Uttara Kannada News: ಲೈಟ್‌ ಫಿಶಿಂಗ್‌ ವಿರುದ್ಧ ಮೀನುಗಾರರ ಬೃಹತ್‌ ಪ್ರತಿಭಟನೆ

By Kannadaprabha NewsFirst Published Jan 12, 2023, 6:40 AM IST
Highlights

ಜಿಲ್ಲೆಯಲ್ಲಿ ಲೈಟ್‌ ಫಿಶಿಂಗ್‌ ಮತ್ತು ಬುಲ್‌ಟ್ರಾಲ್‌ ಮೀನುಗಾರಿಕೆ ಸಂಪೂರ್ಣಣವಾಗಿ ಬಂದ್‌ ಮಾಡುವಂತೆ ಆಗ್ರಹಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಮೀನುಗಾರ ಸಂಘಟನೆಗಳಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಬುಲ್‌ಟ್ರಾಲ್‌, ಲೈಟ್‌ ಫಿಶಿಂಗ್‌ನಿಂದಾಗಿ ಸಾಂಪ್ರದಾಯಿಕ ಮೀನುಗಾರರಿಗೆ ಸಾಕಷ್ಟುಆರ್ಥಿಕವಾಗಿ ಸಮಸ್ಯೆ ಆಗುತ್ತಿದೆ. ಸಂಪೂರ್ಣವಾಗಿ ಬಂದ್ ಮಾಡುವಂತೆ ಆಗ್ರಹಿಸಲಾಯಿತು.

ಕಾರವಾರ (ಜ.12) : ಜಿಲ್ಲೆಯಲ್ಲಿ ಲೈಟ್‌ ಫಿಶಿಂಗ್‌ ಮತ್ತು ಬುಲ್‌ಟ್ರಾಲ್‌ ಮೀನುಗಾರಿಕೆ ಸಂಪೂರ್ಣಣವಾಗಿ ಬಂದ್‌ ಮಾಡುವಂತೆ ಆಗ್ರಹಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಮೀನುಗಾರ ಸಂಘಟನೆಗಳಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ಡಿಸಿ ಕಚೇರಿ ಎದುರು ಜಮಾಯಿಸಿದ ಬುಲ್‌ಟ್ರಾಲ್‌ ಹಾಗೂ ಬೆಳಕು ಮೀನುಗಾರಿಕೆ ವಿರೋಧಿ ಹೋರಾಟ ಸಮಿತಿಯವರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಬುಲ್‌ಟ್ರಾಲ್‌(Bull trawling), ಲೈಟ್‌ ಫಿಶಿಂಗ್‌(light fishing)ನಿಂದಾಗಿ ಸಾಂಪ್ರದಾಯಿಕ ಮೀನುಗಾರರಿ(Fishermen)ಗೆ ಸಾಕಷ್ಟುಆರ್ಥಿಕವಾಗಿ ಸಮಸ್ಯೆ ಆಗುತ್ತಿದೆ. ಸಮುದ್ರದಲ್ಲಿ ಮೀನು ಲಭ್ಯವಿಲ್ಲದೇ ಬೇಟೆಗೆ ತೆರಳಿದ ಸಾಂಪ್ರದಾಯಿಕ ಮೀನುಗಾರಿಕಾ ಬೋಟ್‌ಗಳು ಬರಿಗೈಯಲ್ಲಿ ವಾಪಸ್‌ ಆಗುತ್ತಿವೆ. ಉತ್ತರ ಕನ್ನಡದ ಕರಾವಳಿ ಭಾಗದಲ್ಲಿ ಸಾವಿರಾರು ಕುಟುಂಬಗಳ ಸಾಂಪ್ರದಾಯಿಕ ಮೀನುಗಾರಿಕೆಯನ್ನು ನಂಬಿಕೊಂಡು ಬದುಕು ಸಾಗಿಸುತ್ತಿದ್ದು, ಈ ಎರಡು ಬಗೆಯ ಮೀನುಗಾರಿಕೆ ನಡೆಯುತ್ತಿರುವುದರಿಂದ ಮೀನುಗಾರರು ಬೀದಿಗೆ ಬೀಳುವಂತಾಗಿದೆ ಎಂದು ಆಕ್ರೋಶ ಹೊರ ಹಾಕಿದರು.

 

ಅನಧಿಕೃತ ಲೈಟ್‌ ಫಿಶಿಂಗ್‌: ಮೀನುಗಾರರ ತಡೆ ಹಿಡಿದು ಪ್ರತಿಭಟನೆ

ಮನವಿ ಸ್ವೀಕರಿಸಲು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಆಗಮಿಸಿದ್ದರು. ಅವರ ಜತೆಗೆ ಮೀನುಗಾರಿಕಾ ಇಲಾಖೆ ಪ್ರಭಾರ ಉಪ ನಿರ್ದೇಶಕ ರವೀಂದ್ರ ತಳೇಕರ ಲೈಟ್‌ ಫಿಶಿಂಗ್‌ ಮಾಡಿದ ಬೋಟ್‌ನವರಿಗೆ ದಂಡ ವಿಧಿಸಲಾಗಿದೆ ಎನ್ನುತ್ತಿದ್ದಂತೆ ಪ್ರತಿಭಟನಾಕಾರರು ಡಿಡಿಯವರ ವಿರುದ್ಧ ಹರಿಹಾಯ್ದರು.

ಸರ್ಕಾರ, ನ್ಯಾಯಾಲಯ ಲೈಟ್‌ ಫಿಶಿಂಗ್‌ ಏಕೆ ನಿಷೇಧ ಮಾಡಿದೆ? ಲಕ್ಷಾಂತರ ರುಪಾಯಿ ಮೀನು ಹಿಡಿಯುವವರಿಗೆ .15 ಸಾವಿರ ಮೊತ್ತ ದೊಡ್ಡದೇ? ಎಷ್ಟುವರ್ಷಗಳಿಂದ ಮನವಿ ನೀಡಲಾಗುತ್ತಿದೆ. ನಿಯಂತ್ರಿಸುವ ಬಗ್ಗೆ ಪ್ರಯತ್ನ ಮಾಡಿದ್ದೀರಾ ಎಂದು ಕಿಡಿಕಾರಿದರು.

ಜಿಲ್ಲಾಧಿಕಾರಿಯವರೇ ಮನವಿ ಸ್ವೀಕರಿಸಲು ಬರಬೇಕು ಎಂದು ಪಟ್ಟುಹಿಡಿದರು. ಬಳಿಕ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿಮನವಿ ಸ್ವೀಕರಿಸಿ ಲೈಟ್‌ ಹಾಗೂ ಬುಲ್‌ಟ್ರಾಲ್‌ ಮೀನುಗಾರಿಕೆ ಬಂದ್‌ ಮಾಡಿಸುವ ಬಗ್ಗೆ ಭರವಸೆ ನೀಡಿದ ಬಳಿ ಪ್ರತಿಭಟನೆ ವಾಪಸ್‌ ಪಡೆದರು.

ಕರಾವಳಿಯಲ್ಲಿ ಲೈಟ್ ಫಿಶಿಂಗ್ ಬ್ಯಾನ್ : SP ಆದೇಶ

ಬುಲ್‌ಟ್ರಾಲ್‌ ಹಾಗೂ ಬೆಳಕು ಮೀನುಗಾರಿಕೆ ವಿರೋಧಿ ಹೋರಾಟ ಸಮಿತಿ ಪದಾಧಿಕಾರಿಗಳು, ಮೀನುಗಾರರಾದ ನಾಗರಾಜ ಹರಿಕಂತ್ರ, ಕುಸುಮ ಹರಿಕಂತ್ರ, ದೇವರಾಯ ಸೈಲ್‌, ಆನಂದ ಹರಿಕಂತ್ರ, ಪವಿತ್ರಾ ಮೇಸ್ತ, ರಮೇಶ ಮಾಜಾಳಿ, ಯಮುನಾ ಹೊಲನಗದ್ದೆ, ಸುಜಾತಾ ಹರಿಕಂತ್ರ ಮೊದಲಾದವರು ಇದ್ದರು.

click me!