ಪ್ರೀತಿಯ ಪತ್ನಿಗೆ ಬಯಕೆ ಬುತ್ತಿ ತಂದಿದ್ದ ಪತಿ: ತುಂಗಭದ್ರಾ ನದಿ ಸುಳಿಗೆ ಸಿಲುಕಿ ದುರಂತ ಸಾವು!

By Kannadaprabha NewsFirst Published Jun 10, 2023, 10:42 AM IST
Highlights

ಗರ್ಭಿಣಿ ಪತ್ನಿಗೆ ಬಯಕೆ ಬುತ್ತಿ ಕೊಡಲು ಬಂದಿದ್ದ ಪತಿ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ, ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಘಟನೆ ಹರಿಹರ ತಾಲೂಕಿನ ದೀಟೂರು ಗ್ರಾಮದಲ್ಲಿ ಸಂಭವಿಸಿದೆ.

ದಾವಣಗೆರೆ (ಜೂ.10) ಗರ್ಭಿಣಿ ಪತ್ನಿಗೆ ಬಯಕೆ ಬುತ್ತಿ ಕೊಡಲು ಬಂದಿದ್ದ ಪತಿ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ, ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಘಟನೆ ಹರಿಹರ ತಾಲೂಕಿನ ದೀಟೂರು ಗ್ರಾಮದಲ್ಲಿ ಸಂಭವಿಸಿದೆ.

ವಿಜಯ ನಗರ ಜಿಲ್ಲೆ ಕೊಟ್ಟೂರು ತಾ. ಉಜ್ಜಿನಿ ಗ್ರಾಮದ ಸಿದ್ದೇಶ(31 ವರ್ಷ) ಮೃತ ವ್ಯಕ್ತಿ. 6 ತಿಂಗಳ ಹಿಂದಷ್ಟೇ ದೀಟೂರು ಗ್ರಾಮದ ಚಂದ್ರಿಕಾ ಎಂಬ ಯುವತಿ ಜೊತೆಗೆ ಸಿದ್ದೇಶನ ಮದುವೆಯಾಗಿತ್ತು. ಪತ್ನಿ ಚಂದ್ರಿಕಾ ಗರ್ಭಿಣಿಯಾಗಿದ್ದರಿಂದ ಆಕೆಗೆ ಬಯಕೆ ಬುತ್ತಿ ಕೊಡುವ ಕಾರ್ಯಕ್ಕೆಂದು ಉಜ್ಜಿನಿಯಿಂದ ದೀಟೂರು ಗ್ರಾಮಕ್ಕೆ ಸಿದ್ದೇಶ ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ದಾವಣಗೆರೆ: ಸಿಡಿಲು ಬಡಿದು ಜಗಳೂರಿನ ಇಬ್ಬರು ರೈತರು ಬಲಿ!

ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ಬರುವುದಾಗಿ ಪತ್ನಿ ಚಂದ್ರಿಕಾಗೆ ಹೇಳಿ ಹೋಗಿದ್ದ ಸಿದ್ದೇಶ ನದಿಯ ನೀರಿನ ಸೆಳೆತ, ಸುಳಿಗೆ ಸಿಲುಕಿ, ಕೊಚ್ಚಿಕೊಂಡು ಹೋಗಿದ್ದಾನೆ. ಸ್ನಾನ ಮಾಡಿ ಬರುವುದಾಗಿ ಹೋದ ಸಿದ್ದೇಶ ಬಾರದ್ದರಿಂದ ಪತ್ನಿ, ಕುಟುಂಬ ವರ್ಗ ಆತಂಕಕ್ಕೀಡಾಗಿದೆ. ನದಿ ದಂಡೆಯಲ್ಲೇ ಆತ ಬಿಚ್ಚಿಟ್ಟಿದ್ದ ಬಟ್ಟೆಗಳು ಪತ್ತೆಯಾಗಿದೆ. ತಕ್ಷಣವೇ ಗ್ರಾಮಸ್ಥರು ನದಿಗಿಳಿದು ಶೋಧ ನಡೆಸಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್‌ಗಳನ್ನು ಹಾಕಿ ಹುಡುಕಿದರೂ , ಈಜುಗಾರರು, ಸ್ಥಳೀಯ ಗ್ರಾಮದ ಈಜುಗಾರರು ಸಂಜೆವರೆಗೂ ಶವ ಪತ್ತೆಯಾಗಿಲ್ಲ. ಮರುದಿನ ಬೆಳಿಗ್ಗೆ ಸಿದ್ದೇಶನ ಶವ ಸಿಕ್ಕಿದೆ. ಅತ್ತ ಬಯಕೆ ಬುತ್ತಿ ಕಟ್ಟಿಕೊಂಡು ಬಂದಿದ್ದ ಪತಿ ಸ್ನಾನ ಮಾಡಿಕೊಂಡು ಬರುವುದಾಗಿ ಹೇಳಿ ನದಿಗೆ ಹೋದವನು ಶವವಾಗಿ ಪತ್ತೆಯಾಗಿದ್ದರಿಂದ ಗರ್ಭಿಣಿ ಚಂದ್ರಿಕಾಗೆ ಇಡೀ ಕುಟುಂಬ ಸಮಾಧಾನ ಮಾಡಿದರೂ ಆಕೆಯ ರೋಧನ ಮಾತ್ರ ಕಡಿಮೆಯಾಗಿರಲಿಲ್ಲ. ಹರಿಹರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶಿವಮೊಗ್ಗದಲ್ಲಿ ಕುರಿ ಮೇಯಿಸಲು ಹೋದ ಮಹಿಳೆ ಸಿಡಿಲಿಗೆ ಬಲಿ

click me!