'ಭಾರತದಲ್ಲಿ ಮೋದಿ ಕಾಂಗ್ರೆಸ್‌ ನಿರ್ನಾಮ ಮಾಡಿದ್ರೆ, ಕರ್ನಾಟಕದಲ್ಲಿ ಬಿಎಸ್‌ವೈ 'ಕೈ' ನಿರ್ನಾಮ ಮಾಡ್ತಾರೆ'

By Kannadaprabha NewsFirst Published Mar 31, 2021, 12:02 PM IST
Highlights

ಸುಳ್ಳಿನಿಂದಲೇ ಕಾಂಗ್ರೆಸ್‌ ಸೋಲುತ್ತಿದೆ| ಮಸ್ಕಿ ಕ್ಷೇತ್ರದಲ್ಲೂ ಕಾಂಗ್ರೆಸ್‌ ಸೋಲುವುದು ಖಚಿತ| ಯುವಕರನ್ನು ಒಗ್ಗೂಡಿಸಲು ವಿಜಯೇಂದ್ರ ಶ್ರಮ| ರಾಯಚೂರು ಜಿಲ್ಲೆಗೆ ಕಾಂಗ್ರೆಸ್‌ ಆಡಳಿತದಲ್ಲಿ ಕೊಡುಗೆ ಏನೆಂದು ತೋರಿಸಲಿ: ಸಚಿವ ಶ್ರೀರಾಮುಲು| 

ಮಸ್ಕಿ(ಮಾ.31): ದೇಶದಲ್ಲಿ ಕಾಂಗ್ರೆಸ್‌ ಮುಖಂಡರು ಚುನಾವಣೆಯಲ್ಲಿ ಕಂತೆ ಕಂತೆ ಸುಳ್ಳು ಹೇಳುತ್ತಿರುವುದರಿಂದಲೇ ಸೋಲುತ್ತಿದ್ದಾರೆ. ಮಸ್ಕಿ ಕ್ಷೇತ್ರದಲ್ಲಿ ಕೂಡ ಕಾಂಗ್ರೆಸ್‌ ಸೋಲುವುದು ಖಚಿತ ಎಂದು ಸಚಿವ ಬಿ.ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ.

ಮಸ್ಕಿ ಕ್ಷೇತ್ರದ ಮೆದಕಿನಾಳ ಗ್ರಾಮದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಅಭಿವೃದ್ಧಿಯನ್ನು ಕಡೆಗಣಿಸಿದ್ದರಿಂದ ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಬಂದಿದ್ದಾರೆ. ಆದರೆ ಅವರನ್ನು ಮಾರಾಟವಾಗಿದ್ದಾರೆ, ಗೋವಾ, ಮುಂಬೈ ಗಿರಾಕಿಗಳು ಎಂದು ಮಾತನಾಡುತ್ತಿರುವುದು ಅವರ ಸಂಸ್ಕೃತಿ ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈಗಾಗಲೇ 17 ಜನರಲ್ಲಿ 15 ಬಿಜೆಪಿಯಿಂದ ಗೆಲ್ಲುವ ಮೂಲಕ ಕಾಂಗ್ರೆಸ್‌ ಹೀನಾಯ ಸ್ಥಿತಿಗೆ ಹೋಗಿದೆ. ಭಾರತದಲ್ಲಿ ಮೋದಿ ಕಾಂಗ್ರೆಸ್‌ ನಿರ್ನಾಮ ಮಾಡಿದರೆ, ಕರ್ನಾಟಕದಲ್ಲಿ ಯಡಿಯೂರಪ್ಪ ಕಾಂಗ್ರೆಸ್‌ ನಿರ್ನಾಮ ಮಾಡಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ ಕೊಡುಗೆ ಏನು?

ರಾಯಚೂರು ಜಿಲ್ಲೆಗೆ ಕಾಂಗ್ರೆಸ್‌ ಆಡಳಿತದಲ್ಲಿ ಕೊಡುಗೆ ಏನೆಂದು ತೋರಿಸಲಿ. 2 ಸಾವಿರ ಕೋಟಿ ಕೋಟಿದ್ದೇವೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅವರೇನು ತಮ್ಮ ಮನೆಯಿಂದ ಕೊಟ್ಟಿದ್ದಾರೆಯೇ? ಪ್ರತಾಪಗೌಡ ಪಾಟೀಲ್‌ ಶಾಸಕರಾಗಿದ್ದರು ಅಭಿವೃದ್ಧಿಗಾಗಿ ಕೊಟ್ಟಿದ್ದೀರಿ. ಈ ಬಾರಿ ಪ್ರತಾಪಗೌಡ ಪಾಟೀಲ ಗೆದ್ದು ಬಂದ ಮೇಲೆ ಸಚಿವರಾಗಿ ಮಸ್ಕಿ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಮಾಡಲಿದ್ದಾರೆ. ಎಸ್‌ಟಿ ಸಮಾಜದ ಹೆಣ್ಣು ಮಗಳಿಗೆ ಜಾತಿ ಆಧಾರದ ಮೇಲೆ ರಕ್ಷಣೆ ಇಲ್ಲ, ಕಾನೂನು ರಕ್ಷಣೆ ಮಾಡುತ್ತದೆ. ಈಗಾಗಲೇ ಈ ಪ್ರಕರಣ ನ್ಯಾಯಾಂಗದಲ್ಲಿರುವುದರಿಂದ ನಾನು ಹೆಚ್ಚಿಗೆ ಪ್ರತಿಕ್ರಿಯೆಸಲಾರೆ ಎಂದರು. 5ಎ ತಾಂತ್ರಿಕ ಕಾರಣ ಪರಿಹರಿಸಿ ರೈತರ ಹಿತಕ್ಕಾಗಿ ಬಿಜೆಪಿ ಸರ್ಕರ ಯೋಜನೆ ಜಾರಿಗೆ ತರಲು ಬದ್ಧವಾಗಿದ್ದೇವೆ. ಆದರೆ ಇದುವರೆಗೆ ಆಡಳಿತ ಮಾಡಿದ ಕಾಂಗ್ರೆಸ್‌ ಈ ಯೋಜನೆ ಯಾಕೆ ಜಾರಿಗೊಳಿಸಲಿಲ್ಲ ಎಂದು ಪ್ರಶ್ನಿಸಿದರು.

'ಪ್ರತಾಪ್‌ಗೌಡ ತೀರಿಕೊಂಡಿಲ್ಲ, ಕ್ಷೇತ್ರದ ಜನ ತೀರಿಕೊಳ್ಳುವಂತೆ ಮಾಡಿದ್ದಾರೆ'

ಯುವಕರನ್ನು ಒಗ್ಗೂಡಿಸಲು ವಿಜಯೇಂದ್ರ ಶ್ರಮ

ಮಸ್ಕಿ ಕ್ಷೇತ್ರದ ಚುನಾವಣೆಯಲ್ಲಿ ಮುಖ್ಯಮಂತ್ರಿ ಸೇರಿ ಅನೇಕ ಸಚಿವರು ಮತ್ತು ಮುಖಂಡರು ಪ್ರಚಾರ ಕಾರ್ಯಕ್ಕೆ ಆಗಮಿಸಿದ್ದಾರೆ. ಆದರೆ ಪಕ್ಕದ ದೇವರ್ದುಗ ಶಾಸಕ ಶಿವನಗೌಡ ನಾಯಕ ಇದುವರೆಗೂ ಮಸ್ಕಿಗೆ ಆಗಮಿಸದಿರುವುದಕ್ಕೆ ಕಾರಣವೇನು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಮುಲು, ಅವರಿಗೆ ಕೈ ಪ್ರಾಕ್ಚರ್‌ ಆಗಿದೆ. ಹಾಗಾಗಿ ಬಂದಿಲ್ಲ. ಮುಂದಿನ ದಿನಗಳಲ್ಲಿ ಭಾಗವಹಿಸುವರು. ಬಿ.ವೈ.ವಿಜಯೇಂದ್ರ ಈಗ ರಾಜಕೀಯದಲ್ಲಿ ಬೆಳೆಯುತ್ತಿದ್ದಾರೆ.

ತಂದೆಯ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್‌ ಸಹಿಸಿಕೊಳ್ಳದೆ ವಿಜಯೇಂದ್ರನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ವಿಜಯೇಂದ್ರ ಬಂದರೆ ಹಣದ ಸುರಿಮಳೆ ಹಂಚುತ್ತಾರೆ ಎಂಬುದು ಶುದ್ಧ ಸುಳ್ಳು. ಎಲ್ಲಾ ಸಮಾಜದ ಯುವಕರನ್ನು ಒಗ್ಗೂಡಿಸುವುದಕ್ಕಾಗಿ ವಿಜಯೇಂದ್ರ ಶ್ರಮಿಸುತ್ತಿದ್ದಾರೆ ಎಂದು ಬಿ.ಶ್ರೀರಾಮುಲು ಹೇಳಿದರು.
 

click me!