
ಗದಗ (ಜು.21): ಸಿಎಂ ಡಿಕೆ. ಶಿವಕುಮಾರ್ ಅವರಿಗೆ ಶ್ರೀ ರಂಭಾಪುರಿ ಪೀಠ ಮತ್ತು ವೀರಗಂಗಾಧರ ಶ್ರೀಗಳ ಮೇಲೆ ಇರುವ ಅಪಾರ ಭಕ್ತಿ-ಗೌರವದ ಹಿಂದಿರುವ ರೋಚಕ ರಹಸ್ಯವೊಂದನ್ನು ರಂಭಾಪುರಿ ಜಗದ್ಗುರು ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಗದಗದಲ್ಲಿ ಬಿಚ್ಚಿಟ್ಟಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ತಾವು ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲೂ ರಂಭಾಪುರಿ ಪೀಠದ ಪೂರ್ವಾಚಾರ್ಯರಾದ ಶ್ರೀ ವೀರಗಂಗಾಧರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದರು. ಒಕ್ಕಲಿಗ ಸಮುದಾಯದ ನಾಯಕರಾಗಿರುವ ಡಿಕೆಶಿಗೆ ವೀರಶೈವ ಲಿಂಗಾಯತ ಪರಂಪರೆಯ ರಂಭಾಪುರಿ ಪೀಠದ ಮೇಲೇಕೆ ಈ ಮಟ್ಟದ ಭಕ್ತಿ ಎಂಬ ಕುತೂಹಲಕ್ಕೆ ರಂಭಾಪುರಿ ಶ್ರೀಗಳು ತೆರೆ ಎಳೆದಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಅತ್ಯಂತ ಚಿಕ್ಕವರಿದ್ದಾಗ, ಅವರ ತಾಯಿ ಯಾವುದೋ ವಿಷಯಕ್ಕೆ ಸಿಟ್ಟು ಮಾಡಿಕೊಂಡು ಅವರಿಗೆ ಹೊಡೆಯಲು ಮುಂದಾಗಿದ್ದರು. ಆ ಸಮಯದಲ್ಲಿ ಆ ಜಾಗದಲ್ಲೇ ಇದ್ದ ರಂಭಾಪುರಿ ಪೀಠದ ಪೂರ್ವಾಚಾರ್ಯರಾದ ಶ್ರೀ ವೀರಗಂಗಾಧರ ಶ್ರೀಗಳು ತಕ್ಷಣವೇ ಮಧ್ಯಪ್ರವೇಶಿಸಿ, "ಆ ಮಗುವಿಗೆ ಹೊಡೆಯಬೇಡಿ" ಎಂದು ತಾಯಿಯನ್ನು ತಡೆದಿದ್ದರು.
ಅಂದು ಮಗುವಾಗಿದ್ದ ಡಿಕೆಶಿಯವರನ್ನು ತಡೆದ ಶ್ರೀಗಳು, ತಾಯಿಗೆ ಅಭಯ ನೀಡುತ್ತಾ, "ಈ ಮಗುವನ್ನು ಹೊಡೆಯಬೇಡಿ, ಈತ ಮುಂದೆ ದೊಡ್ಡ ಸ್ಥಾನವನ್ನು ಅಲಂಕರಿಸುತ್ತಾನೆ. ಈತ ಭಾರಿ ಹಠವಾದಿ ಹಾಗೂ ಚಲವಾದಿ. ತನ್ನ ಜೀವನದಲ್ಲಿ ಅತ್ಯಂತ ಉತ್ತಮ ಶ್ರೇಯಸ್ಸು ಮತ್ತು ಉನ್ನತ ಹಂತವನ್ನು ತಲುಪುತ್ತಾನೆ" ಎಂದು ಭವಿಷ್ಯ ನುಡಿದು ಆಶೀರ್ವಾದ ಮಾಡಿದ್ದರು.
ಶ್ರೀಗಳ ಆ ನುಡಿಗಳು ಡಿಕೆಶಿಯವರ ಜೀವನದಲ್ಲಿ ಸತ್ಯವಾಗಿ ಪರಿಣಮಿಸಿವೆ. ಹೀಗಾಗಿ, ಡಿ.ಕೆ. ಶಿವಕುಮಾರ್ ಅವರು ಶ್ರೀ ವೀರಗಂಗಾಧರ ಶ್ರೀಗಳ ಭಾವಚಿತ್ರವಿಲ್ಲದೆ ಮತ್ತು ಅವರಿಗೆ ಮನಸ್ಸಿನಲ್ಲೇ ನಮಿಸದೇ ಯಾವುದೇ ಪ್ರಮುಖ ಕಾರ್ಯವನ್ನು ಆರಂಭಿಸುವುದಿಲ್ಲ. ಸ್ವತಃ ವೀರಶೈವ ಲಿಂಗಾಯತ ಸಮುದಾಯದ ಪ್ರಮುಖ ನಾಯಕರೇ ಶ್ರೀಗಳ ಭಾವಚಿತ್ರವನ್ನು ಇಟ್ಟುಕೊಂಡಿರುವುದನ್ನು ನಾನು ಕಂಡಿಲ್ಲ, ಆದರೆ ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಿಕೆ ಶಿವಕುಮಾರ್ ಅವರು ರಂಭಾಪುರಿ ಶ್ರೀಗಳಿಗೆ ಈ ಮಟ್ಟದ ಗೌರವ ಸಲ್ಲಿಸುವುದು ನಿಜಕ್ಕೂ ವಿಶೇಷ ಎಂದು ಹಾಲಿ ರಂಭಾಪುರಿ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟ, ಸವಾಲು ಅಥವಾ ತೊಂದರೆಗಳು ಎದುರಾದಾಗ ಡಿಕೆ ಶಿವಕುಮಾರ್ ಅವರು ರಂಭಾಪುರಿ ಶ್ರೀಗಳನ್ನು ನೆನೆದರೆ ಸಾಕು, ಆ ಎಲ್ಲಾ ಸಮಸ್ಯೆಗಳು ಮಂಜಿನಂತೆ ಕರಗಿಹೋಗುತ್ತವೆ. ಇದು ಅವರ ಜೀವನದಲ್ಲಿ ನಡೆದಿರುವ ಅಕ್ಷರಶಃ ಸತ್ಯವಾಗಿದೆ. ಇದೇ ಕಾರಣಕ್ಕಾಗಿ ರಂಭಾಪುರಿ ಪೀಠ ಎಂದರೆ ಅವರಿಗೆ ಅತ್ಯಂತ ಅಚ್ಚುಮೆಚ್ಚು ಹಾಗೂ ಪೂಜ್ಯ ಭಾವನೆ ಎಂದು ರಂಭಾಪುರಿ ಜಗದ್ಗುರುಗಳು ತಿಳಿಸಿದ್ದಾರೆ.