ಮಳೆಯಿಂದ ಕಟಾವಿಗೆ ಬಂದಿದ್ದ ರಾಗಿ ಸಂಪೂರ್ಣ ಹಾನಿ

By Kannadaprabha NewsFirst Published Dec 6, 2019, 2:43 PM IST
Highlights

ಇನ್ನೇನು ಕೈ ಸೇರಬೇಕಿದ್ದ ರಾಗಿ ಬೆಳೆ ದಿಢೀರ್ ಸುರಿದ ಮಳೆಗೆ ನಾಶವಾಗಿದೆ. ಮಲೆ ಮಹದೇಶ್ವರ ಬೆಟ್ಟಸುತ್ತಮುತ್ತಲಿನ ಕುಗ್ರಾಮಗಳಾದ ಆನೆಹೊಲ, ಇಂಡಿಗನತ್ತ, ಕೊಂಬುಡಿಕ್ಕಿ, ದೊಡ್ಡಾಣೆ, ನಾಗಮಲೆ ಸೇರಿದಂತೆ ಇನ್ನಿತರೆ ಕುಗ್ರಾಮಗಳ ಜಮೀನುಗಳಲ್ಲಿ ಮಳೆಯಿಂದ ರಾಗಿ, ನವಣೆ, ಸಾಮೆ ಫಸಲುಗಳು ನೆಲಕಚ್ಚಿವೆ.

ಚಾಮರಾಜನಗರ(ಡಿ.06): ಮಲೆ ಮಹದೇಶ್ವರ ಬೆಟ್ಟವ್ಯಾಪ್ತಿಯ ಗ್ರಾಮಗಳ ಜಮೀನುಗಳಲ್ಲಿ ಕಟಾವಿಗೆ ಬಂದಿದ್ದ ಸಾವಯವ ಕೃಷಿ ಪದ್ಧತಿಯ ರಾಗಿ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ಸಂಪೂರ್ಣವಾಗಿ ಹಾನಿಯಾಗಿದೆ.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಸುತ್ತಮುತ್ತಲಿನ ಕುಗ್ರಾಮಗಳಾದ ಆನೆಹೊಲ, ಇಂಡಿಗನತ್ತ, ಕೊಂಬುಡಿಕ್ಕಿ, ದೊಡ್ಡಾಣೆ, ನಾಗಮಲೆ ಸೇರಿದಂತೆ ಇನ್ನಿತರೆ ಕುಗ್ರಾಮಗಳ ಜಮೀನುಗಳಲ್ಲಿ ಮಳೆಯಿಂದ ರಾಗಿ, ನವಣೆ, ಸಾಮೆ ಫಸಲುಗಳು ನೆಲಕಚ್ಚಿವೆ.

ಸಂತೆಗೆ ಬರ್ತಿಲ್ಲ ತಮಿಳುನಾಡಿನ ಈರುಳ್ಳಿ ಬೀಜ ಮಾರಾಟಗಾರರು..!

ಈ ಗ್ರಾಮಗಳ ಜಮೀನುಗಳಲ್ಲಿ ರೈತರು ಹಿಂದಿನಿಂದಲೂ ಸಹ ಸಾವಯವ ಕೃಷಿ ಪದ್ಧತಿಯನ್ನೇ ಮುಂದುವರೆಸಿಕೊಂಡು ಬಂದಿದ್ದು, ಇದುವರೆಗೂ ಯಾವುದೇ ರಾಸಾಯನಿಕ ಔಷಧಿ, ಮತ್ತು ಗೊಬ್ಬರವನ್ನು ಬಳಸದೇ ಈ ಭಾಗದಲ್ಲಿ ಹೆಚ್ಚಾಗಿ ಜಾನುವಾರುಗಳನ್ನು ಸಾಕಾಣೆ ಮಾಡುತ್ತಿರುವುದರಿಂದ ಕೊಟ್ಟಿಗೆ ಗೊಬ್ಬರಗಳನ್ನು ಬಳಸಿ ಫಸಲು ಬೆಳೆಯುತ್ತಿದ್ದರು.

ಸಾವಯುವ ಪದ್ಧತಿ:

ಈ ಬಾರಿ ಬೆಳೆಯಲಾಗಿರುವ ರಾಗಿ, ನವಣೆ, ಸಾಮೆ ಫಸಲು ಎಡೆಬಿಡದೆ ಸುರಿದ ಮಳೆಯಿಂದ ಒಕ್ಕಣೆ ಜಮೀನುಗಳಲ್ಲಿ ನೀರು ನಿಂತಿತ್ದರಿಂದ ಕಟಾವು ಮಾಡಿ ಒಕ್ಕಣೆ ಮಾಡಲು ಸಾಧ್ಯವಾಗದೇ ಇದ್ದುದರಿಂದ ಫಸಲು ಸಂಪೂರ್ಣವಾಗಿ ನೆಲೆಕಚ್ಚಿದೆ. ಸಾವಯವ ಪದ್ಧತಿಯಿಂದ ಬೆಳೆದ ಫಸಲಿನಿಂದ ರೈತರು ನಷ್ಟವನ್ನು ಅನುಭವಿಸುವಂತಾಗಿದ್ದು, ಅಕಾಲಿಕ ಮಳೆಗೆ ಬೆಳೆ ಹಾಳಾಗಿರುವುದರಿಂದ ಕೂಡಲೇ ಸಂಬಂಧಪಟ್ಟಜಿಲ್ಲಾಡಳಿತ ನೆರವಿಗೆ ಧಾವಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಗ್ರಾಮಗಳಲ್ಲಿಯೂ ಮಳೆಯಿಂದ ಹಾನಿ:

ಹನೂರು ಸಮೀಪದ ಪಿ.ಜಿ.ಪಾಳ್ಯ, ಮಂಗಲ, ಗುಂಡಾಪುರ, ಹಾಗೂ ಬಂಡಳ್ಳಿ ಇನ್ನಿತರ ಗ್ರಾಮಗಳ ರೈತರು ಕಟಾವಿಗೆ ಬಂದಿದ್ದ ರಾಗಿ ಬೆಳೆಯು ಎಡೆಬಿಡದೆ ಸುರಿದ ಅಕಾಲಿಕ ಮಳೆಯಿಂದ ನೆಲಕಚ್ಚಿ ಮೊಳಕೆ ಬರುವ ಹಂತದಲ್ಲಿದೆ. ಆದುದರಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು ಸಂಬಂಧಪಟ್ಟಇಲಾಖಾ ಅಧಿಕಾರಿಗಳನ್ನು ಜಮೀನುಗಳಿಗೆ ಕಳುಹಿಸಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕೆಂದು ಹನೂರು ರೈತ ಸಂಘಟನೆಯ ಅಧ್ಯಕ್ಷ ಚಂಗಡಿ ಕರಿಯಪ್ಪ ಒತ್ತಾಯಿಸಿದ್ದಾರೆ.

ಹೈದರಾಬಾದ್ ಎನ್‌ಕೌಂಟರ್: ಕಾಫಿ ನಾಡಲ್ಲಿ ಪಟಾಕಿ ಸಿಡಿಸಿ ಸಂಭ್ರಮ

ಮಲೆ ಮಹದೇಶ್ವರ ಬೆಟ್ಟವ್ಯಾಪ್ತಿಯ ನಾಗಮಲೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾವುದೇ ರಾಸಾಯನಿಕ ಹಾಗೂ ಕೀಟನಾಶಕ ಬಳಸದೆ ಕೊಟ್ಟಿಗೆ ಗೊಬ್ಬರವನ್ನು ಬಳಸಿ ಪ್ರತಿವರ್ಷದಂತೆ ಈ ಬಾರಿಯೂ ನನ್ನ ಮೂರು ಎಕರೆ ಜಮೀನಿನಲ್ಲಿ ರಾಗಿ ಮತ್ತು ಅವರೆ ಬೆಳೆಯಲಾಗಿದ್ದು, ರಾಗಿ ಬೆಳೆ ಕಟಾವಿಗೆ ಬಂದಿದ್ದ ವೇಳೆ ಜಿಟಿ ಜಿಟಿ ಮಳೆಯಿಂದ ಕಟಾವು ಮಾಡದೇ ನಷ್ಟವುಂಟಾಗಿದೆ ಎಂದು ನಾಗಮಲೆ ನಾಗತಂಬಡಿ ಹೆಳಿದ್ದಾರೆ.

click me!