Udupi; ಕಾರ್ಮಿಕನೊಬ್ಬ ಲಕ್ಷಾಂತರ ರೂಪಾಯಿ ದಾನ ಮಾಡುವ ಕಥೆ ಕೇಳಿದ್ದೀರಾ?

Published : Jun 09, 2022, 04:25 PM IST
 Udupi; ಕಾರ್ಮಿಕನೊಬ್ಬ ಲಕ್ಷಾಂತರ ರೂಪಾಯಿ ದಾನ ಮಾಡುವ ಕಥೆ ಕೇಳಿದ್ದೀರಾ?

ಸಾರಾಂಶ

ಈ ಪುಣ್ಯಾತ್ಮ ಮಾಡಿರುವ ದಾನ ಧರ್ಮಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾನು ಕೂಲಿ ಕೆಲಸ ಮಾಡಿಕೊಂಡಿದ್ದರೂ, ಕಷ್ಟದಲ್ಲಿರುವವರಿಗೆ ದೂಸ್ರಾ ಆಲೋಚನೆಯನ್ನೆರ ಮಾಡದೆ ದಾನಮಾಡುವ ಈ ವ್ಯಕ್ತಿಯ ಗುಣ ಇಡೀ ವಿಶ್ವದ ಗಮನ ಸೆಳೆದಿದೆ.

ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ(ಜೂ.9): ಈ ಪುಣ್ಯಾತ್ಮ ಮಾಡಿರುವ ದಾನ ಧರ್ಮಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾನು ಕೂಲಿ ಕೆಲಸ ಮಾಡಿಕೊಂಡಿದ್ದರೂ, ಕಷ್ಟದಲ್ಲಿರುವವರಿಗೆ ದೂಸ್ರಾ ಆಲೋಚನೆಯನ್ನೆರ ಮಾಡದೆ ದಾನಮಾಡುವ ಈ ವ್ಯಕ್ತಿಯ ಗುಣ ಇಡೀ ವಿಶ್ವದ ಗಮನ ಸೆಳೆದಿದೆ. ಉಡುಪಿಯ ರವಿ ಕಟಪಾಡಿ ಎಂಬ ಮಹಾದಾನಿ ಈವರೆಗೆ 89 ಲಕ್ಷಕ್ಕೂ ಅಧಿಕ ಹಣವನ್ನು ಹಿಂದು ಮುಂದು ನೋಡದೆ ರೋಗಗ್ರಸ್ತ ಮಕ್ಕಳಿಗೆ ದಾನ ಮಾಡಿದ್ದಾರೆ. ಈಗ ಇವರ ಈ ಪುಣ್ಯ ಕಾರ್ಯ ಹೊಸ ಆಯಾಮ ಪಡೆದಿದೆ.

ಉಡುಪಿಯ ರವಿ ಕಟಪಾಡಿ ಎಲ್ಲರಿಗೂ ಗೊತ್ತು. ಶ್ರೀಕೃಷ್ಣಜನ್ಮಾಷ್ಟಮಿ ಬಂದಾಗ ಆಕರ್ಷಕ ವೇಷಗಳನ್ನು ಹಾಕಿ ಸಂಗ್ರಹವಾದ ಹಣವನ್ನು ಮಕ್ಕಳ ಚಿಕಿತ್ಸೆಗೆ ನೆರವಾಗಿ ನೀಡುವ ಮಹಾದಾನಿ. ಕಳೆದ ಒಂದು ದಶಕದಿಂದ ಇವರು ಈ ದಾನ ಸೇವೆಯನ್ನು ನಡೆಸಿಕೊಂಡು ಬಂದಿದ್ದು ಈವರೆಗೆ 89 ಲಕ್ಷದ 75 ಸಾವಿರ ರುಪಾಯಿಯನ್ನು ಬಡಮಕ್ಕಳಿಗೆ ನೀಡಿದ್ದಾರೆ. ಕಟ್ಟಡ ಕೆಲಸ, ಕೂಲಿ ಕೆಲಸ ಮಾಡಿದರೂ ಉದಾರ ಹೃದಯದ, ರವಿ ಅನೇಕ ಮಕ್ಕಳ ಜೀವನ ಬೆಳಗಿದ್ದಾರೆ.

RAMANAGARA ರೇಷ್ಮೆ ಮಾರುಕಟ್ಟೆಯಲ್ಲಿ ಸಿಬ್ಬಂದಿ ಕೊರತೆ

ಅಷ್ಟಮಿ ಬಂತೆಂದರೆ ಅನಾರೋಗ್ಯದಿಂದ ಬಳಲುವ ಮಕ್ಕಳ ಪಟ್ಟಿ ತಯಾರು ಮಾಡುತ್ತಾರೆ.‌ ದುಬಾರಿ ವೆಚ್ಚದ ಚಿಕಿತ್ಸೆ ಅಗತ್ಯ ಇರುವ ನಾಲ್ಕೈದು ಮಕ್ಕಳನ್ನು ಆಯ್ಕೆ ಮಾಡಿಕೊಂಡು, ತಾನು ವೇಷಧರಿಸಿ ಸಂಗ್ರಹಿಸಿದ ಹಣದಿಂದ ಮಕ್ಕಳ ಚಿಕಿತ್ಸೆ ನಡೆಸುತ್ತಾ ಬಂದಿದ್ದಾರೆ.

ಕೇವಲ ಶ್ರೀಕೃಷ್ಣ ಜನ್ಮಾಷ್ಟಮಿಗೆ ಸೀಮಿತವಾಗಿದ್ದ ಇವರ ಮಹಾಕಾರ್ಯ ಈಗ ಅದರಾಚೆಗೂ ಬೆಳೆದಿದೆ. ಅಷ್ಟಮಿಯ ಸಂದರ್ಭ ಬಂದ ಒಂದು ನಯಾಪೈಸೆ ಹಣವನ್ನು ಕೂಡ ರವಿ ತನ್ನ ಸ್ವಂತಕ್ಕೆ ಖರ್ಚು ಮಾಡಿಲ್ಲ. ಇದೀಗ ತನಗೆ ಸಂಘ-ಸಂಸ್ಥೆಗಳು ಸನ್ಮಾನ ನೀಡಿದ ಸಂದರ್ಭದಲ್ಲಿ ಮತ್ತು ಇತರ ದಾನಿಗಳು ನೀಡಿದ ಹಣವನ್ನು ಅಕೌಂಟಿನಿಂದ ತೆಗೆದು ಸುಮಾರು ಎರಡು ಲಕ್ಷ ರೂಪಾಯಿಯಷ್ಟು ಸಂಗ್ರಹಿಸಿ ಅನಾರೋಗ್ಯ ಪೀಡಿತ ಮಕ್ಕಳಿಗೆ ನೀಡುವ ಮೂಲಕ ತನ್ನ ಉದಾರತೆಯನ್ನು ವಿಸ್ತರಿಸಿದ್ದಾರೆ.

ಇವರ ಪುಣ್ಯ ಕೆಲಸವನ್ನು ಗಮನಿಸಿ ಅನೇಕ ಮಂದಿ ಇವರ ಸ್ವಂತ ಖರ್ಚಿಗೆ ಇರಲಿ ಎಂದು ಅಲ್ಪಸ್ವಲ್ಪ ಹಣವನ್ನು ಅಕೌಂಟಿಗೆ ಹಾಕಿದ್ದರು. ಅನೇಕ ಮಂದಿ ಇವರನ್ನು ತಮ್ಮ ಊರುಗಳಿಗೆ ಕರೆದು ಸನ್ಮಾನ ಮಾಡಿ ಒಂದಿಷ್ಟು ಹಣ ಕೊಟ್ಟಿದ್ದರು. ಈ ರೀತಿ ಸಂಗ್ರಹವಾದ ಹಣವನ್ನು ಕೂಡ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ವ್ಯಯಿಸುವ ಮೂಲಕ, ಜನರ ಹುಬ್ಬೇರುವಂತೆ ಮಾಡಿದ್ದಾರೆ.

ಮೈಸೂರು; Rohith Chakrathirtha ವಜಾಕ್ಕೆ ಕುರುಬರ ಸಂಘ ಆಗ್ರಹ

ಉಡುಪಿ ಜಿಲ್ಲೆಯ ಕೊಳಲಗಿರಿಯ ಮೋಹನ್ ಮತ್ತು ಗಿರಿಜಾ ದಂಪತಿಗಳ ಆರು ವರ್ಷದ ಮಗು ದೃತಿ ನರದ ಸಮಸ್ಯೆಯಿಂದ ಬಳಲುತ್ತಿದೆ. ದೃತಿಗೆ ರವಿ ಕಟಪಾಡಿ ಒಂದು ಲಕ್ಷ ರುಪಾಯಿ ಕೊಟ್ಟಿದ್ದಾರೆ. ರತ್ನಾಕರ ಕೊಟ್ಟಾರಿ ಮತ್ತು ನಾಗಶ್ರೀ ಎಂಬ ದಂಪತಿಗಳಿಗೆ 18 ದಿನದ ಪುಟ್ಟ ಮಗು ಇದ್ದು ಹೃದಯ ಸಂಬಂಧಿ ಕಾಯಿಲೆಯಿಂದ ಈ ಮಗು ಬಳಲುತ್ತಿದೆ. ಈ ಮಗುವಿಗೂ ಕೂಡ ಒಂದು ಲಕ್ಷ ರುಪಾಯಿ ಸಹಾಯಹಸ್ತ ನೀಡಿದ್ದಾರೆ. ಕೇವಲ ಹಬ್ಬದ ಆಚರಣೆಯ ಸಂದರ್ಭಕ್ಕೆ ಸೀಮಿತವಾಗಿದ್ದ ಇವರ ದಾನ ಪರಂಪರೆ ಅದರಾಚೆಗೂ ವಿಸ್ತರಿಸಿದೆ.

ಕಟಪಾಡಿಯ ಪೇಟೆಬೆಟ್ಟು ಶ್ರೀ ಬಬ್ಬುಸ್ವಾಮಿ ದೈವಸ್ಥಾನ ದಲ್ಲಿ ಫಲಾನುಭವಿಗಳಿಗೆ ಸಹಾಯಧನ ಹಸ್ತಾಂತರಿಸಿದ್ದಾರೆ. ತನ್ನ ದಾನದ ಮೊತ್ತವನ್ನು ಒಂದು ಕೋಟಿ ರೂಪಾಯಿಗೂ ಮೀರಿ ವಿಸ್ತರಿಸುವ ಕನಸು ಹೊಂದಿದ್ದಾರೆ. ಮುಂದಿನ ಅಷ್ಟಮಿಯ ಒಳಗಾಗಿ ಈ ಕೋಟಿ ದಾನವನ್ನು ಪೂರ್ಣಗೊಳಿಸುವ ಇರಾದೆ ರವಿ ಕಟಪಾಡಿ ಯವರದ್ದು.

ರವಿ ಕಟಪಾಡಿಯ ಸಾಮಾಜಿಕ ಸೇವೆ ನಿಜಕ್ಕೂ ಮಾದರಿ. ದಿನಕ್ಕೆ ಕೋಟ್ಯಾಂತರ ಸಂಪಾದಿಸುವವರು ಕೂಡ ಒಂದು ರೂಪಾಯಿ ಹಣ ಬಿಚ್ಚಲು ಹಿಂದೆ-ಮುಂದೆ ನೋಡುತ್ತಾರೆ. ತಾನು ದೇಹದಂಡನೆ ಮಾಡಿಕೊಂಡು ದುಡಿದ ಲಕ್ಷಾಂತರ ಹಣವನ್ನು ಒಂದು ಕ್ಷಣವು ಆಲೋಚಿಸದೆ ದಾನ ಮಾಡಿಬಿಡುವ ರವಿ ಕಟಪಾಡಿ ನಿಜಕ್ಕೂ ಕಲಿಯುಗದ ಕರ್ಣ

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ