ಮಂಗಳೂರು: ಕ್ಯಾನ್ಸರ್ ಸಂತ್ರಸ್ತೆಯರಿಗಾಗಿ ಕೇಶ ದಾನ ಮಾಡಿದ ವಿದ್ಯಾರ್ಥಿನಿ

By Kannadaprabha NewsFirst Published Sep 24, 2019, 8:35 AM IST
Highlights

ಹೆಣ್ಣು ಮಕ್ಕಳಿಗೆ ತಮ್ಮ ತಲೆಗೂದಲಿನ ಬಗ್ಗೆ ಇನ್ನಿಲ್ಲದ ಅಕ್ಕರೆ ಇರುತ್ತದೆ. ತಲೆ ಬೋಳಿಸಿಕೊಂಡಿದ್ದ ಕ್ಯಾನ್ಸರ್ ಪೀಡಿತೆ ಬಾಲಕಿಯೊಬ್ಬಳನ್ನು ನೋಡಿದ ಮಂಗಳೂರಿನ ವಿದ್ಯಾರ್ಥಿನಿ ತನ್ನ ಕೇಶದಾನ ಮಾಡಿದ್ದಾಳೆ. ತಲೆಗೂದಲು ಕಳೆದುಕೊಂಡ ಐದು ವರ್ಷದ ಬಾಲಕಿಯ ಕಣ್ಣಲ್ಲಿ ಕಂಡ ನೋವು ವಿದ್ಯಾರ್ಥಿನಿಯ ಕೇಶ ದಾನ ಮಾಡುವ ನಿರ್ಧಾರಕ್ಕೆ ಕಾರಣವಾಯಿತು.

ಮಂಗಳೂರು(ಸೆ.23): ಮಹಿಳೆಯರಿಗೆ, ಅದರಲ್ಲೂ ಯುವತಿಯರಿಗೆ ತಲೆಗೂದಲ ಮೇಲೆ ಇನ್ನಿಲ್ಲದ ವ್ಯಾಮೋಹ. ಅದಕ್ಕೆ ತಕ್ಕುದಾಗಿ ತರಹೇವಾರಿ ಅಲಂಕಾರಕ್ಕೆ ಬ್ಯೂಟಿ ಪಾರ್ಲರ್‌ಗಳೂ ತಲೆಎತ್ತಿವೆ. ಆದರೆ ಇಲ್ಲೊಬ್ಬಳು ಯುವತಿ ಕ್ಯಾನ್ಸರ್ ಸಂತ್ರಸ್ತೆಯರಿಗಾಗಿ ತನ್ನ ತಲೆಗೂದಲನ್ನೆ ಕತ್ತರಿಸಿ ಕೊಟ್ಟಿದ್ದಾರೆ.

ಇವರು ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ. ಹೆಸರು ಪವಿತ್ರಾ. ಮಹಾರಾಷ್ಟ್ರ ಮೂಲದವರು. ಇದಕ್ಕೆ ಕಾರಣ ಐದಾರು ವರ್ಷದ ಕ್ಯಾನ್ಸರ್ ಪೀಡಿತೆ ಪುಟ್ಟ ಬಾಲಕಿ.

ಇತ್ತೀಚೆಗೆ ಪವಿತ್ರಾ ಅವರಿಗೆ ಜ್ವರ ಬಂದು ಆಸ್ಪತ್ರೆಯೊಂದಕ್ಕೆ ತೆರಳಿದ್ದರು. ಈ ವೇಳೆ ವೈದ್ಯರಿಗಾಗಿ  ಕಾಯುತ್ತಿದ್ದಾಗ ಪುಟ್ಟ ಬಾಲಕಿ ಬಂದು ಇವರ ತಲೆಗೂದಲು ನೋಡಿ ನಿಮ್ಮ ಕೂದಲು ಚೆನ್ನಾಗಿದೆ ಅಕ್ಕಾ ಎಂದಿದ್ದಾಳೆ. ನೋಡಿದರೆ, ಕ್ಯಾನ್ಸರ್ ಪೀಡಿತೆಯಾಗಿದ್ದ ಆ ಬಾಲಕಿ ತಲೆ ಕೀಮೋಥೆರಪಿಯಿಂದ ಬೋಳಾಗಿತ್ತು.

'ಸದಾನಂದ ಗೌಡರಿಗೆ ಬುದ್ಧಿ ಇದೆಯಾ..? ಮಂಗಳೂರಿಗೆ ಬಂದ್ರೆ ಬಹಿಷ್ಕಾರ'..!

ಹುಡುಗಿಯರಿಗೆ ತಲೆಗೂದಲು ಇಲ್ಲದಿದ್ದರೆ ಎಷ್ಟು ನೋವಾಗುತ್ತದೆ ಎನ್ನುವುದು ನನಗೆ ಅರ್ಥವಾದದ್ದು ಆಗ. ಆ ಬಾಲಕಿ ಜತೆ ಹೆಚ್ಚು ಮಾತನಾಡಲು ಸಮಯಾವಕಾಶವಿರಲಿಲ್ಲ. ಆಸ್ಪತ್ರೆಯಿಂದ ಬಂದವರೇ ಕ್ಯಾನ್ಸರ್ ಪೀಡಿತರಿಗೆ ತಲೆಗೂದಲು ದಾನ ಮಾಡುವ ತೀರ್ಮಾನಕ್ಕೆ ಬಂದರು. ಹೆತ್ತವರ ಒಪ್ಪಿಸಿ, ಕ್ಯಾನ್ಸರ್ ಸಂತ್ರಸ್ತರಿಗೆ ತಲೆಗೂದಲು ದಾನ ಮಾಡುವ ಸಂಸ್ಥೆಯನ್ನು ಸಂಪರ್ಕಿಸಿ ಕೂದಲು ಅರ್ಪಿಸಿದ್ದಾರೆ. ಸಂತ್ರಸ್ತರ ಮೊಗದಲ್ಲಿ ಮೂಡುವ ನಗು ತಲೆಗೂದಲಿಗಿಂತ ಹೆಚ್ಚು ಎನ್ನುತ್ತಾರೆ ಮಹಾರಾಷ್ಟ್ರ ಮೂಲದ ಪವಿತ್ರಾ.

ಹಳೆ ಸ್ಕೂಟರ್‌ಗಳ ಹೊಸ ಪಯಣ, ಯುವಕರು ಫಿದಾ..!

click me!