ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಬಂಪರ್ ಘೋಷಣೆ

By Kannadaprabha NewsFirst Published Dec 14, 2019, 12:45 PM IST
Highlights

ಜೆಡಿಎಸ್ ನಾಯಕ ಮಾಜಿ ಸಚಿವ ಎಚ್ ಡಿ ರೇವಣ್ಣ ಭರ್ಜರಿ ಘೋಷಣೆ ಮಾಡಿದ್ದಾರೆ. ರೈತರಿಗೂ ಗುಡ್ ನ್ಯೂಸ್ ನೀಡಿದ್ದಾರೆ. 

ಹಾಸನ (ಡಿ.14]:   ಪ್ರಸಕ್ತ ಸಾಲಿನ ನವೆಂಬರ್‌ ಅಂತ್ಯಕ್ಕೆ ಹಾಸನ ಹಾಲು ಒಕ್ಕೂಟವು ಸುಮಾರು 50 ಕೋಟಿ ರು. ತೆರಿಗೆ ಪೂರ್ವ ಲಾಭ ಗಳಿಸಿದ್ದು, ಗಳಿಸಿರುವ ಲಾಭವನ್ನು ಹಾಲು ಉತ್ಪಾದಕರಿಗೆ ಆರ್ಥಿಕ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಪ್ರತಿ ಲೀಟರ್ ಹಾಲಿಗೆ 1 ರು. ದರ ಹೆಚ್ಚಳ ಮಾಡಲಾಗಿದೆ ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಎಚ್‌.ಡಿ. ರೇವಣ್ಣ ಹೇಳಿದರು.

ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಶುಕ್ರವಾರ ನಡೆದ  ಕೂಲರ್‌ ಕೇಂದ್ರ ಮತ್ತು ಸ್ವಯಂ ಚಾಲಿತ ಹಾಲು ಸಂಗ್ರಹಣೆ ಘಟಕಗಳ ಕಾರ್ಯಾಗಾರ ಹಾಗೂ ಹಾಲು ಉತ್ಪಾದಕರ ಸಂಘಗಳ ಕುಂದುಕೊರತೆಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಹಾಸನ ಹಾಲು ಒಕ್ಕೂಟವು ರಾಜ್ಯದಲ್ಲಿ ಅತಿ ಹೆಚ್ಚು ಹಾಲಿನ ದರ ನೀಡುತ್ತಿದ್ದು, ಎ.ದರ್ಜೆಯ ಶ್ರೇಣಿ ಪಡೆದಿದೆ. ಇದು ಎಲ್ಲ ಸಹಕಾರಿ ಸಂಘಗಳ ಹೆಮ್ಮೆಯಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಸಂಘಗಳನ್ನು ವಿಸ್ತರಿಸುವ ಮೂಲಕ ಹಾಸನ ಹಾಲು ಒಕ್ಕೂಟವನ್ನು ಅಭಿವೃದ್ಧಿ ಪಡಿಸಲಾಗುವುದು. ಕೌಶಿಕದಲ್ಲಿ ಈಗಾಗಲೇ 53 ಎಕರೆ ಜಮೀನು ಖರೀದಿಸಲಾಗಿದ್ದು, 504 ಕೋಟಿ ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.

ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ 105 ಸಂಘಗಳಲ್ಲಿ  ಕೂಲರ್‌ ಘಟಕಗಳಲ್ಲಿ ಬಿಎಂಸಿ ಘಟಕ ಅಳವಡಿಸಲಾಗಿದೆ. ಬಿಎಂಸಿಗಳ ಅಳವಡಿಕೆಗಾಗಿ ಒಕ್ಕೂಟದಿಂದ ಸುಮಾರು 8 ಕೋಟಿ ಗಳಷ್ಟುಅನುದಾನ ನೀಡಲಾಗಿದೆ. ಬಿಎಂಸಿ ಘಟಕಗಳ ಸ್ಥಾಪನೆಯಿಂದ ಸುಮಾರು 400 ಸಂಘಗಳಿಂದ ದಿನಕ್ಕೆ ಸುಮಾರು 3.20 ಲಕ್ಷ ಲೀಟರ್‌ ಹಾಲನ್ನು ಸಂಘಗಳಲ್ಲಿಯೇ ಶೈತೀಕರಿಸಿ ಟ್ಯಾಂಕರ್‌ಗಳಲ್ಲಿ ಡೈರಿಗೆ ತರಲಾಗುವುದು. ಇದರಿಂದಾಗಿ ಹಾಲಿನ ಗುಣಮಟ್ಟಉತ್ತಮಗೊಳ್ಳುವುದರ ಜೊತೆಗೆ ಸಂಘಗಳಲ್ಲಿ ಹಾಲಿನ ಶೇಖರಣೆ ಹೆಚ್ಚಳ ಮತ್ತು ಆರ್ಥಿಕ ಅಭಿವೃದ್ಧಿಗೆ ಕಾರಣವಾಗಲಿದೆ ಎಂದರು.

ಉಪಚುನಾವಣೆ ಸೋಲಿನ ಬೆನ್ನಲ್ಲೇ ಪಕ್ಷ ಬಿಡುವ ಮಾತಾಡಿದ ಜೆಡಿಎಸ್ ಪ್ರಭಾವಿ ಮುಖಂಡ...

ಪಶುಪಾಲನಾ ಇಲಾಖೆಯ ಉಪ ನಿರ್ದೇಶಕಿ ಜಾನಕಿ ಮಾತನಾಡಿ, ರೈತರು ಹಸುಗಳನ್ನು ಕೇವಲ ಹಾಲು ಕರೆಯುವ ಯಂತ್ರಗಳನ್ನಾಗಿ ಮಾಡಿಕೊಳ್ಳಬಾರದು ಹಸುಗಳನ್ನು ತಾಯಿಯಂತೆ ಭಾವಿಸಿ ಅವುಗಳ ಪೋಷಣೇಯಲ್ಲಿ ಜಾಗ್ರತೆ ವಹಿಸಬೇಕು ಅವುಗಳ ಆಹಾರ ಪದ್ಧತಿಯಲ್ಲಿ ವಿಷಪೂರಿತ ಆಹಾರ ಪದಾರ್ಥಗಳನ್ನು ಕಡಿಮೆ ಮಾಡಿ ಗೋವುಗಳ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದರು.

ಈ ವೇಳೆ ಒಕ್ಕೂಟದ ನಿರ್ದೇಶಕ ಹೊನ್ನವಳ್ಳಿ ಸತೀಶ್‌, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಇತರರು ಇದ್ದರು.

ಎಎಂಸಿಯು ಘಟಕ ಸ್ಥಾಪನೆ :  ಒಕ್ಕೂಟದ ವ್ಯಾಪ್ತಿಯ ಸುಮಾರು 800 ಸಂಘಗಳಲ್ಲಿ ದೈನಂದಿನ ವ್ಯವಹಾರಗಳಲ್ಲಿ ಹಾಲಿನ ಪರೀಕ್ಷೆ ಮತ್ತು ನಿಖರವಾದ ತೂಕ ಮುಂತಾದ ಚಟುವಟಿಕೆಗಳಿಗೆ ಸ್ವಯಂ ಚಾಲಿತ ಹಾಲು ಸಂಗ್ರಹಣೆ ಘಟಕ ಅಳವಡಿಸಲಾಗಿದೆ. ಇದರಿಂದಾಗಿ ಹಾಲು ಉತ್ಪಾದಕರಿಗೆ ಆಯಾ ದಿನವೇ ಅವರು ಪೂರೈಸಿದ ಹಾಲಿನ ತೂಕ, ಗುಣಮಟ್ಟಇತ್ಯಾದಿ ಮಾಹಿತಿಗಳನುಸಾರ ಚೀಟಿ ನೀಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಎಚ್‌.ಡಿ. ರೇವಣ್ಣ ಹೇಳಿದರು.

ಈಗಾಗಲೇ 1200 ಸಂಘಗಳಲ್ಲಿ ಎಎಂಸಿಯು ಘಟಕ ಸ್ಥಾಪಿಸಲಾಗಿದ್ದು, ಉಳಿದ 300 ಸಂಘಗಳಲ್ಲಿ ಒಂದು ವರ್ಷದ ಅವಧಿಯೊಳಗೆ ಎಎಂಸಿಯು ಘಟಕ ಅಳವಡಿಸಿ ಎಲ್ಲ ಸಂಘಗಳ ವ್ಯವಹಾರಗಳನ್ನು ಪೂರ್ಣವಾಗಿ ಗಣಕೀಕರಣಗೊಳಿಸಲಾಗುವುದು. ಒಕ್ಕೂಟದ ಸ್ವಂತ ಬಂಡವಾಳದಿಂದ 66 ಕೋಟಿ ವೆಚ್ಚದಲ್ಲಿ ಯುಎಚ್‌ಟಿ ಹಾಲಿನ ಉತ್ಪಾದನಾ ಘಟಕದ ಸಾಮರ್ಥ್ಯವನ್ನು ದಿನವಹಿ 2ಲಕ್ಷ ಲೀಟರ್‌ ಗಳಿಂದ 4 ಲಕ್ಷ ಲೀಟರ್‌ಗಳಿಗೆ ವಿಸ್ತರಿಸಲಾಗಿದೆ ಎಂದರು.

click me!