Belagavi Violence: ಎಂಇಎಸ್‌ನವರು ದೇಶದ್ರೋಹಿಗಳು: ಸಚಿವ ಆರಗ ಜ್ಞಾನೇಂದ್ರ

By Kannadaprabha NewsFirst Published Dec 22, 2021, 10:20 AM IST
Highlights

*  ಪ್ರತಿಮೆಗೆ ಅವಮಾನ: ಕಿಡಿಗೇಡಿಗಳನ್ನು ಮಟ್ಟಹಾಕದೆ ಬಿಡಲ್ಲ
*  ಈ ಕೃತ್ಯಗಳ ಹಿಂದೆ ಯಾವುದೋ ಸಂಘ-ಸಂಸ್ಥೆ ಕೈವಾಡ
*  ಎಂಇಎಸ್‌ ನಿಷೇಧಕ್ಕೆ ಚಿಂತನೆ ನಡೆಸಲಾಗಿದೆ 

ಬೆಳಗಾವಿ(ಡಿ.22):  ರಾಜ್ಯದಲ್ಲಿ(Karnataka) ಶಾಂತಿ ಕದಡುವವರನ್ನು, ಬೆಂಗಳೂರಿನಲ್ಲಿ ಶಿವಾಜಿ ಹಾಗೂ ಬೆಳಗಾವಿಯಲ್ಲಿ(Belagavi) ರಾಯಣ್ಣನ ಪುತ್ಥಳಿಗೆ ಅವಮಾನಿಸಿದ ಕಿಡಿಗೇಡಿಗಳನ್ನು ಮಟ್ಟಹಾಕದೆ ಬಿಡುವುದಿಲ್ಲ. ಎರಡೂ ರಾಜ್ಯಗಳ ನಡುವೆ ಬೆಂಕಿ ಹಚ್ಚುವ ದುಷ್ಕರ್ಮಿಗಳ ವಿರುದ್ಧ ಬಿಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಹೇಳಿದರು.

ನಗರದ ಅನಗೋಳ ಪ್ರದೇಶದ ಕನಕದಾಸ ಕಾಲೊನಿಯಲ್ಲಿ ಭಗ್ನಗೊಳಿಸಲಾಗಿದ್ದ ರಾಯಣ್ಣನ ಪ್ರತಿಮೆ ಸ್ಥಳದಲ್ಲೇ ಮರು ಪ್ರತಿಷ್ಠಾಪಿಸಲಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ(Sangolli Rayanna) ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಮಹಾರಾಷ್ಟ್ರ ಏಕೀರಣ ಸಮಿತಿ(MES) ನಿಷೇಧಿಸುವ ಕುರಿತು ಚಿಂತನೆ ನಡೆಸಲಾಗಿದೆ. ಅವರು ದೇಶಭಕ್ತರಲ್ಲ. ದೇಶದ್ರೋಹಿಗಳು ಎಂದು ಗುಡುಗಿದರು. ಈ ಭಾಗದಲ್ಲಿ ಕನ್ನಡಿಗರು(Kannadigas) ಹಾಗೂ ಮರಾಠಿಗರು(Marathas) ಅನ್ಯೋನ್ಯವಾಗಿದ್ದಾರೆ. ಸುಖ, ಸಂತೋಷದಿಂದ ಇವರಿಬ್ಬರೂ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಕೆಲ ಕಿಡಿಗೇಡಿಗಳು ಇವರ ನಡುವೆ ಹುಳಿ ಹಿಂಡುವ ಕೆಲಸ ಮಾಡಿದ್ದಾರೆ. ಇವರನ್ನು ನಾವು ಖಂಡಿತವಾಗಿಯೂ ಬಿಡುವುದಿಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲರ ಮೇಲೂ ಕ್ರಮಕೈಗೊಳ್ಳಲಾಗುವುದು. ರಾಯಣ್ಣನನ್ನು ಬ್ರಿಟಿಷರಿಗೆ(British) ಹಿಡಿದುಕೊಟ್ಟಂಥ ವ್ಯಕ್ತಿಗಳು ಯಾವ ರೀತಿ ಇದ್ದರೋ ಅವರ ಕುಲದವರೇ ಈ ಕೆಲಸ ಮಾಡಿದವರು. ಅಂಥವರ ಸಂಹಾರ ಮಾಡುತ್ತೇವೆ, ಮತ್ತೆ ಅವರು ತಲೆ ಎತ್ತದಂತೆ ನೋಡಿಕೊಳ್ಳುತ್ತೇವೆ ಎಂದರು.

Belagavi Violence: ರಾಷ್ಟ್ರ ನಾಯಕರ ಅವಮಾನ ಸಹಿಸಲ್ಲ: ಪುಂಡರ ಮೇಲೆ ಗೂಂಡಾ ಕಾಯ್ದೆ, ದೇಶದ್ರೋಹ ಕೇಸ್:‌ ಸಿಎಂ

ಯಾವುದೋ ಸಂಘ-ಸಂಸ್ಥೆ ಕೈವಾಡ: 

ಬೆಂಗಳೂರು(Bengaluru) ಮತ್ತು ಬೆಳಗಾವಿ ಜಿಲ್ಲೆಯ ಹಲವೆಡೆ ಮಹಾತ್ಮರ ಪ್ರತಿಮೆಗಳನ್ನು ಭಗ್ನಗೊಳಿಸಿ, ಶಾಂತಿ ಕದಡಿದವರ ವಿರುದ್ಧ ಗೂಂಡಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬೆಳಗಾವಿ ಪುಂಡಾಟಕ್ಕೆ ಸಂಬಂಧಿಸಿ ಈಗಾಗಲೇ 38 ಮಂದಿಯನ್ನು ಬಂಧಿಸಲಾಗಿದೆ. ಏಕಾಏಕಿ ರಾಜ್ಯದಲ್ಲಿ ಈ ಕೃತ್ಯ ನಡೆದಿರುವ ಹಿಂದೆ ಯಾವುದೋ ಸಂಘ​-ಸಂಸ್ಥೆ ಇರುವ ಶಂಕೆ ಇದ್ದು, ತನಿಖೆ ನಡೆಸಲಾಗುತ್ತಿದೆ. ನಾಡಿಗೆ ಬೆಂಕಿ ಹಚ್ಚುವ ಕೆಲಸಕ್ಕೆ ಕೈಹಾಕಿದವರ ಮೇಲೆ ಯಾವ ಕ್ರಮ ಕೈಗೊಂಡರೂ ಕಡಿಮೆಯೇ. ಬಂಧಿತರನ್ನು ತನಿಖೆಗೆ ಒಳಪಡಿಸಿ, ಕಠಿಣ ಕ್ರಮ ಜರುಗಿಸಲಾಗುವುದು ಎಂದರು.

ಪೊಲೀಸರಿಂದಲೂ ಎಂಜಲು ಕಾಸು ತಿನ್ನೋರ ಬಗ್ಗೆಯೂ ಜ್ಞಾನೇಂದ್ರ ಮಾತಾಡ್ಲಿ: ಬಿಜೆಪಿ ಮುಖಂಡ

‘ಪೊಲೀಸರು(Police) ಕೆಟ್ಟು ಹಾಳಾಗಿದ್ದಾರೆ. ಎಂಜಲು ಕಾಸು ತಿನ್ನುತ್ತಾರೆ ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆ ವೈರಲ್‌ ಆಗಿದೆ. ಇದೇ ರೀತಿ ಪೊಲೀಸರಿಂದ ಎಂಜಲು ಕಾಸು ತಿನ್ನುವವರ ಕುರಿತೂ ಗೃಹಸಚಿವರು ಮಾತನಾಡಬೇಕು’ ಎಂದು ಆಡಳಿತಾರೂಢ ಬಿಜೆಪಿ ಮುಖಂಡರೂ ಆಗಿರುವ ಮಾಜಿ ಪೊಲೀಸ್‌ ಅಧಿಕಾರಿ ಗಿರೀಶ್‌ ಮಟ್ಟೆಣ್ಣವರ್‌(Girish Mattennavar) ಆಗ್ರಹಿಸಿದ್ದರು. 

ಅರಗ ಜ್ಞಾನೇಂದ್ರ ಅವರು ಗೃಹ ಸಚಿವರಾದ ಬಳಿಕ ಪೊಲೀಸರ ಕುರಿತು ಇಂತಹ ಹೇಳಿಕೆಗಳು ಬರುತ್ತಲೇ ಇವೆ. ಆದರೆ, ವರ್ಗಾವಣೆ ಎಂಜಲು ದಂಧೆ ಗೃಹ ಸಚಿವರಿಗೆ ಗೊತ್ತಿಲವೇ ಎಂದು ಪ್ರಶ್ನಿಸಿರುವ ಅವರು, ಬೆಂಗಳೂರಿನ ಉಪ್ಪಾರಪೇಟೆ, ಚಿಕ್ಕಪೇಟೆ, ಕಬ್ಬನ್‌ ಪಾರ್ಕ್ ಸೇರಿದಂತೆ ಕೆಲ ಪ್ರಮುಖ ಠಾಣೆಗಳಿಗೆ ವರ್ಗವಾಗಿ ಬರುವ ಠಾಣಾಧಿಕಾರಿಗಳು 50 ಲಕ್ಷದವರೆಗೂ ಎಂಜಲು ನೀಡಬೇಕು. ರಾಜ್ಯದ(Karnataka) ಯಾವುದೇ ಠಾಣೆಗೆ ಪೋಸ್ಟಿಂಗ್‌ ಬರುವ ಅಧಿಕಾರಿ ಕನಿಷ್ಠ 25 ಲಕ್ಷ ಎಂಜಲು ನೀಡಲೇಬೇಕು. ಪೊಲೀಸ್‌ ಪೇದೆಯಿಂದ ಐಪಿಎಸ್‌ ಅಧಿಕಾರಿ(IPS Officer) ವರ್ಗಾವಣೆವರೆಗೂ ಪ್ರತಿ ಹಂತದಲ್ಲಿಯೂ ಎಂಜಲು ಕೊಡುವುದು ಸಾಮಾನ್ಯವಾಗಿದೆ. ಶಾಸಕರು ಬೇಡ ಎಂದರೆ, ಸಚಿವರಿಗೆ, ಸಚಿವರು ಬೇಡವೆಂದರೆ, ಶಾಸಕರಿಗೆ ಈ ಇಬ್ಬರೂ ಬೇಡವೆಂದರೆ ಕೇಂದ್ರ ಕಚೇರಿಗೆ ಎಂಜಲು ಕಾಸು ಕೊಡಲೇಬೇಕಾದ ಸ್ಥಿತಿಯಿದೆ ಎಂದು ಆರೋಪಿಸಿದ್ದರು.
 

click me!