ಬಿಜೆಪಿ ಹೆಚ್ಚು ಸ್ಥಾನ ಗೆಲ್ಲೋದ್ರಲ್ಲಿ ಡೌಟೇ ಇಲ್ಲ : ಕೈ ಶಾಸಕ

By Suvarna NewsFirst Published Dec 6, 2019, 2:39 PM IST
Highlights

ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನದಲ್ಲಿ ಗೆಲ್ಲಲಿದೆ. ಇದರಲ್ಲಿ ಅನುಮಾನವೇ ಇಲ್ಲ ಎಂದು ಕೈ ಶಾಸಕರೋರ್ವರು ಹೇಳಿದ್ದಾರೆ. 

ಕೊಪ್ಪಳ [ಡಿ.06]: ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯವರು ಹೆಚ್ಚು ಸ್ಥಾನ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಭಯ್ಯಾಪೂರ ಹೇಳಿದ್ದಾರೆ. 

ಕೊಪ್ಪಳದ ಕುಷ್ಟಗಿಯಲ್ಲಿ ಮಾತನಾಡಿದ ಅಮರೇಗೌಡ ನಮ್ಮವರು ಹೆಚ್ಚು ಸೀಟ್ ಗೆಲ್ತೀವಿ ಎಂದು ಎಂದು ಹೇಳಬಹುದು. ಆದರೆ ಬಿಜೆಪಿಯವರು ಹಣ ಅಧಿಕಾರ ಬಳಸಿಕೊಂಡು ಹೆಚ್ಚು ಸ್ಥಾನವನ್ನು ಅಲ್ಪ ಮತದ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಹೇಳಿದರು.

ಇನ್ನು ರಾಜ್ಯದಲ್ಲಿ ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಿದವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ. ಯಾರು ಮಿತ್ರರೂ ಅಲ್ಲ ಎಂದರು. 

'ಹಣ ಹಂಚಲಾರದೇ ಚುನಾವಣೆ ನಡೆದಿದ್ರೆ ನಾನೇ ಗೆಲ್ತೀನಿ'...

ಕೆಟ್ಟ ಸರ್ಕಾರ ತೆಗೆಯಬೇಕು ಎಂದರೆ ಕಡಿಮೆ ಕೆಟ್ಟವರ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಕು ಎಂದು ಪರೋಕ್ಷವಾಗಿ ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ. ಜೆಡಿಎಸ್ ಗಿಂತ ಬಿಜೆಪಿ ಕಡಿಮೆ ಕೆಟ್ಟಿದೆ. ಹೀಗಾಗಿ ಅವರ ಜೊತೆಗೆ ಮರು ಮೈತ್ರಿ ಮಾಡಿಕೊಂಡರೆ ತಪ್ಪೇನಿಲ್ಲ ಎಂದು ಹೇಳಿದರು. 

ಇನ್ನು ಅನರ್ಹರನ್ನು ರಾಜ್ಯದಲ್ಲಿ ಮಂತ್ರಿ ಮಾಡಿದರೆ ಬಿಜೆಪಿ ಒಳ್ಳೆಯ ಶಾಸಕರು ರಾಜೀನಾಮೆ ಕೊಡುವ ಸಾಧ್ಯತೆ ಇದೆ. ಅನರ್ಹರನ್ನು ಮಂತ್ರಿ ಮಾಡುವುದು ಎಂದರೆ ಅನಾಚಾರ ಮಾಡಿದಂತೆ. ಬಿಜೆಪಿಯಲ್ಲಿಯೂ ಕೆಲವರು ನೊಂದಿದ್ದು, ಅವರು ರಾಜೀನಾಮೆ ಕೊಟ್ಟು ಬಂದರೆ ನಾವೇರೆ ಸರ್ಕಾರ ರಚನೆ ಮಾಡಬಾರದು ಎಂದು ಅಮರೇಗೌಡ ಹೇಳಿದರು. 

ಡಿಸೆಂಬರ್ 5 ರಂದು ರಾಜ್ಯದ 15 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು ಡಿಸೆಂಬರ್ 9 ರಂದು ಫಲಿತಾಂಶ ಪ್ರಕಟವಾಗಲಿದೆ.

click me!