ಮರುಳಾರಾಧ್ಯರಿಗೆ ಅಂತಿಮ ನಮನ: ಕಂಬನಿ ಮಿಡಿದ ಸಹಸ್ರಾರು ಭಕ್ತರು

By Kannadaprabha NewsFirst Published Feb 19, 2020, 2:08 PM IST
Highlights

ಶ್ರೀ ಮರುಳಾರಾಧ್ಯರಿಗೆ ಅಂತಿಮ ನಮನ| ವೀರಶೈವ ಸಂಪ್ರದಾಯದಂತೆ ಶ್ರೀಮಠದಲ್ಲಿ ಮರುಳಾರಾಧ್ಯ ಶ್ರೀಗಳ ಕ್ರಿಯಾಸಮಾಧಿ| ಶ್ರೀಗಳ ಅಂತಿಮ ದರ್ಶನ ಪಡೆದ ಸಾವಿರಾರು ಭಕ್ತಾದಿಗಳು| 

ಸಿದ್ದಲಿಂಗ ಕಿಣಗಿ 

ಸಿಂದಗಿ(ಫೆ.19): ತಾಲೂಕಿನ ಕನ್ನೊಳ್ಳಿ ಹಿರೇಮಠದ ಶತಾಯುಷಿ ಶ್ರೀ ಮರುಳಾರಾಧ್ಯ ಶಿವಾಚಾರ್ಯರ ಕ್ರಿಯಾಸಮಾಧಿ ವೀರಶೈವ ಸಂಪ್ರದಾಯದಂತೆ ನಾಡಿನ ಅನೇಕ ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ವಿಧಿವಿ ಧಾನಗಳ ಮೂಲಕ ಶ್ರೀಮಠದಲ್ಲಿ ಮಂಗಳವಾರ ನೆರವೇರಿತು. ಇದಕ್ಕೂ ಮುನ್ನ ಶ್ರೀಗಳ ಅಂತಿಮ ಮೆರವಣಿಗೆ ಬೃಹತ್ತಾಗಿ ಅದ್ಧೂರಿಯಾಗಿ ನಡೆಯಿತು. 

ಸಮಾರಂಭ ನಡೆದ ಸ್ಥಳದಿಂದ ಶ್ರೀಗಳನ್ನು ಹೂವಿನಿಂದ ಅಲಂಕೃತಗೊಂಡ ಅಡ್ಡ ಪಲ್ಲಕ್ಕಿ ಮೇಲೆ ಕೂಡ್ರಿಸಿ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ಸಹಸ್ರಾರು ಭಕ್ತರು ಶ್ರೀ ಮರುಳಾರಾಧ್ಯ ಶಿವಾಚಾರ್ಯರಿಗೆ ಜಯವಾಗಲಿ ಎಂಬ ಜಯಘೋಷ ಮೊಳಗಿಸಿದರು. ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಸೋಮವಾರ ಲಿಂಗೈಕ್ಯರಾಗಿದ್ದರು. ಶ್ರೀಗಳ ಅಂತಿಮ ದರ್ಶನಕ್ಕೆ ಮಠದ ಹೊರಭಾಗದಲ್ಲಿ ಸುಮಾರು 2 ಎಕರೆ ಪ್ರದೇಶದಲ್ಲಿ ದೊಡ್ಡ ವೇದಿಕೆ ನಿರ್ಮಿಸಲಾಗಿತ್ತು. ಸಾವಿರಾರು ಭಕ್ತಾದಿಗಳು ಶ್ರೀಗಳ ಅಂತಿಮ ದರ್ಶನ ಪಡೆದರು

ಕನ್ನೋಳ್ಳಿ ಮಠದ ಮರುಳಾರಾಧ್ಯ ಶಿವಾಚಾರ್ಯ ಶ್ರೀಗಳು ಲಿಂಗೈಕ್ಯ

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಉಜ್ಜಯನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಭಗವತ್ಪಾದರು ಆಶೀರ್ವಚನ ನೀಡಿ, ಕನ್ನೊಳ್ಳಿಯ ಮರುಳಾರಾಧ್ಯ ಶಿವಾಚಾರ್ಯರು ಈ ಭಾಗದ ಬೆಳಕಾಗಿ ಬಂದವರು. ತಮ್ಮ ಜೀವನವನ್ನೇ ಸಾಮಾಜೋ ಧಾರ್ಮಿಕ ಕಾರ್ಯಗಳಿಗೆ ಮೀಸಲಿಟ್ಟವರು. ಭರರೋಗ ವೈದ್ಯರಾಗಿ, ಶಿಸ್ತಿನ ಸಿಪಾಯಿಯಾಗಿ ಬಡವರಲ್ಲಿ ಭಗವಂತನನ್ನು ಕಂಡಂತಹ ಶಿವಯೋಗಿ ದಕ್ಷಿಣ ಕರ್ನಾಟಕದಲ್ಲಿ ತೂಮಕೂರಿನ ಶ್ರೀಗಳಾದರೆ ಉತ್ತರ ಕರ್ನಾಟಕದಲ್ಲಿ ಕನ್ನೊಳ್ಳಿ ಶ್ರೀಗಳು ಹೆಸರಾದಂತವರು ಎಂದರು. 

ಕನ್ನೊಳ್ಳಿಯ ಹಿರೇಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿ, ಸಾರಂಗ ಮಠ-ಗಚ್ಚಿನಮಠದ ಡಾ.ಪ್ರಭುಸಾರಂ ಗದೇವ ಶಿವಾಚಾರ್ಯರು, ಬಂಥನಾಳದ ವೃಷಭಲಿಂಗ ಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಶ್ರೀಗಳು ಅಪ್ಪಣೆ ಮಾಡಿದಂತೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇನೆ. ಭಕ್ತ ವೃಂದ ಶ್ರೀಗಳಿಗೆ ನೀಡಿದ ಎಲ್ಲ ರೀತಿಯ ಸಹಕಾರ ನಮಗೂ ನೀಡಬೇಕು. ನಿಮ್ಮೆಲ್ಲರ ಬಲದಿಂದ ಶ್ರೀಮಠವನ್ನು ಶ್ರೀಗಳ ಕನಸಿನಂತೆಯೇ ಬೆಳೆಸುತ್ತೇನೆ. ನಾನು ಯಾವತ್ತೂ ಶ್ರೀಮಠಕ್ಕೆ ಹುಲ್ಲು ತರುವುದಿಲ್ಲ ಹೂ ತರುತ್ತೇನೆ ಎಂದು ಭಾವುಕಾದರು. 

ವಿಜಯಪುರ: ನಡೆದಾಡುವ ದೇವರು ಕನ್ನೋಳ್ಳಿ ಹಿರೇಮಠ ಸ್ವಾಮೀಜಿ ಲಿಂಗೈಕ್ಯ

ಸಾರಂಗಮಠ-ಗಚ್ಚಿನಮಠದ ಡಾ. ಪ್ರಭುಸಾ ರಂಗದೇವ ಶಿವಾಚಾರ್ಯರು, ಬಂಥನಾಳದ ವೃಷಭಲಿಂಗ ಸ್ವಾಮಿಗಳು, ಯಂಕಂಚಿಯ ಅಭಿವರು ದ್ರಮುನಿ ಶಿವಾಚಾರ್ಯರು, ಕೊಣ್ಣೂರದ ಡಾ. ವಿಶ್ವಪ್ರಭುದೇವ ಶಿವಾಚಾರ್ಯ ಮಹಾಸ್ವಾಮಿಗಳು, ಆಲಮೇಲದ ಶ್ರೀ ಚಂದ್ರಶೇಖರ ಶಿವಾಚಾರ್ಯರು ಸೇರಿದಂತೆ ವಿವಿಧ ಭಾಗಗಳಿಂದ ನೂರಾರು ಮಠಾಧೀಶರು ಆಗಮಿಸಿದ್ದರು. ಶಾಸಕ ಎಂ.ಸಿ. ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರ, ಅಶೋಕ ಮನಗೂಳಿ, ಅಶೋಕ ವಾರದ, ಡಾ. ವಿಜಯಕುಮಾರ ವಾರದ, ಡಾ. ಮಹಾಂತೇಶ ಹಿರೇಮಠ, ಸಿದ್ದಣ್ಣ ಚೌಧರಿ, ಶಂಕರ ಬಗಲಿ, ಶ್ರೀಶೈಲ ನಂದಿಕೋಲ, ಗೋಲ್ಲಾ ಳಪ್ಪಗೌಡ ಮಾಗ ಣಗೇರಿ ಸೇರಿ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು, ರಾಜಕೀಯ ಮುಖಂ ಡರು, ಸಹಸ್ರಾರು ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದರು. ಕ್ರಿಯಾಸಮಾಧಿಯಲ್ಲಿ ಭಾಗವಹಿಸಿದ್ದರು. 

ಪ್ರಸಾದ ಸೇವೆ: 

ಶ್ರೀಗಳ ಅಂತಿಮ ದರ್ಶನಕ್ಕೆಂದು ಸೋಮವಾರದಿಂದಲೇ ಕನ್ನೊಳ್ಳಿಗೆ ಬಂದಿದ್ದ ಸಹಸ್ರಾರು ಭಕ್ತರಿಗೆ ಸಿಂದಗಿ ಸಾರಂಗಮಠದ ಶ್ರೀ ಚೆನ್ನವೀರ ಪ್ರತಿಷ್ಠಾನ, ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳು, ರೈತ ಸಮುದಾಯ, ರಾಜಕೀಯ ಮುಖಂಡರು, ಶಿಕ್ಷಣ ಸಂಸ್ಥೆಗಳು, ಯುವ ಬಳಗ ಸೇರಿದಂತೆ ಅನೇಕರು ಸ್ವಯಂ ಪ್ರೇರಣೆಯಿಂದ ದಾಸೋಹ ಸೇವೆ ಮಾಡಿ ಶ್ರೀಗಳ ಕೃಪೆಗೆ ಪಾತ್ರರಾದರು.

ಮರುಳಾರಾಧ್ಯ ಶ್ರೀಗಳ ಅಗಲಿಕೆಗೆ ತೀವ್ರ ಸಂತಾಪ 

ಕನ್ನೊಳ್ಳಿಯ ಮರುಳಾರಾಧ್ಯ ಶಿವಾಚಾರ್ಯ ಶ್ರೀಗಳು ಶಿವೈಕ್ಯರಾಗಿರುವುದು ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಈ ಭಾಗದ ವಾಕ್‌ಸಿದ್ಧಿಪುರುಷರು, ಮಹಾನ್ ತಪಸ್ವಿಗಳು ಆಗಿದ್ದ ಶ್ರೀಗಳು ಶಿವೈಕ್ಯರಾಗಿರುವುದಕ್ಕೆ ಕೇಂದ್ರ ಮಾಜಿ ಸಚಿವ, ಸಂಸದ ರಮೇಶ ಜಿಗಜಿಣಗಿ ತೀವ್ರ ಸಂತಾಪ ಸೂಚಿಸಿದ್ದಾರೆ. ಕನ್ನೊಳ್ಳಿ ಮರುಳಾರಾಧ್ಯ ಶಿವಾಚಾಯ ರ್ರು ನಡೆದಾಡುವ ದೇವರು, ಧನ್ವಂತರಿ ಎಂದೇ ಪ್ರಸಿದ್ಧಿಯಾಗಿದ್ದವರು. ಹಲವು ಪವಾಡ ಗಳ ಮೂಲಕ ಪ್ರಸಿದ್ಧಿ ಪಡೆದವರು. ಶತಾಯು ಷಿಯಾಗಿದ್ದರು. ಇಂತಹ ಶ್ರೇಷ್ಠ ಗುರುಗಳ ಅಗಲಿಕೆ ಮನಸ್ಸಿಗೆ ನೋವುಂಟು ಮಾಡಿದೆ. ಆಧ್ಯಾತ್ಮಿಕ ಲೋಕ ಪೂಜ್ಯರ ಅಗಲಿಕೆಯಿಂದ ಬಡವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಪುರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಚಂದ್ರಶೇಖರ ಕವಟಗಿ ಸಂತಾಪ ಸೂಚಿಸಿದ್ದಾರೆ.

ಗುಂಡಕನಾಳ ಶ್ರೀಗಳ ಕಂಬನಿ 

ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದ ವಾಕ್‌ಸಿದ್ಧಿ ಪುರುಷರಾದ ಶ್ರೀ ಮುರುಳಾರಾಧ್ಯ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳ ಅಗಲಿಕೆಯಿಂದ ಜಿಲ್ಲೆಯ ಜನತೆಗೆ ಬರಸಿಡಿಲು ಬಡಿದಂತಾಗಿದೆ ಎಂದು ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕಂಬನಿ ಮಿಡಿದಿದ್ದಾರೆ.ಶತಾಯುಷಿಗಳಾಗಿದ್ದ ಶ್ರೀಗಳು ತಮ್ಮ ದೀಕ್ಷಾ ಗುರುಗಳಾಗಿದ್ದರು. ಅವರ ಅಗಲಿಕೆಯಿಂದ ಕತ್ತಲೆ ಆವರಿಸಿದ್ದಂತಾಗಿದೆ. ಅವರ ಇಡೀ ಜೀವನದ ಉದ್ದಕ್ಕೂ ಭಕ್ತೋದ್ಧಾರ ಗೈಯುತ್ತಾ ಹೆಸರುವಾಸಿಯಾಗಿದ್ದರು. ಅವರ ಅಗಲಿಕೆಯಿಂದ ಇಡೀ ಕಾವಿಧಾರಿಗಳಿಗೆ ದುಃಖದ ಕಾರ್ಮೋಡ ಆವರಿಸಿದೆ ಎಂದಿದ್ದಾರೆ.

ಕನ್ನೊಳ್ಳಿ ಶ್ರೀಗಳ ಅಗಲಿಕೆಗೆ ಸಿದ್ದಲಿಂಗ ದೇವರು ಕಂಬನಿ 

ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದ ಶತಾಯುಷಿ, ಆಯುರ್ವೇದ ಪಂಡಿತರು, ತಪೋನಿಷ್ಠರು ಆದ ಶ್ರೀ ಮುರುಳಾರಾಧ್ಯ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳ ಅಗಲಿಕೆಗೆ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದ ಪಟ್ಟಾಧೀಶರಾದ ಶ್ರೀ ಸಿದ್ದಲಿಂಗ ದೇವರು ಕಂಬನಿ ಮಿಡಿದಿದ್ದಾರೆ. ಜಿಲ್ಲೆಯಲ್ಲೇ ನಡೆದಾಡುವ ದೇವರು ಎಂದು ಖ್ಯಾತಿಗೆ ಪಾತ್ರಾಗಿದ್ದ ಶ್ರೀಗಳ ಅಗಲಿಕೆ ಇಡೀ ಜಿಲ್ಲೆಗೆ ಸೂತಕದ ಛಾಯೇ ಆವರಿಸಿದಂತಾಗಿದೆ ಎಂದಿದ್ದಾರೆ.

ಕನ್ನಡಪ್ರಭಕ್ಕೆ ಅಭಿನಂದನೆಗಳ ಮಹಾಪೂರ

ಸಿಂದಗಿ ಕನ್ನೊಳ್ಳಿ ಶ್ರೀಗಳು ಸೋಮವಾರ ಶಿವೈಕ್ಯರಾಗಿರುವ ಹಿನ್ನಲೆಯಲ್ಲಿ ಕನ್ನಡಪ್ರಭ ಪತ್ರಿಕೆ ಶ್ರೀಗಳಿಗೆ ಅಕ್ಷರದ ನುಡಿನಮನ ಸಲ್ಲಿಸಿದ್ದಕ್ಕೆ ಸಾವಿರಾರು ಭಕ್ತವೃಂದ ಸಂತಸಪಟ್ಟಿತು. ಶ್ರೀಗಳ ಹುಟ್ಟು, ಬಾಲ್ಯ, ಶಿಕ್ಷಣ ಸೇರಿದಂತೆ ೧೦೫ ವರ್ಷಗಳ ಬದುಕಿನ ಸರ್ವಮಾಹಿತಿಯನ್ನು ಕನ್ನಡಪ್ರಭ ಹೆಕ್ಕಿ ತೆಗೆದು ಪೂರ್ಣ ಪುಠದಲ್ಲಿ ಮುದ್ರಿಸಿದ್ದಕ್ಕೆ ಭಕ್ತವೃ ಂದ ಕನ್ನಡಪ್ರಭ ಬಳಕಗ್ಗೆ ಅಭಿನಂದನೆಯನ್ನೂ ಸಲ್ಲಿಸಿತು. 

ಮಂಗಳವಾರ ಬೆಳ್ಳಂಬೆಳಗ್ಗೆ ಸಾವಿರಾರು ಪತ್ರಿಕೆಗಳನ್ನು ಹಂಚುತ್ತಿರುವ ಸಂದರ್ಭದಲ್ಲಿ ಭಕ್ತರು ಪತ್ರಿಕೆಯಲ್ಲಿನ ಶ್ರೀಗಳ ಭಾವಚಿತ್ರವನ್ನು ಹಣೆಗೊತ್ತಿ ಪೂಜ್ಯನೀಯ ಭಾವದಿಂದ ಸ್ವೀಕರಿಸಿದ್ದೂ ಕಂಡುಬಂದಿತು. ವಿದ್ಯಾರ್ಥಿ ಬಳಗವಂತೂ ಪತ್ರಿಕೆಯಲ್ಲಿನ ಮಾಹಿತಿಯನ್ನು ಅರ್ಥೈಸಿಕೊಳ್ಳಲು ಮತ್ತು ತಮ್ಮ ಮನೆಯಲ್ಲಿಡಲು ನಾಮುಂದೆ ತಾಮುಂದೆ ಎಂದು ಪತ್ರಿಕೆಯನ್ನು ತೆಗೆದುಕೊಂಡು ಹೋದರು.

ಶ್ರೀಗಳ ಬದುಕಿನ ಇತಿಹಾಸವನ್ನು ಅತ್ಯಂತ ವಿಸ್ತಾರವಾಗಿ ಕನ್ನಡಪ್ರಭ ಅಕ್ಷರದ ಮೂಲಕ ನಮನ ಸಲ್ಲಿಸಿದೆ. ಈ ಕಾರ್ಯಕ್ಕೆ ಭಕ್ತರಿಗೆ ಮತ್ತು ನಮಗೂ ಅತ್ಯಂತ ಖುಷಿ ತಂದಿದೆ. ಕನ್ನಡಪ್ರಭ ಬಳಗಕ್ಕೆ ಅಭಿನಂದನೆಗಳು ಎಂದು ಕನ್ನೊಳ್ಳಿ ಕಿರಿಯ ಶ್ರೀಗಳು ಹೇಳಿದ್ದಾರೆ. 

ಶ್ರೀ ಸಿದ್ದಲಿಂಗ ಶಿವಾಚಾರ್ಯರು ಶ್ರೀಗಳ ಅನೇಕ ಪವಾಡ ಗಳನ್ನು ಮತ್ತು ಅವರ ಎಲ್ಲ ಚಾರಗಳನ್ನು ಅತ್ಯಂತ ಸ್ಪಷ್ಟವಾಗಿ ಮುದ್ರಣ ಮಾಡಲಾಗಿದೆ. ಈ ಮಾಹಿ ತಿಗಳು ವಿದ್ಯಾರ್ಥಿಗಳಿಗೆ ಹಾಗೂ ಭಕ್ತರಿಗೆ ಪ್ರೇರಣೆಯಾಗಲಿದೆ. ಕನ್ನಡಪ್ರಭದ ಪ್ರಯತ್ನ ದೊಡ್ಡದು. ಆ ಬಳಗಕ್ಕೆ ಶ್ರೀಗಳ ಆಶೀರ್ವಾದ ಸದಾ ಇರಲಿ ಎಂದು ಸಿಂದಗಿ ಸಾರಂಗಮಠ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ತಿಳಿಸಿದ್ದಾರೆ.
 

click me!