿಯರ್ ಶೋ‌ ಕಾರ್ಯಕ್ರಮ ವೀಕ್ಷಿಸಿದ ಸಚಿವ ಸಿ ಟಿ ರವಿ| ವಿಜಯನಗರ ವೈಭವ, ಸಂಸ್ಕೃತಿ, ಕಲೆ, ಶ್ರೀಮಂತಿಕೆ, ತಾಂತ್ರಿಕತೆಯನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡಬೇಕು| ಸಿಎಎ ಕುರಿತು ವಾಸ್ತವತೆ ತಿಳಿಸಿಕೊಡುವ ಕೆಲಸವಾಗಬೇಕಿದೆ|

ಬಳ್ಳಾರಿ(ಜ.09): ಸ್ಮಾರಕಗಳ ನಿರ್ವಹಣೆಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕೆ ನೀಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಗ್ಲೋಬಲ್ ಇನ್ವೆಸ್ಟರ್ ಮೀಟ್ ಮಾಡುತ್ತಿದ್ದೇವೆ. ಸ್ಮಾರಕಗಳ ನಿರ್ವಹಣೆಗೆ ದತ್ತು ಸ್ವೀಕಾರ ಯೋಜನೆಯೂ ಸಹ ರೂಪಿಸಲಾಗುತ್ತಿದ್ದು, 15 ರಿಂದ 20 ದಿನಗಳಲ್ಲಿ ಜಾರಿಗೆ ತರಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಗುರುವಾರ ಜಿಲ್ಲೆಯ ಹಂಪಿಯ ಗಜಶಾಲೆ ಮಂಟಪದ ಆವರಣದಲ್ಲಿ ಆಯೋಜಿಸಲಾಗಿರುವ ವಿಜಯನಗರ ವೈಭವ ಧ್ವನಿ ಮತ್ತು ಬೆಳಕು ರೂಪಕ ಪ್ರೀಮಿಯರ್ ಶೋ‌ ಕಾರ್ಯಕ್ರಮ ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಂಪಿ ಉತ್ಸವ, ಮೈಸೂರು ದಸರಾ, ಕಲ್ಯಾಣ ಕರ್ನಾಟಕ ಉತ್ಸವ, ಕಿತ್ತೂರು ಉತ್ಸವ, ಕದಂಬ ಉತ್ಸವ ಹಾಗೂ ಕರಾವಳಿ ಉತ್ಸವಗಳು ರಾಜ್ಯಮಟ್ಟದ ಉತ್ಸವಗಳನ್ನಾಗಿ ಆಚರಿಸುವಂತೆ ಸಲಹೆಗಳು ಬಂದಿದ್ದು, ಅವುಗಳನ್ನು ನ್ಯೂ ಟೂರಿಸಂ ಪಾಲಿಸಿ-2020-25ರಲ್ಲಿ ಸೇರಿಸಲಾಗುವುದು ಎಂದರು.

ಹಂಪಿ ಉತ್ಸವ ದಿನಾಂಕ ನಿಗದಿಗೆ ಸಂಬಂಧಿಸಿದಂತೆ ಐತಿಹಾಸಿಕ ಹಿನ್ನೆಲೆ ಮತ್ತು ಧಾರ್ಮಿಕ ನಂಬುಗೆ ಜೋಡಿಸಿದಾಗ ಮಾತ್ರ ದಿನಾಂಕ ಬದಲಾವಣೆಗಳಾಗಲು ಸಾಧ್ಯವಿಲ್ಲ. ಉತ್ಸವ ದಿನಾಂಕ ನಿಗದಿಗೆ ಸಂಬಂಧಿಸಿದಂತೆ ಇತಿಹಾಸ ತಜ್ಞರು ‌ಹಾಗೂ‌ ನಿರ್ದೇಶಕರಿಗೆ ಸೂಚಿಸಿದ್ದು, ಅವರು ಅಧ್ಯಯನ ನಡೆಸಿ ದಿನಾಂಕದ ನಿಗದಿಗೆ ಸಲಹೆ ನೀಡಲಿದ್ದಾರೆ. ನಂತರ ಕ್ರಮ ವಹಿಸಲಾಗುವುದು. ನವೆಂಬರ್ ನಲ್ಲಿ ಅತಿವೃಷ್ಟಿ ಹಾಗೂ ಇನ್ನಿತರ ಕಾರಣಗಳಿಂದ ಆಚರಿಸಲು ಸಾಧ್ಯವಾಗಲಿಲ್ಲ ಎಂದರು. ವಿಜಯನಗರ ವೈಭವ, ಸಂಸ್ಕೃತಿ, ಕಲೆ, ಶ್ರೀಮಂತಿಕೆ, ತಾಂತ್ರಿಕತೆಯನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡಬೇಕು ಎಂಬ ಸದುದ್ದೇಶದಿಂದ ಹಂಪಿ ಉತ್ಸವ ಆಚರಿಸಲಾಗುತ್ತಿದೆ ಎಂದರು. 

ಸಿಎಎ ಕುರಿತು ವಾಸ್ತವತೆ ತಿಳಿಸಿಕೊಡುವ ಕೆಲಸವಾಗಬೇಕಿದೆ. ಇದು ಯಾರದೋ ಪೌರತ್ವ ಕಿತ್ತುಕೊಳ್ಳುವ ಕಾಯ್ದೆಯಲ್ಲ, ಮಾನವೀಯ ನೆಲೆಗಟ್ಟಿನಲ್ಲಿ ಸಂವಿಧಾನತ್ಮಕವಾಗಿ ಆಶ್ರಯ ಕೋರಿ ಬಂದವರಿಗೆ ಪೌರತ್ವ ನೀಡುವ ಕಾಯ್ದೆಯಾಗಿದೆ. ಇದರಿಂದ ದೇಶದ ಮುಸ್ಲಿಂ ಬಾಂಧವರು ಭಯಪಡುವ ಅವಶ್ಯಕತೆ ಇಲ್ಲ ಎಂದರು.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ಧ್ವನಿ ಮತ್ತು ಬೆಳಕು ಸಂಯೋಜಿಸಿ ರೂಪಕದ ಮುಖಾಂತರ ವಿಜಯನಗರ ವೈಭವ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಸುಂದರವಾದ ಬ್ಯಾಕ್ ಡ್ರಾಪ್ ಜತೆಗೆ ಸುಂದರವಾದ ಪ್ರದರ್ಶನ ಇದಾಗಿದೆ.3 ರಿಂದ 4 ಸಾವಿರ ಜನರಿಗೆ ನೋಡುವುದಕ್ಕೆ ‌ವ್ಯವಸ್ಥೆ ಮಾಡಲಾಗಿದ್ದು, ಜ.10 ರಿಂದ 16ರವರೆಗೆ ಸಂಜೆ 7ರಿಂದ 9:30ರವರೆಗೆ ನಡೆಯಲಿದೆ. ಜನರು ಬಂದು ವೀಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.

ಡ್ಯಾನ್ಸ್ ಕೋರಿಯಾಗ್ರಾಫರ್ ಡಾ.ಶೀಲಾ ಶ್ರೀಧರ್ ಮಾತನಾಡಿ, ಇದು 8ನೇ ಧ್ವನಿ ಮತ್ತು ಬೆಳಕು ರೂಪಕಕ್ಕೆ ಡ್ಯಾನ್ಸ್ ಕೊರಿಯಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದೇನೆ. ಹೊಸಪೇಟೆ ಮಕ್ಕಳೇ ಶೇ.90 ರಷ್ಟು ಇದ್ದಾರೆ. ಉಳಿದವರು ನುರಿತ ಕಲಾವಿದರಿದ್ದಾರೆ. ಸ್ಥಳೀಯ ‌ಮಕ್ಕಳಿಗೆ ಪ್ರತಿಭೆ ಪ್ರದರ್ಶಿಸುವುದಕ್ಕೆ‌ ಒಳ್ಳೆಯ ಅವಕಾಶವಾಗಿದೆ. ವಿಜಯನಗರ ಸಾಮ್ರಾಜ್ಯದ ಪ್ರದೇಶದಲ್ಲಿಯೇ ಈ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿಕೊಟ್ಟಿರುವುದು ಸಂತಸದ ತಂದಿದೆ. ಎಲ್ಲರ ಸಹಕಾರದೊಂದಿಗೆ ಪ್ರದರ್ಶನ ಮಾಡುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಶಾಸಕ‌ ಆನಂದಸಿಂಗ್, ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
 

click me!