
ಮಂಡ್ಯ (ಮಾ.17): ಮಾಜಿ ಸಚಿವ ಎಸ್.ಡಿ. ಜಯರಾಂ ಪುತ್ರ ಅಶೋಕ್ ಜಯರಾಂ ಕೂಡ ಕೇಸರಿ ಪಾಳಯಕ್ಕೆ ಜಾರಿದ್ದಾರೆ. ಮಂಡ್ಯದಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಬಗ್ಗೆ ಅಧಿಕೃತ ಸಂದೇಶ ರವಾನಿಸಿದ್ದಾರೆ.
ತಂದೆ ಎಸ್.ಡಿ. ಜಯರಾಂ ಮಾದರಿಯಲ್ಲೇ ಜೆಡಿಎಸ್ ಪಕ್ಷದೊಳಗೆ ನಿಷ್ಠರಾಗಿ ಗುರುತಿಸಿಕೊಂಡಿದ್ದ ಅಶೋಕ್ ಜಯರಾಂ 2013ರ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದರು. ಟಿಕೆಟ್ಗಾಗಿ ಬೆಂಬಲಿಗರೊಡಗೂಡಿ ತೀವ್ರ ಸೆಣಸಾಟ ನಡೆಸಿದ್ದರು. ಕೊನೆಯ ಹಂತದಲ್ಲಿ ಟಿಕೆಟ್ ಎಂ.ಶ್ರೀನಿವಾಸ್ ಪಾಲಾಗಿತ್ತು. 2018ರ ಚುನಾವಣೆಯಲ್ಲೂ ಮತ್ತೆ ಅಶೋಕ್ ಜಯರಾಂಗೆ ಜೆಡಿಎಸ್ ಟಿಕೆಟ್ ಕೈತಪ್ಪಿತ್ತು. ಅಲ್ಲಿಂದಲೂ ಜೆಡಿಎಸ್ನಿಂದ ದೂರವಾದಂತೆ ಕಂಡುಬಂದಿದ್ದರು. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಾಳಯದೊಳಗೆ ಟಿಕೆಟ್ ಆಕಾಂಕ್ಷಿತರ ದೊಡ್ಡ ದಂಡೇ ಇರುವುದರಿಂದ ಕಮಲ ಪಡೆ ಸೇರಿಕೊಂಡು ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ.
ಶೀಘ್ರದಲ್ಲೇ ಸುಮಲತಾ ಬೆಂಬಲಿಗ ಬಿಜೆಪಿ ಸೇರ್ಪಡೆ : ಹೊಸ ರಾಜಕೀಯದ ಗ್ರೀನ್ ಸಿಗ್ನಲ್ ..
ದಿನಾಂಕ ನಿಗದಿಯಾಗಬೇಕಷ್ಟೇ
ಯುವ ಮುಖಂಡರಾದ ಅಶೋಕ್ ಜಯರಾಂ ಹಾಗೂ ಎಸ್.ಸಚ್ಚಿದಾನಂದ ಬಿಜೆಪಿ ಸೇರುವುದು ಖಚಿತವಾಗಿದೆ. ರಾಜ್ಯಾಧ್ಯಕ್ಷರ ದಿನಾಂಕಕ್ಕಾಗಿ ಕಾಯಲಾಗುತ್ತಿದೆ. ಅಶೋಕ್ ಜಯರಾಂ ಬೆಂಗಳೂರಿನಲ್ಲಿ ಸೇರ್ಪಡೆಯಾಗಲಿದ್ದು, ಸಚ್ಚಿದಾನಂದ ಅವರು ಶ್ರೀರಂಗಪಟ್ಟಣದಲ್ಲಿ ಕಮಲ ಪಡೆ ಸೇರಿಕೊಳ್ಳಲಿದ್ದಾರೆ. ಆದಷ್ಟುಶೀಘ್ರ ದಿನಾಂಕ ನಿಗದಿಯಾಗುವ ಸಾಧ್ಯತೆಗಳಿವೆ.
- ಕೆ.ಜೆ.ವಿಜಯಕುಮಾರ್, ಜಿಲ್ಲಾಧ್ಯಕ್ಷರು, ಬಿಜೆಪಿ