ಕೃಷ್ಣಾ ನದಿಗೆ ಕೊಲ್ಹಾಪುರ ಜಿಲ್ಲೆಯಲ್ಲಿ ಇನ್ನೊಂದು ಅಣೆಕಟ್ಟು, ಕನ್ನಡ ಸಂಘಸಂಸ್ಥೆಗಳ ವಿರೋಧ

Published : Jul 21, 2026, 10:24 PM IST
Krishna River Dam In kollapur

ಸಾರಾಂಶ

ಕೊಲ್ಲಾಪುರ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ 'ರಾಧಾಕೃಷ್ಣ ನೀರಾವರಿ ಯೋಜನೆ'ಯಡಿ ಹೊಸ ಜಲಾಶಯ ನಿರ್ಮಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಈ ಯೋಜನೆಯಿಂದ ಕರ್ನಾಟಕಕ್ಕೆ ಹರಿಯುವ ನೀರಿನ ಪ್ರಮಾಣ ಸುಮಾರು 4 ಟಿಎಂಸಿ ಯಷ್ಟು ಕಡಿಮೆಯಾಗಲಿದೆ.

ಬೆಳಗಾವಿ/ಬೆಂಗಳೂರು (ಜು.21): ಕೊಲ್ಲಾಪುರ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಹೊಸ ಜಲಾಶಯ ನಿರ್ಮಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದ್ದು, ಇದರಿಂದ ಕರ್ನಾಟಕಕ್ಕೆ ಹರಿದುಬರುವ ನೀರಿನ ಪ್ರಮಾಣ ಗಣನೀಯವಾಗಿ ತಗ್ಗಲಿದೆ. ಈ ಹಿನ್ನೆಲೆಯಲ್ಲಿ ನೆರೆ ರಾಜ್ಯದ ಯೋಜನೆಯನ್ನು ತಕ್ಷಣವೇ ವಿರೋಧಿಸಿ ಕಾನೂನುಬದ್ಧ ಆಕ್ಷೇಪಣೆ ಸಲ್ಲಿಸುವಂತೆ ಕನ್ನಡ ಪರ ಸಂಘಟನೆಗಳು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿವೆ.

"ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಇತ್ತೀಚೆಗೆ ಇಚಲಕರಂಜಿಯಲ್ಲಿ ನಡೆದ ಸಮಾರಂಭದಲ್ಲಿ 'ರಾಧಾಕೃಷ್ಣ ನೀರಾವರಿ ಯೋಜನೆ'ಯಡಿ ಹೊಸ ಆಣೆಕಟ್ಟು ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿರುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯಿಂದ ಕೃಷ್ಣಾ ನದಿಯ ಸುಮಾರು 4 ಟಿಎಂಸಿ (tmcft) ನೀರನ್ನು ಮಹಾರಾಷ್ಟ್ರ ಬಳಸಿಕೊಳ್ಳಲಿದೆ. ಇದರಿಂದ ಕರ್ನಾಟಕಕ್ಕೆ ಹರಿಯುವ ನೀರಿನ ಪ್ರಮಾಣದಲ್ಲಿ ಅಷ್ಟೇ ಪ್ರಮಾಣದ ಕೊರತೆಯಾಗಲಿದ್ದು, ರಾಜ್ಯದ ಪ್ರಮುಖ ಹಿಪ್ಪರಗಿ ಬ್ಯಾರೇಜ್ ಹಾಗೂ ಆಲಮಟ್ಟಿ ಜಲಾಶಯಕ್ಕೆ ಬಂದು ಸೇರುವ ನೀರಿನ ಹರಿವು ತೀವ್ರವಾಗಿ ಕುಸಿಯಲಿದೆ. ಇದನ್ನು ಯಾವುದೇ ಕಾರಣಕ್ಕೂ ಅನುಮತಿಸದೆ ತಕ್ಷಣವೇ ತಡೆಯಬೇಕಾಗಿದೆ" ಎಂದು ಕನ್ನಡ ಸಂಘಟನೆಗಳ ಕೇಂದ್ರ ಸಮಿತಿಯ ಸಂಚಾಲಕ ಅಶೋಕ್ ಚಂದರಗಿ ಆತಂಕ ವ್ಯಕ್ತಪಡಿಸಿದ್ದಾರೆ.

ಡಿಕೆ ಶಿವಕುಮಾರ್ ಅವರಿಗೆ ಪತ್ರ

ಈ ವಿಷಯವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಅಶೋಕ್ ಚಂದರಗಿ, "ಅಂತರರಾಜ್ಯ ನದಿಗಳ ವಿಷಯದಲ್ಲಿ ಮೇಲ್ಭಾಗದ ರಾಜ್ಯಗಳು ಕೆಳಭಾಗದ ರಾಜ್ಯಗಳೊಂದಿಗೆ ಸಮಾಲೋಚಿಸದೆ ಯಾವುದೇ ಹೊಸ ಯೋಜನೆಗಳನ್ನು ಏಕಪಕ್ಷೀಯವಾಗಿ ಘೋಷಿಸುವಂತಿಲ್ಲ. ಮಹಾರಾಷ್ಟ್ರ ಸರ್ಕಾರದ ಈ ನಡೆ ಕೇವಲ ಅಂತರರಾಜ್ಯ ನದಿ ನೀರು ಹಂಚಿಕೆ ನಿಯಮಗಳ ಸ್ಪಷ್ಟ ಉಲ್ಲಂಘನೆ ಮಾತ್ರವಲ್ಲದೆ, ನೈಸರ್ಗಿಕ ನ್ಯಾಯದ ತತ್ವಗಳಿಗೂ ವಿರುದ್ಧವಾಗಿದೆ" ಎಂದು ಸರ್ಕಾರದ ಗಮನ ಸೆಳೆದಿದ್ದಾರೆ.

ಅಗತ್ಯ ಅನುದಾನ ಘೋಷಣೆ ಮಾಡಿರುವ ಫಡ್ನವಿಸ್‌

ಕೊಲ್ಹಾಪುರದ ಇಚಲಕರಂಜಿ ನಗರಕ್ಕೆ ಶುದ್ಧ ಹಾಗೂ ಹೇರಳವಾದ ಕುಡಿಯುವ ನೀರು ಪೂರೈಸಲು ಶಿರೋಳ ತಾಲೂಕಿನ 'ಜೂನೆ ದಾನವಾಡ' ಬಳಿ ರಾಧಾಕೃಷ್ಣ ನೀರು ಪೂರೈಕೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಹಾಗೂ ಅದಕ್ಕೆ ಅಗತ್ಯವಿರುವ ಸಂಪೂರ್ಣ ಅನುದಾನವನ್ನು ಸರ್ಕಾರ ಒದಗಿಸಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶನಿವಾರ ಘೋಷಣೆ ಮಾಡಿದ್ದರು. ಕಳೆದ ಹಲವು ವರ್ಷಗಳಿಂದ ಇಚಲಕರಂಜಿ ನಗರಕ್ಕೆ ಶಾಶ್ವತ ನೀರು ಪೂರೈಕೆ ಯೋಜನೆ ಜಾರಿಗೆ ತರಲು ಹಲವು ತೊಡಕುಗಳು ಎದುರಾಗಿದ್ದವು. ಈ ಹಿಂದೆ ಕೆಲವು ಯೋಜನೆಗಳ ಮೂಲಕ ನೀರು ಪೂರೈಸಲು ಪ್ರಯತ್ನಿಸಲಾಗಿತ್ತಾದರೂ, ಅವುಗಳನ್ನು ರದ್ದುಗೊಳಿಸಬೇಕಾಯಿತು ಎಂದಿದ್ದರು.

ಪ್ರಸ್ತುತ ಇಚಲಕರಂಜಿ ನಗರಕ್ಕೆ ಕೃಷ್ಣಾ ಮತ್ತು ಪಂಚಗಂಗಾ ಯೋಜನೆಗಳ ಮೂಲಕ ನೀರು ಪೂರೈಸಲಾಗುತ್ತಿದೆಯಾದರೂ, ಪಂಪ್ ಮಾಡುವ ನೀರು ಮತ್ತು ತಲುಪುವ ನೀರಿನ ಪ್ರಮಾಣದಲ್ಲಿ ವ್ಯತ್ಯಾಸವಿರುವುದರಿಂದ ನಿತ್ಯ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ 2054ನೇ ಇಸವಿಯ ಇಚಲಕರಂಜಿ ನಗರದ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ವಿರೋಧವಿಲ್ಲದ ಯೋಜನೆಯನ್ನು ರೂಪಿಸಲು ವರ್ಷದಿಂದ ಪ್ರಯತ್ನ ನಡೆಸಲಾಗಿತ್ತು. ಅದರ ಫಲವಾಗಿ ಕರ್ನಾಟಕದ ಗಡಿಭಾಗದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್‌ಗಿಂತ ಒಂದೂವರೆ ಕಿಲೋಮೀಟರ್ ಮುಂಚಿತವಾಗಿರುವ ಜೂನೆ ದಾನವಾಡ ಗ್ರಾಮದ ಗಡಿಯಲ್ಲಿರುವ ಪುರಾತನ ರಾಧಾಕೃಷ್ಣ ದೇವಾಲಯದ ಆವರಣದ ಸ್ಥಳವನ್ನು ಅಂತಿಮಗೊಳಿಸಲಾಗಿದೆ.

PREV
Read more Articles on
click me!

Recommended Stories

ವಿಕ್ರಮ್‌ 1 ಉಡಾವಣೆ: ಬೀದರ್‌ನ ಎಂಜಿನಿಯರಿಂಗ್‌ ವಿದ್ಯಾರ್ಥಿ ನರಸಿಂಗ್‌ ಶಿಂಧೆ ಸಾಧನೆ
ಮಂಡ್ಯ ಶಾಕಿಂಗ್: ನಾಗಮಂಗಲ ಒಂದರಲ್ಲೇ 2000 ಅಕ್ರಮ ಬಾಂಗ್ಲಾ ವಲಸಿಗರು? ಚುನಾವಣಾ ಆಯೋಗಕ್ಕೆ ದೂರು