Blackbucks Back in Karnataka : ಆಂಧ್ರಕ್ಕೆ ಗುಳೆ ಹೋಗಿದ್ದ ಕೃಷ್ಣ ಮೃಗಗಳು ಮರಳಿ ತವರಿಗೆ

By Kannadaprabha NewsFirst Published Dec 12, 2021, 11:49 AM IST
Highlights
  • ಆಂಧ್ರಕ್ಕೆ ಗುಳೆಹೋಗಿದ್ದ ಕೃಷ್ಣಮೃಗಗಳು ಮರಳಿ ತವರಿಗೆ
  •  ಹುಲ್ಲುಗಾವಲಿಲ್ಲದೆ ಆಹಾರ ಅರಸಿ ಹೋಗಿದ್ದ ಪ್ರಾಣಿಗಳು
  • ತುಮಕೂರಿನ ಮೈದನಹಳ್ಳಿಯತ್ತ ಆಗಮನ ಶುರು

ವರದಿ : ಉಗಮ ಶ್ರೀನಿವಾಸ್‌

  ತುಮಕೂರು (ಡಿ.12) : ಹುಲ್ಲು ಗಾವಲುಗಳು ಒಣಗಿ ಆಹಾರ ಸಿಗದೇ 6 ತಿಂಗಳ ಹಿಂದೆ ಆಂಧ್ರ ಪ್ರದೇಶ (Andhra pradesh) ಹಾಗೂ ಸೀಮಾಂದ್ರಕ್ಕೆ ವಲಸೆ ಹೋಗಿದ್ದ ಕೃಷ್ಣ ಮೃಗಗಳು (Blackbucks) ಮತ್ತೆ ತುಮಕೂರು (Tumakur) ಜಿಲ್ಲೆ ಮಧುಗಿರಿ ತಾಲೂಕು ಮೈದನ ಹಳ್ಳಿಯತ್ತ ಹಿಂಡು ಹಿಂಡಾಗಿ ಆಗಮಿಸುತ್ತಿವೆ. ಕಳೆದ ತಿಂಗಳು ವಾರ ಗಟ್ಟಲೆ ಸುರಿದ ಮಳೆಯಿಂದಾಗಿ (Rain) ತುಮಕೂರು ಜಿಲ್ಲೆಯ ಕೆರೆ ಕಟ್ಟೆಗಳು, ನದಿಗಳು (River) ತುಂಬಿವೆ. ಅಲ್ಲದೆ ಒಣಗಿದ್ದ ಹುಲ್ಲು ಗಾವಲುಗಳು ನಳ ನಳಿಸುತ್ತಿವೆ. ಹೀಗಾಗಿ ನೂರಾರು ಸಂಖ್ಯೆಯಲ್ಲಿ ವಲಸೆ ಹೋಗಿದ್ದ ಕೃಷ್ಣ ಮೃಗಗಳು ಮತ್ತೆ ವಾಪಸ್‌ ಮೈದನ ಹಳ್ಳಿಗೆ ಆಗಮಿಸುತ್ತಿವೆ. ಇದರಿಂದ ಎಲ್ಲೆಲ್ಲೂ ಕೃಷ್ಣ ಮೃಗಗಳ ಸಂಭ್ರಮ ಕಾಣುತ್ತಿದೆ.

ಮೈದನಹಳ್ಳಿ ಸುತ್ತಮುತ್ತ ವ್ಯಾಪಕವಾಗಿ ಕೃಷ್ಣ ಮೃಗಗಳು ವಾಸವಾಗಿವೆ. ಸರ್ಕಾರ (Karnataka govt) ಈ ಪ್ರದೇಶವನ್ನು ಜಯ ಮಂಗಲಿ ಕೃಷ್ಣ ಮೃಗ ವನ್ಯಜೀವಿ ಧಾಮವನ್ನಾಗಿ ಘೋಷಿಸಿತ್ತು. ಆದರೆ 900 ಎಕರೆ ಪ್ರದೇಶದಲ್ಲಿ ಹೆಚ್ಚಾಗಿ ಅರಣ್ಯ ಇಲಾಖೆಯವರು ಅಕೇಶಿಯಾ, ಲಾಂಟನಾ, ಕಮರ ಮರಗಳನ್ನು ನೆಟ್ಟಿದ್ದರು. ಆದರೆ ಕೃಷ್ಣ ಮೃಗಗಳು ಹೆಚ್ಚಾಗಿ ಬಯಸುವುದು ಹುಲ್ಲು ಗಾವಲುಗಳನ್ನು. ಹೀಗಾಗಿ ಕೃಷ್ಣ ಮೃಗಗಳು ಅರಣ್ಯದಲ್ಲಿ (Forest) ಇರದೆ ರೈತರ ನೂರಾರು ಎಕರೆ ಪ್ರದೇಶದಲ್ಲಿ ಆಹಾರಕ್ಕಾಗಿ(Food) ನೆಲೆ ನಿಂತವು.

ನೂರಾರು ಸಂಖ್ಯೆಯಲ್ಲಿ ರೈತರ (farmers) ತೋಟಗಳಿಗೆ ಕೃಷ್ಣ ಮೃಗಗಳು ನುಗ್ಗುತ್ತಿದ್ದರಿಂದ ರೈತರ ಬೆಳೆ (Crops) ಕೈಗೆ ಬಾರದ ಸ್ಥಿತಿ ನಿರ್ಮಾಣವಾಗಿ ಅನ್ನದಾತರು ಕೃಷ್ಣ ಮೃಗಗಳಿಗಾಗಿ ಕೃಷಿಯನ್ನೇ (Agriculture) ಬಿಟ್ಟು ಬಿಟ್ಟಿದ್ದರು. ಕೃಷಿ ಬಿಟ್ಟಿದ್ದ ರೈತರಿಗೆ ಸರ್ಕಾರ (Karnataka Govt) ಕೊಡುತ್ತಿದ್ದ ಪರಿಹಾರ ಸಾಲುತ್ತಿರಲಿಲ್ಲ. ಆಗ ದೊಡ್ಡ ರೈತರು ದ್ರಾಕ್ಷಿ ತೋಟ, ಅಡಕೆ, ಬಾಳೆ (Banana) ಹಾಗೂ ಫಾರಂಗಳನ್ನು ಮಾಡತೊಡಗಿದರು. ಆಗ ಅನಿವಾರ್ಯವಾಗಿ ಕೃಷ್ಣ ಮೃಗಗಳ ಸ್ವಚ್ಛಂದ ಓಡಾಟಕ್ಕೆ ಕೊಂಚ ತೊಂದರೆಯಾಯಿತು. ಈ ಮಧ್ಯೆ ಮೈದನ ಹಳ್ಳಿ ಸುತ್ತಮುತ್ತ ಮಳೆಯಿಲ್ಲದೆ ಹುಲ್ಲು ಗಾವಲುಗಳು ಒಣಗ ತೊಡಗಿತು. ಇದಲ್ಲದೆ ಮಧ್ಯೆ ಕೆಲ ಫಾರಂನವರು ನಾಯಿಗಳನ್ನು (Dog) ಸಾಕಿದ್ದರು. ಇವು ಕೃಷ್ಣ ಮೃಗಗಳ ಮರಿಗಳನ್ನು ಸಾಯಿಸುತ್ತಿದ್ದವು.

ಸರಿ ಸುಮಾರು ಸಾವಿರಕ್ಕೂ ಹೆಚ್ಚು ರೈತರ ತೋಟಗಳಲ್ಲಿ ಅಡ್ಡಾಡುತ್ತಿದ್ದ ಕೃಷ್ಣ ಮೃಗಗಳಿಗೆ ಮೇವು ಸಿಗದೆ ಬಡಕಲಾಗಿ ಆಹಾರ ಅರಸಿ ಆಂಧ್ರ ಪ್ರದೇಶ ಮತ್ತು ಸೀಮಾಂದ್ರಕ್ಕೆ ವಲಸೆ (Migration) ಹೊರಟವು. ಬೆರಳೆಣಿಕೆ ಯಷ್ಟು ಕೃಷ್ಣ ಮೃಗಗಳು ಮಾತ್ರ ಮೈದನಹಳ್ಳಿ ಸುತ್ತಮುತ್ತ ಅಡ್ಡಾಡುತ್ತಿದ್ದವು. ಪ್ರತಿ ದಿನ ಹಿಂಡು ಹಿಂಡು ಕೃಷ್ಣ ಮೃಗಗಳನ್ನು ಆ ಭಾಗದ ರೈತರು ನೋಡದೆ ಇದ್ದರೆ ಏನನ್ನೋ ಕಳೆದುಕೊಂಡಂತಹ ಭಾವ. ಆದರೆ ಕಳೆದ 6-7 ತಿಂಗಳಿನಿಂದ ಆಹಾರ ಸಿಗದೆ ವಲಸೆ ಹೋಗಿದ್ದ ಕೃಷ್ಣ  ಮೃಗಗಳು ಮತ್ತೆ ಈಗ ವಾಪಾಸ್‌ ಆಗಿವೆ.

ಮೈದನಹಳ್ಳಿ ಸುತ್ತಮುತ್ತ ದ್ರಾಕ್ಷಿ ತೋಟ (Grapes farm), ಅಡಿಕೆ (Areca),  ತೆಂಗು ತೋಟಗಳಲ್ಲಿ ಅನಾವಶ್ಯಕವಾಗಿ ಬಲೆ ಹಾಗೂ ತಂತಿ ಬೇಲಿ  ನಿರ್ಮಾಣ ಮಾಡಿದ್ದಾರೆ. ಬಲೆಗೆ ಬಿದ್ದು ಪ್ರಾಣಿ (Animals) ಪಕ್ಷಿಗಳ (Birds) ಜೀವಕ್ಕೆ ಕುತ್ತುಂಟಾಗಿದೆ. ಕೃಷ್ಣ ಮೃಗಗಳ ಸ್ವಚ್ಛಂದ ಓಡಾಟಕ್ಕೆ ಪೂರಕವಾಗಿ ವಾತಾವರಣ ನಿರ್ಮಾಣ ಮಾಡಬೇಕು.

-ಬಿ.ವಿ.ಗುಂಡಪ್ಪ, ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ

  • ಆಂಧ್ರಕ್ಕೆ ಗುಳೆಹೋಗಿದ್ದ ಕೃಷ್ಣಮೃಗಗಳು ಮರಳಿ ತವರಿಗೆ
  •  ಹುಲ್ಲುಗಾವಲಿಲ್ಲದೆ ಆಹಾರ ಅರಸಿ ಹೋಗಿದ್ದ ಪ್ರಾಣಿಗಳು
  • ತುಮಕೂರಿನ ಮೈದನಹಳ್ಳಿಯತ್ತ ಆಗಮನ ಶುರು
click me!