
ಮಂಗಳೂರು: ಮಂಗಳೂರು ನೈಋತ್ಯ ರೈಲ್ವೆ ವಲಯದ ಜೊತೆ ವಿಲೀನಗೊಂಡ ಬಳಿಕ ಅ.1 ರಿಂದ ಕೇರಳ ಪಾಲಕ್ಕಡ್ ವಿಭಾಗದ ಬದಲು ಮೈಸೂರು ವಿಭಾಗದ ವ್ಯಾಪ್ತಿಗೆ 12ಕ್ಕೂ ಅಧಿಕ ಪ್ರಮುಖ ರೈಲುಗಳು ಒಳಪಡಲಿವೆ. ದಕ್ಷಿಣ ರೈಲ್ವೆ ವಲಯದ ಪಾಲಕ್ಕಾಡ್ ವಿಭಾಗದಿಂದ ಉಳ್ಳಾಲ ವರೆಗಿನ ಮಂಗಳೂರು ಪ್ರದೇಶವನ್ನು ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಹಸ್ತಾಂತರಿಸಿದ ಬಳಿಕ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಸಂಚರಿಸುವ ಹಾಗೂ ಅದರ ನಿರ್ವಹಣಾ ಸೌಲಭ್ಯಗಳಿಗೆ ಸಂಬಂಧಿಸಿದ ಹಲವು ರೈಲುಗಳು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಗೆ ಬರಲಿವೆ.
12619/12620-ಮಂಗಳೂರು ಸೆಂಟ್ರಲ್-ಎಲ್ಟಿಟಿ ಮುಂಬೈ ಮತ್ಸ್ಯಗಂಧ ಎಕ್ಸ್ಪ್ರೆಸ್, 20645/20646- ಮಂಗಳೂರು ಸೆಂಟ್ರಲ್–ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್, 20631/20632-ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ವಂದೇ ಭಾರತ್ ಎಕ್ಸ್ಪ್ರೆಸ್, 16649/16650-ಕನ್ಯಾಕುಮಾರಿ-ಮಂಗಳೂರು ಸೆಂಟ್ರಲ್ ಪರಶುರಾಮ್ ಎಕ್ಸ್ಪ್ರೆಸ್, 16605/16606-ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಎರ್ನಾಡ್ ಎಕ್ಸ್ಪ್ರೆಸ್, 16603/16604- ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಮಾವೇಲಿ ಎಕ್ಸ್ಪ್ರೆಸ್, 16629/16630- ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಮಲಬಾರ್ ಎಕ್ಸ್ಪ್ರೆಸ್, 16323/16324-ಮಂಗಳೂರು ಸೆಂಟ್ರಲ್-ಕೊಯಮತ್ತೂರು ಎಕ್ಸ್ಪ್ರೆಸ್, 22609/22610- ಮಂಗಳೂರು ಸೆಂಟ್ರಲ್-ಕೊಯಮತ್ತೂರು ಇಂಟರ್ಸಿಟಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್, 12601/12602-ಮಂಗಳೂರು ಸೆಂಟ್ರಲ್-ಎಂಜಿಆರ್ ಚೆನ್ನೈ ಸೆಂಟ್ರಲ್ ಸೂಪರ್ಫಾಸ್ಟ್ ಮೇಲ್ ಎಕ್ಸ್ಪ್ರೆಸ್, 16621/16622- ಮಂಗಳೂರು ಸೆಂಟ್ರಲ್-ರಾಮೇಶ್ವರಂ ಸಾಪ್ತಾಹಿಕ ಎಕ್ಸ್ಪ್ರೆಸ್, 22637/22638-ಮಂಗಳೂರು ಸೆಂಟ್ರಲ್-ಎಂಜಿಆರ್ ಚೆನ್ನೈ ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳು ಮೈಸೂರು ವಿಭಾಗಕ್ಕೆ ಒಳಪಡಲಿದೆ.
56625/56626 -ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್, 56627/56628- ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್, 56629/56630-ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್, 56615/56616- ಮಂಗಳೂರು ಸೆಂಟ್ರಲ್-ಮಡಗಾಂವ್ ಪ್ಯಾಸೆಂಜರ್ ಮತ್ತು ಮಂಗಳೂರು ಸೆಂಟ್ರಲ್ ಹಾಗೂ ಅದರ ನಿರ್ವಹಣಾ ಸೌಲಭ್ಯಗಳಿಗೆ ಸಂಬಂಧಿಸಿದ ಇತರೆ ರೈಲುಗಳು ಒಳಗೊಳ್ಳಲಿವೆ.
ಅ. 1 ರಿಂದ ಪ್ರಮುಖ ಇಂಟರ್ಚೇಂಜ್ ಪಾಯಿಂಟ್ಗಳು (ರೈಲ್ವೆ ವಲಯ ಬದಲಾವಣೆ ಕೇಂದ್ರಗಳು)ಕೂಡ ಬದಲಾಗಲಿವೆ. ಈವರೆಗೆ ಪಡೀಲ್ ಬದಲಿಗೆ ‘ಉಳ್ಳಾಲ’ ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ನಡುವಿನ ಇಂಟರ್ಚೇಂಜ್ ಪಾಯಿಂಟ್ ಆಗಿರಲಿದೆ. ತೋಕೂರು ಕೊಂಕಣ ರೈಲ್ವೆಯ ಅಡಿಯಲ್ಲೇ ಮುಂದುವರಿಯಲಿದ್ದು, ಕೊಂಕಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ನಡುವಿನ ಇಂಟರ್ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ.
ಮಂಗಳೂರು ಸೆಂಟ್ರಲ್- ಜಂಕ್ಷನ್ ಹಳಿ ಡಬ್ಲಿಂಗ್ ( ನೈಋತ್ಯ ರೈಲ್ವೆ), ತೋಕೂರು- ಸುರತ್ಕಲ್ 4 ಕಿ.ಮೀ. ಡಬ್ಲಿಂಗ್ (ಕೊಂಕಣ ರೈಲ್ವೆ), ಸಕಲೇಶಪುರ- ಹಾಸನ- ಬೆಂಗಳೂರು ಮತ್ತು ಸುಬ್ರಹ್ಮಣ್ಯ- ಪಡೀಲ್ ನಡುವಿನ ಹಳಿಯ ವೇಗಧಾರಣ ಸಾಮರ್ಥ್ಯ ಹೆಚ್ಚಳ. (ಘಾಟ್ ಪ್ರದೇಶದ ಅನಿವಾರ್ಯ ವಿಳಂಬ ನಿವಾರಣೆಗಾಗಿ) ಹಾಗೂ ಮಂಗಳೂರು ಸೆಂಟ್ರಲ್ನಲ್ಲಿ ಫ್ಲಾಟ್ ಫಾರಂ ಹೆಚ್ಚಳ ಬೇಡಿಕೆ ಈಡೇರಿಸುವ ಅಗತ್ಯವನ್ನು ರೈಲ್ವೆ ಸಂಘಟನೆಗಳು ಹೇಳುತ್ತಿವೆ.
ಮಂಗಳೂರು ರೈಲ್ವೆ ಪ್ರದೇಶ ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗುತ್ತಿರುವಂತೆಯೇ ಕೊಂಕಣ ರೈಲ್ವೆ ಜಾಲ ಕೂಡ ಭಾರತೀಯ ರೈಲ್ವೆ ಜೊತೆ ವಿಲೀನಕ್ಕೆ ಮುನ್ನುಡಿ ಬರೆದಂತಾಗಿದೆ. ಕರಾವಳಿ ಕರ್ನಾಟಕದಲ್ಲಿ ರೈಲ್ವೆ ವಿಳಂಬ ಪ್ರಯಾಣ ನಿವಾರಣೆಗೆ ಕೊಂಕಣ ರೈಲ್ವೆಯು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ಪ್ರಯತ್ನ ಕರಾವಳಿಯ ಸಂಸದರಿಂದ ನಡೆಯುತ್ತಿದೆ.
ಕೊಂಕಣ ರೈಲ್ವೆಯು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳ್ಳುವುದಕ್ಕೆ ಗೋವಾ ಯಾವುದೇ ಶರತ್ತು ಇಲ್ಲದೆ ಒಪ್ಪಿಗೆ ನೀಡಿದೆ, ಆದರೆ ಕರ್ನಾಟಕ, ಕೇರಳ, ಮಹಾರಾಷ್ಟ್ರ ನಿರ್ಧಾರ ಬಾಕಿಯಿದೆ. ಆದರೆ ಮಂಗಳೂರು ಪ್ರದೇಶ ಮೈಸೂರು ವಿಭಾಗದಲ್ಲಿ ವಿಲೀನಕ್ಕೆ ಕೇರಳ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.
ಆಡಳಿತಾತ್ಮಕ ಮತ್ತು ಕಾರ್ಯಾಚರಣೆ ಸುಗಮಕ್ಕಾಗಿ ಮಂಗಳೂರು ರೈಲ್ವೆ ಪ್ರದೇಶವನ್ನು ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಇದು ಕರಾವಳಿ ಕರ್ನಾಟಕದ ರೈಲ್ವೆ ಸುಧಾರಣೆಗೆ ಅತ್ಯಂತ ಮಹತ್ವದ ಐತಿಹಾಸಿಕ ಹೆಜ್ಜೆಯಾಗಿದೆ. ಇದರಿಂದ ಮಂಗಳೂರು ಪ್ರದೇಶ ವ್ಯಾಪ್ತಿಯಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ, ಆಡಳಿತಾತ್ಮಕ, ಕಾರ್ಯಾಚರಣೆಗಳಿಗೆ ಬಹಳ ಅನುಕೂಲವಾಗಲು ಕೇಂದ್ರ ರೈಲ್ವೆ ಸಚಿವಾಲಯ ಈ ತೀರ್ಮಾನ ಕೈಗೊಂಡಿದೆ.