ಮಡಿಕೇರಿ ದಸರಾ: ಡಿಜೆ, ಲೇಸರ್ ಲೈಟ್ ಬಳಸದಂತೆ ಹೈಕೋರ್ಟ್ ವಕೀಲರಿಂದ ನೋಟಿಸ್!

By Govindaraj SFirst Published Oct 16, 2023, 10:03 PM IST
Highlights

ಹಗಲು ಜಂಬೂ ಸವಾರಿ ಮೂಲಕ ಲಕ್ಷಾಂತರ ಜನರನ್ನು ಮೈಸೂರು ದಸರಾ ಸೆಳೆದರೆ ಬೆಳಕಿನ ಚಿತ್ತಾರದಲ್ಲಿ ಕಿವಿಗಡಿಚಿಕ್ಕುವ ಡಿಜೆ ಧ್ವನಿಯ ದಶಮಂಟಪ ಮೆರವಣಿಗೆ ಅಷ್ಟೇ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತದೆ.

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣನ್ಯೂಸ್, ಕೊಡಗು

ಕೊಡಗು (ಅ.16): ಹಗಲು ಜಂಬೂ ಸವಾರಿ ಮೂಲಕ ಲಕ್ಷಾಂತರ ಜನರನ್ನು ಮೈಸೂರು ದಸರಾ ಸೆಳೆದರೆ ಬೆಳಕಿನ ಚಿತ್ತಾರದಲ್ಲಿ ಕಿವಿಗಡಿಚಿಕ್ಕುವ ಡಿಜೆ ಧ್ವನಿಯ ದಶಮಂಟಪ ಮೆರವಣಿಗೆ ಅಷ್ಟೇ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತದೆ. ಆದರೆ ಈ ಬಾರಿಯ ಮಡಿಕೇರಿ ದಸರಾದಲ್ಲಿ ಡಿಜೆ ಮತ್ತು ಲೇಸರ್ ಲೈಟ್ ಬಳಕೆಗೆ ಬ್ರೇಕ್ ಹಾಕುವಂತೆ ರಾಜ್ಯ ಉಚ್ಛನ್ಯಾಯಾಲಯದ ವಕೀಲರೊಬ್ಬರು ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ನೊಟೀಸ್ ಜಾರಿ ಮಾಡಿದ್ದಾರೆ. ಹೀಗಾಗಿ ಮಡಿಕೇರಿ ದಸರಾ ಕಳೆಗುಂದುತ್ತಾ ಇಲ್ಲಾ, ಕೋರ್ಟ್ ಆದೇಶವನ್ನೂ ಉಲ್ಲಂಘಿಸಿ ಡಿಜೆ ಬಳಸಿ ದಶ ಮಂಟಪ ಮೆರವಣಿಗೆ ನಡೆಯುತ್ತಾ ಎನ್ನುವ ಆತಂಕ ಮನೆ ಮಾಡಿದೆ. 

ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳು ಸೇರಿದಂತೆ 10 ದೇವಾಲಯಗಳ ಮಂಟಪಗಳು ಮೆರವಣಿಗೆ ಹೊರಡುತ್ತವೆ. ಪ್ರತೀ ಮಂಟಪವೂ ಒಂದೊಂದು ಪೌರಾಣಿಕ ಕಥೆಯನ್ನು ಆಧರಿಸಿ ಚಲನೆಯುಳ್ಳ ಮಂಟಪಗಳು ಎಲ್ಲರ ಗಮನ ಸೆಳೆಯುತ್ತವೆ. ಪ್ರತಿ ಮಂಟಪಗಳಲ್ಲೂ ಪೌರಾಣಿಕ ಪ್ರತಿಮೆಗಳು ಜೀವ ಪಡೆದು ಘೋರಾತಿಘೋರ ಯುದ್ಧ ಮಾಡುತ್ತವೆ. ಹೀಗೆ ದೇವಲೋಕವೇ ಮಂಜಿನ ನಗರಿಗೆ ಇಳಿದಂತೆ ದಸರಾ ಭಾಸವಾಗುತ್ತದೆ. ಅದಕ್ಕೆಲ್ಲಾ ಬಳಸುವ ಸೌಂಡ್ ಹಾಗೂ ಲೈಟಿಂಗ್ಸ್ ಎಫೆಕ್ಟ್ಸ್ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಈ ರೀತಿಯ ಡಿಜೆ ಸೌಂಡ್ಸ್ ಮತ್ತು ಲೇಸರ್ ಲೈಟಿನಿಂದ ವೃದ್ಧರು, ರೋಗಿಗಳು ಹಾಗೂ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಸಮಸ್ಯೆ ಎದುರಾಗುತ್ತಿದೆ ಎಂದು ಹಲವಾರು ಸಂಘ ಸಂಸ್ಥೆಗಳು ದೂರು ನೀಡಿವೆ ಎನ್ನಲಾಗಿದೆ. 

ಜನಸಮಾಧಿ ಮೇಲೆ ಬ್ರ್ಯಾಂಡ್‌ ಬೆಂಗಳೂರು ಕಟ್ಟಲು ಬಿಡಲ್ಲ: ಎಚ್.ಡಿ.ಕುಮಾರಸ್ವಾಮಿ

ಹೀಗಾಗಿ ಹೈಕೋರ್ಟ್ ವಕೀಲ ಅಮೃತೇಶ್ ಎಂಬುವವರು ಕೊಡಗು ಜಿಲ್ಲಾಧಿಕಾರಿ, ಮಡಿಕೇರಿ ನಗರಸಭೆ ಅಧಿಕಾರಿ, ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರು ಸೇರಿದಂತೆ ಪ್ರಮುಖರಿಗೆ ನೊಟೀಸ್ ಜಾರಿ ಮಾಡಿದ್ದಾರೆ. ಜನವಸತಿ ಪ್ರದೇಶದಲ್ಲಿ ಅತ್ಯಂತ ಕಡಿಮೆ ಡೆಸಿಬಲ್ ಶಬ್ಧವನ್ನು ಬಳಸಬೇಕು ಎನ್ನುವುದು ಉಚ್ಛನ್ಯಾಯಾಲವೇ ಆದೇಶಿಸಿದೆ. ಆದರೆ ಕೈಗಾರಿಕಾ ಪ್ರದೇಶದಲ್ಲಿ ಬಳಸುವ ಶಬ್ಧಕ್ಕಿಂತಲೂ ಹೆಚ್ಚಿನ ಶಬ್ಧವನ್ನು ಜನವಸತಿ ಅದರಲ್ಲೂ ರಾತ್ರಿ ಸಮಯದಲ್ಲಿ ಡಿಜೆ ಬಳಸುತ್ತಿದ್ದಾರೆ. ಜೊತೆಗೆ ಕಣ್ಣಿನ ದೃಷ್ಟಿ ಹಾಳಾಗುವಂತಹ ಲೇಸರ್ ಲೈಟ್ ಬಳಸುತ್ತಿದ್ದಾರೆ. ಅಲ್ಲದೆ ಮಂಟಪಗಳ ಮೆರವಣಿಗೆ ಸಂದರ್ಭ ಅವರು ಬಳಸುತ್ತಿರುವ ಕಿಡಿಹೊತ್ತಿರುವಂತಹ ಟೆಕ್ನಾಲಜಿಗಳು ಯಾವುದೇ ಕ್ಷಣದಲ್ಲಾದರೂ ಅಗ್ನಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಇಂತಹವುಗಳಿಗೆ ಅವಕಾಶ ನೀಡಬಾರದು ಎಂದು ಅಮೃತೇಶ್ ಒತ್ತಾಯಿಸಿದ್ದಾರೆ. 

ಮೋದಿ ಜನಪರ ಯೋಜನೆಗಳು ಭಾರತೀಯರಿಗೆ ಶ್ರೀರಕ್ಷೆ: ಚಕ್ರವರ್ತಿ ಸೂಲಿಬೆಲೆ

ಒಂದು ವೇಳೆ ನಿಯಮ ಮೀರಿ ಈ ಬಾರಿ ದಸರಾದಲ್ಲಿ ತೀವ್ರ ಡಿಜೆ, ಲೇಸರ್ ಲೈಟ್ ಬಳಕೆ ಮಾಡಿದ್ದೇ ಆದಲ್ಲಿ ಅದೆಲ್ಲವನ್ನು ರೆಕಾರ್ಡ್ ಮಾಡಿ ಕೋರ್ಟ್ ಮೆಟ್ಟಿಲೇರಲಾಗುವುದು. ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದರುವ ಮಡಿಕೇರಿ ಶಾಸಕ ಮಂತರ್ ಗೌಡ ಡಿಜೆಯನ್ನು ಬಳಸದೇ ಮೆರವಣಿಗೆ ಮಾಡಲು ಸಾಧ್ಯವಿಲ್ಲ ಎನಿಸುತ್ತದೆ. ಆದರೆ ಕಡಿಮೆ ಶಬ್ಧವನ್ನು ಬಳಸಬೇಕು. ಇನ್ನು ಲೇಸರ್ ಲೈಟನ್ನು ಬಳಸುವುದು ಮಾತ್ರ ಸೂಕ್ತ ಅಲ್ಲವೇ ಅಲ್ಲ. ಅದನ್ನು ಕೈಬಿಟ್ಟರೆ ಒಳ್ಳೆಯದು. ಈ ಕುರಿತು ದಸರಾ ಸಮಿತಿ ಏನು ನಿರ್ಧಾರ ಕೈಗೊಳ್ಳುತ್ತದೆಯೋ ಅದರಂತೆ ದಸರಾ ನಡೆಯಲಿದೆ ಎಂದಿದ್ದಾರೆ. ಒಟ್ಟಿನಲ್ಲಿ ಡಿಜೆ ಬಳಸಿ ಅದ್ಧೂರಿಯಾಗಿ ನಡೆಯುತ್ತಿದ್ದ ಮಡಿಕೇರಿ ದಸರೆ ಮೇಲೆ ಕಾನೂನಿನ ತೂಗುಗತ್ತಿ ನೇತಾಡುತ್ತಿದ್ದು ಮಡಿಕೇರಿ ದಸರಾ ಸಮಿತಿ ಏನು ನಿರ್ಧಾರ ಕೈಗೊಳ್ಳುತ್ತೋ ನೋಡಬೇಕಾಗಿದೆ.

click me!