ಕಾಂಗ್ರೆಸ್ನವರು ಯಾವಾಗಲೂ ಚರ್ಚೆ ಅಂದ್ರೆ ಓಡಿ ಹೋಗ್ತಾರೆ| ಎಲ್ಲ ಚುನಾವಣೆಗಳು ಒಂದೇ ಬಾರಿ ನಡೆಯುವುದರಿಂದ ಸಾರ್ವಜನಿಕರಿಗೆ ಅನುಕೂಲ| ಹಳೇ ಚಾಳಿ ಮುಂದುವರಿಸಿದರೆ ಜನರು ನಂಬಲ್ಲ| ಒಂದೇ ಚುನಾವಣೆ ಮಾಡಿದರೆ ಆರ್ಎಸ್ಎಸ್ ಅಜೆಂಡಾ ಹೇಗಾಗುತ್ತೆ?: ಶ್ರೀರಾಮುಲು|
ಗದಗ(ಮಾ.08): ಒಂದು ದೇಶ ಒಂದು ಚುನಾವಣೆ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕಿತ್ತು. ಇದು ಆಡಳಿತ ಮತ್ತು ಆರ್ಥಿಕ ದೃಷ್ಟಿಯಿಂದ ಹೆಚ್ಚಿನ ಅನುಕೂಲವಿತ್ತು. ಆದರೆ ವಿರೋಧ ಪಕ್ಷ ಇದರಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇದರ ಬಗ್ಗೆ ಸಾಕಷ್ಟು ಚರ್ಚೆಯಾಗಬೇಕಿತ್ತು. ಸಾಧಕ-ಬಾಧಕ ಕುರಿತು ನಡೆಯುವ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಅದನ್ನು ಬಿಟ್ಟು ಸದನದ ಬಾವಿಗಿಳಿದು ಪ್ರತಿಭಟನೆ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ನವರು ಯಾವಾಗಲೂ ಚರ್ಚೆ ಅಂದ್ರೆ ಓಡಿ ಹೋಗ್ತಾರೆ. ಇದು ಇವತ್ತಿನ ಕಾನೂನಲ್ಲ, ಪ್ರಧಾನಿ ಇಂದಿರಾ ಗಾಂಧಿ ಅವರು ಉಲ್ಲೇಖಿಸಿದ್ದಾರೆ. ಲಾ ಕಮಿಷನ್ ಕೂಡ ಉಲ್ಲೇಖ ಮಾಡಿದೆ. 2018ರಲ್ಲಿ ಡ್ರಾಪ್ ರಿಪೋರ್ಟ್ ಸಲ್ಲಿಸಿದೆ. ಎಲ್ಲ ಚುನಾವಣೆಗಳು ಒಂದೇ ಬಾರಿ ನಡೆಯುವುದರಿಂದ ಸಾರ್ವಜನಿಕರಿಗೆ ಅನುಕೂಲ ಆಗಲಿದೆ. ನಿಮ್ಮ ಸರ್ಕಾರ, ವಿಪಕ್ಷ ಇರುವಲ್ಲಿ ಮಾತ್ರ ಗೊಂದಲ ಮಾಡುತ್ತಿದ್ದಾರೆ.
ರಾಜಕಾರಣ ಹೊರತುಪಡಿಸಿ ಚರ್ಚೆಗೆ ಬನ್ನಿ ಎಂದು ಚರ್ಚೆಗೆ ಆಹ್ವಾನಿಸಿದ ಅವರು, ಹಳೇ ಚಾಳಿ ಮುಂದುವರಿಸಿದರೆ ಜನರು ನಂಬಲ್ಲ. ಒಂದೇ ಚುನಾವಣೆ ಮಾಡಿದರೆ ಆರ್ಎಸ್ಎಸ್ ಅಜೆಂಡಾ ಹೇಗಾಗುತ್ತೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಜೆಟ್ ನಿರೀಕ್ಷೆ: ಮಹದಾಯಿ ಕನಸು ನನಸಾಗುವುದೇ?
ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ಜೋಡೆತ್ತು ಎನ್ನುವ ಹೇಳಿಕೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಅವರೆಲ್ಲಾ ಜೋಡೆತ್ತುಗಳಲ್ಲ. ಬಯಲಿನಲ್ಲಿ ಬಿಟ್ಟು ಹೊಡೆದಾಡುವ ಹೋರಿಗಳು. ಇವನ್ನು ಎದುರಿಸುವ ಸಮರ್ಥ ಶಕ್ತಿ ಬಿಜೆಪಿಗೆ ಇದೆ. ಸೋಮವಾರ ಮುಖ್ಯಮಂತ್ರಿ ಬಜೆಟ್ ಮಂಡನೆ ಮಾಡಲಿದ್ದು, ಕೈಗಾರಿಕೆ, ಕೃಷಿ, ಆರೋಗ್ಯ, ಐಟಿ-ಬಿಟಿ, ಶಿಕ್ಷಣ ವಲಯಗಳಿಗೆ ಆದ್ಯತೆ ನೀಡುವ ಸಾಧ್ಯತೆ, ಕೊರೋನಾ ಬಳಿಕ ಜನರು ಬಹಳಷ್ಟುನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಡವರಿಗೆ, ಮಹಿಳೆಯರಿಗೆ ಕಾರ್ಮಿಕರಿಗೆ, ಯುವಕರಿಗೆ ಯೋಗ್ಯವಾದ ಬಜೆಟ್ ಮಂಡನೆ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.