ಮಂಗಳೂರು ಗಲಭೆ : PFI ವಿರುದ್ಧ ಕೇಸ್

By Kannadaprabha NewsFirst Published Dec 25, 2019, 10:30 AM IST
Highlights

ಮಂಗಳೂರಿನಲ್ಲಿ ಡಿಸೆಂಬರ್ 19 ರಂದು ನಡೆದ ಗಲಭೆಗೆ ಸಂಬಂಧಿಸಿದಂತೆ ಇದೀಗ ಪ್ರಕರಣ ದಾಖಲಿಸಲಾಗಿದೆ. ಪಿಎಫ್‌ಐ ಮೇಲೆ ಕೇಸ್ ದಾಖಲಾಗಿದೆ. 

ಮಂಗಳೂರು [ಡಿ.25]:  ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಡಿ.19ರಂದು ಮಂಗಳೂರಿನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿ ಮಂಗಳವಾರ ವರೆಗೆ ಪೊಲೀಸರು ಒಟ್ಟು 8 ಎಫ್‌ಐಆರ್‌ ದಾಖಲಿಸಿದ್ದಾರೆ. ಗೋಲಿಬಾರ್‌ನಲ್ಲಿ ಮೃತಪಟ್ಟಇಬ್ಬರೂ ಸೇರಿ 148 ಮಂದಿ ವಿರುದ್ಧ ಬಂದರು, ಪಾಂಡೇಶ್ವರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ರಿಯಾಜ್‌ ಫರಂಗಿಪೇಟೆ ಹಾಗೂ ಶಾಹುಲ್‌ ಎಸ್‌.ಎಚ್‌.ಅವರು ಸಾಮಾಜಿಕ ಜಾಲತಾಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಸಂದೇಶ ಬರೆದು ಕೇಂದ್ರ ಸರ್ಕಾರದ ವಿರುದ್ಧ ದ್ವೇಷ ಹುಟ್ಟುಂತೆ ಸಂದೇಶ ರವಾನಿಸಿದ್ದಾರೆ. ಕಾಯ್ದೆ ವಿಚಾರದಲ್ಲಿ ಜನರಲ್ಲಿ ತಪ್ಪು ಸಂದೇಶ ಮೂಡಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕದಡಲು ಕಾರಣರಾಗಿದ್ದಾರೆ ಎಂದು ಆರೋಪಿಸಿ ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಡಿಸಿ ಕಚೇರಿ ಎದುರು ಸೆಕ್ಷನ್‌ ಜಾರಿಯಲ್ಲಿದ್ದಾಗ ಪ್ರತಿಭಟನೆ ನಡೆಸಿದ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗೆ ಸೇರಿದ 36 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಈ ಘಟನೆಗೆ ಸಂಬಂಧಿಸಿ 45 ಜನರ ಹೆಸರನ್ನು ಉಲ್ಲೇಖಿಸಿ ಪಾಂಡೇಶ್ವರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಮಂಗಳೂರು ಹಿಂಸಾಚಾರಕ್ಕೆ ಸಂಬಂಧಿಸಿದ ಸಮಗ್ರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಒಟ್ಟು 24 ಪ್ರಕರಣ:  ಡಿ.19ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿ​ಸಿ ಈಗಾಗಲೇ ಕಮಿಷನರೇಟ್‌ ವ್ಯಾಪ್ತಿಯ ಬಂದರು ಠಾಣೆ 10, ಪಾಂಡೇಶ್ವರ ಠಾಣೆ 13, ಗ್ರಾಮಾಂತರ 1 ಸೇರಿ ಒಟ್ಟು 24 ಪ್ರಕರಣಗಳು ದಾಖಲಾಗಿದೆ. ಈಗಾಗಲೇ 25ಕ್ಕೂ ಅಧಿಕ ಮಂದಿಯನ್ನು ಬಂ​ಧಿಸಲಾಗಿದೆ. ಪೊಲೀಸರ ವಿಡಿಯೋ ದಾಖಲೆ, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಈಗಾಗಲೇ 100ಕ್ಕೂ ಅ​ಧಿಕ ಮಂದಿಯ ಚಹರೆ ಗುರುತಿಸಲಾಗಿದ್ದು, ಹಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

click me!