Mangaluru: ಅಮಿತ್‌ ಶಾ ರೋಡ್‌ ಶೋ ಮುಖ್ಯವಲ್ಲ: ನಮಗೆ ಕೊರಗಜ್ಜನ ಕೋಲವೇ ಮುಖ್ಯ

Published : Feb 09, 2023, 07:02 PM IST
Mangaluru: ಅಮಿತ್‌ ಶಾ ರೋಡ್‌ ಶೋ ಮುಖ್ಯವಲ್ಲ: ನಮಗೆ ಕೊರಗಜ್ಜನ ಕೋಲವೇ ಮುಖ್ಯ

ಸಾರಾಂಶ

ಕೊರಗಜ್ಜ ಕೋಲದ ಕಾರಣಕ್ಕೆ ಅಮಿತ್ ಶಾ ರೋಡ್ ಶೋ ರದ್ದು! ಶನಿವಾರ ಕೊರಗಜ್ಜ ದೈವಸ್ಥಾನದಲ್ಲಿ ಕೋಲ ನಿಗದಿ ಧರ್ಮಶ್ರೀ ಪ್ರತಿಷ್ಠಾನದ ಭಾರತ್ ಮಾತಾ ಮಂದಿರ ಉದ್ಘಾಟನೆ

ವರದಿ- ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಫೆ.09): ಇದೇ ಶನಿವಾರ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ ಕಾರ್ಯಕ್ರಮ ರದ್ದಾಗಿದೆ. ರೋಡ್ ಶೋ ಸಂಚರಿಸುವ ದಾರಿಯಲ್ಲಿ ಕೊರಗಜ್ಜ ದೈವದ ಕೋಲ ಇರುವ ಹಿನ್ನೆಲೆಯಲ್ಲಿ ರೋಡ್ ಶೋ ರದ್ದು ಮಾಡಲಾಗಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ತಿಳಿಸಿದ್ದಾರೆ. 

ಕೊರಗಜ್ಜ ದೈವದ ಕೋಲಕ್ಕೆ ಸಮಸ್ಯೆಯಾಗಬಾರದೆಂದು ರೋಡ್ ಶೋ ರದ್ದು ಮಾಡಲಾಗಿದೆ. ಮಂಗಳೂರಿನ ಪದವಿನಂಗಡಿ ಬಳಿಯ ಕೊರಗಜ್ಜ ದೈವಸ್ಥಾನದಲ್ಲಿ ಶನಿವಾರ ಕೊರಗಜ್ಜ ಕೋಲ ನಿಗದಿಯಾಗಿದೆ. ಹೀಗಾಗಿ ಭದ್ರತೆ ದೃಷ್ಟಿಯಿಂದ ಮತ್ತು ಕೋಲಕ್ಕೆ ಸಮಸ್ಯೆ ಆಗಬಾರದು ಅಂತ ರೋಡ್ ಶೋ ರದ್ದು ಮಾಡಿರುವುದಾಗಿ ಭರತ್ ಶೆಟ್ಟಿ ಹೇಳಿದ್ದಾರೆ. ಪದವಿನಂಗಡಿ ಬಳಿಯ ಖಾಸಗಿ ಸಭಾಂಗಣದಲ್ಲಿ ನಡೆಯಬೇಕಿದ್ದ ಬಿಜೆಪಿ ಪಕ್ಷದ ಸಭೆಯೂ ಸ್ಥಳಾಂತರವಾಗಿದ್ದು, ಮಂಗಳೂರು ಏರ್ ಪೋರ್ಟ್ ಬಳಿಯೇ ಪಕ್ಷದ ಸಭೆ ನಡೆಸಲು ನಿರ್ಧಾರ ಮಾಡಲಾಗಿದೆ. ಆದರೆ, ಒಟ್ಟಾರೆಯಾಗಿ ಕೇಂದ್ರ ಸಚಿವ ಅಮಿತ್‌ ಶಾ ಅವರ ರೋಡ್‌ ಶೋ ಕಾರ್ಯಕ್ರಮಕ್ಕಿಂತ ನಮ್ಮೆಲ್ಲರನ್ನು ಕಾಪಾಡುವ ದೈವ ಕೊರಗಜ್ಜನ ಕೋಲವೇ ಮುಖ್ಯವೆಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಿರ್ಧಾರಕ್ಕೆ ಸರ್ವಪಕ್ಷಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಭ್ರಷ್ಟಾಚಾರ ಆರೋಪ ಬೆನ್ನಲ್ಲೇ ಮಂಗಳೂರಿಗೆ ಎಡಿಜಿಪಿ: ಸಾರ್ವಜನಿಕರ ಕುಂದುಕೊರತೆ ಆಲಿಸಲಿರುವ ಅಲೋಕ್ ಕುಮಾರ್!

ಜಿಲ್ಲೆಯಲ್ಲಿ ಹೀಗಿದೆ ಅಮಿತ್ ಶಾ ಸಂಚಾರ!: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಮಿತ್ ಶಾ ಮಿಂಚಿನ ಸಂಚಾರ ಇರಲಿದ್ದು, ಸುಮಾರು 5.30 ಗಂಟೆಗಳ ಕಾಲ ಹಲವೆಡೆ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಮ ದ್ಯಾಹ್ನ 2.15ಕ್ಕೆ ಕೇರಳದ ಕಣ್ಣೂರು ಏರ್ ಪೋರ್ಟ್ ನಿಂದ ಸೇನಾ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಲಿರೋ ಶಾ, ಮಧ್ಯಾಹ್ನ 2.45 ಪುತ್ತೂರಿನ ಈಶ್ವರಮಂಗಳದ ಗಜಾನನ ಶಾಲಾ ಮೈದಾನದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಗಲಿದ್ದಾರೆ. ನಂತರ ಹೆಲಿಪ್ಯಾಡ್ ನಿಂದ ರಸ್ತೆ ಮಾರ್ಗವಾಗಿ ಈಶ್ವರ ಮಂಗಳ ಹನುಮಗಿರಿ ದೇವಸ್ಥಾನ ಭೇಟಿ ನೀಡಿ ಪೂಜೆ ಸಲ್ಲಿಸಿ 3 ಗಂಟೆಗೆ ಈಶ್ವರಮಂಗಳದ ಹನುಮಗಿರಿಯ ಧರ್ಮಶ್ರೀ ಪ್ರತಿಷ್ಠಾನದ ಭಾರತ್ ಮಾತಾ ಮಂದಿರ ಉದ್ಘಾಟನೆ ಮಾಡಲಿದ್ದಾರೆ. 

ಕ್ಯಾಂಪ್ಕೋ ಸುವರ್ಣ ಸಮಾವೇಶದಲ್ಲಿ ಭಾಗಿ: ನಂತರ ರಸ್ತೆ ಮಾರ್ಗವಾಗಿ ಗಜಾನನ ಶಾಲಾ ಮೈದಾನದತ್ತ ಸಾಗಿ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಿ ಪುತ್ತೂರಿನ ಮೊಟ್ಟೆತ್ತಡ್ಕದ ಗೇರು ಅಭಿವೃದ್ಧಿ ನಿಗಮದ ಎದುರಿನ ಹೆಲಿಪ್ಯಾಡ್ ನಲ್ಲಿ ಲ್ಯಾಂಡಿಂಗ್ ಆಗಲಿದೆ.  ಅಲ್ಲಿಂದ ರಸ್ತೆ ಮಾರ್ಗವಾಗಿ ಪುತ್ತೂರಿನ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮೈದಾನ ತಲುಪಲಿರುವ ಅಮಿತ್‌ ಶಾ ಸಂಜೆ 5 ಗಂಟೆಯವರೆಗೆ ಕ್ಯಾಂಪ್ಕೋ ಸುವರ್ಣ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಫೆ.11ರಂದು ಮಂಗಳೂರಲ್ಲಿ ಅಮಿತ್‌ ಶಾ ರೋಡ್‌ ಶೋ?

ಶ್ರೀದೇವಿ ಕಾಲೇಜು ಬಳಿ ರಾಜಕೀಯ ಸಭೆ: ಸಮಾವೇಶನದ ನಂತರ ರಸ್ತೆ ಮಾರ್ಗವಾಗಿ ಹೊರಟು ಪುರುಷರಕಟ್ಟೆ ಕ್ಯಾಂಪ್ಕೋ ಫ್ಯಾಕ್ಟರಿ ವೀಕ್ಷಣೆ ಮಾಡಲಿದ್ದಾರೆ. ಸಂಜೆ 5.35ಕ್ಕೆ ಮೊಟ್ಟೆತ್ತಡ್ಕ ಹೆಲಿಪ್ಯಾಡ್ ಗೆ ಆಗಮಿಸಿ ಮಂಗಳೂರಿಗೆ ಪ್ರಯಾಣಿಸುವ ಅವರು, ಸಂಜೆ 6 ಗಂಟೆಗೆ ಮಂಗಳೂರು ಏರ್ಪೋರ್ಟ್ ನಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಗಲಿದೆ. ಸಂಜೆ 6.05 ಕ್ಕೆ ಮಂಗಳೂರು ಏರ್ಪೋರ್ಟ್ ನಿಂದ ರಸ್ತೆ ಮಾರ್ಗವಾಗಿ ಪ್ರಯಾಣಿಸಿ ಸಂಜೆ 06.10ಕ್ಕೆ ಏರ್ ಪೋರ್ಟ್ ಬಳಿಯ ಶ್ರೀದೇವಿ ಕಾಲೇಜು ಬಳಿ ಸಭೆ ನಡೆಸುವ ಸಾಧ್ಯತೆ ಇದೆ. ಬಿಜೆಪಿ ಜನ ಪ್ರತಿನಿಧಿಗಳು, ಮುಖಂಡರು ಭಾಗಿಯಾಗಲಿರುವ ಸಭೆ ಇದಾಗಿದ್ದು, ರಾ.8.20ಕ್ಕೆ ಏರ್ಪೋರ್ಟ್ ತಲುಪಿ ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣಿಸಲಿದ್ದಾರೆ.

PREV
Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ