Koppal: Singatalur Lift Irrigation Project ಜಾರಿಗೆ ಮಧ್ಯಪ್ರದೇಶ ಮಾದರಿ

By Kannadaprabha NewsFirst Published Jan 22, 2022, 12:18 PM IST
Highlights

*  9 ವರ್ಷದ ಬಳಿಕವಾದರೂ ಮಹತ್ವದ ನಿರ್ಧಾರ ತೆಗೆದುಕೊಂಡ ಸರ್ಕಾರ
*  ಯೋಜನೆಯ ಎಡಭಾಗದ ರೈತರ ಕನಸು ಸಾಕಾರ
*  ಬೆಂಗಳೂರಿಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ಮಹತ್ವದ ನಿರ್ಧಾರ
 

ಕೊಪ್ಪಳ(ಜ.22):  ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ(Singatalur Lift Irrigation Project) ಎಡಭಾಗದ ರೈತರಿಗೆ(Farmers) ನೀರೊದಗಿಸುವುದಕ್ಕೆ ಮಧ್ಯಪ್ರದೇಶ(Madhya Pradesh) ಮಾದರಿ ಅನುಸರಿಸಲು ಬೆಂಗಳೂರಿನಲ್ಲಿ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಯೋಜನೆ ಲೋಕಾರ್ಪಣೆಗೊಂಡು 9 ವರ್ಷವಾಗಿದ್ದರೂ ಎಡಭಾಗದ ರೈತರಿಗೆ ನೀರು(Water) ಕೊಡಲು ಆಗಿರಲಿಲ್ಲ. ಹನಿ ನೀರಾವರಿ ಯೋಜನೆಯನ್ನು(Irrigation Project) ಕಾರ್ಯಗತ ಮಾಡುವಲ್ಲಿಯೇ ವಿಫಲವಾಗಿದ್ದರಿಂದ ಈಗ ರೈತರ ಭೂಮಿಗೆ(Land) ನೇರವಾಗಿ ಪೈಪಲೈನ್‌ ಮೂಲಕವೇ ನೀರು ಕೊಡಲು ನಿರ್ಧರಿಸಲಾಗಿದೆ. ಇದರಿಂದ ಗದಗ-ಕೊಪ್ಪಳ(Gadag-Koppal) ಜಿಲ್ಲೆಯ 2.65 ಸಾವಿರ ಎಕರೆ ಭೂಮಿ ನೀರುಣಲಿದೆ.

Singatalur Lift Irrigation Scheme: ಒಂಬತ್ತು ವರ್ಷದಿಂದ 90 ಟಿಎಂಸಿ ನೀರು ಪೋಲು..!

ಎಡ ಭಾಗದ ರೈತರಿಗೆ ನೀರು ಒದಗಿಸಿ ಎಂದು ಒತ್ತಾಯ ಹೆಚ್ಚಾದ ಹಿನ್ನೆಲೆಯಲ್ಲಿ ಸಂಸದ ಸಂಗಣ್ಣ ಕರಡಿ(Sanganna Karadi), ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌(Halappa Achar) ನೇತೃತ್ವದಲ್ಲಿ ಸಿಎಂ ಮೇಲೆ ನಿರಂತರ ಒತ್ತಡ ಹಾಕಿದ್ದರು. ಚುನಾವಣೆಯಲ್ಲಿ ಭರವಸೆ ನೀಡಿದ್ದು ರೈತರು ರೋಸಿ ಹೋಗಿದ್ದಾರೆ. ಕೂಡಲೇ ಯೋಜನೆಯ ಅನುಷ್ಠಾನ ಮಾಡುವಂತೆ ಪಟ್ಟು ಹಿಡಿದಿದ್ದರು. ಪರಿಣಾಮ ಸಿಎಂ ಈ ನಿರ್ಧಾರ ಪ್ರಕಟಿಸಿರುವುದು ಈ ಭಾಗದ ರೈತರ ಸಂತಸ ತಂದಿದೆ.

ಮಧ್ಯಪ್ರದೇಶದ ನೀರಾವರಿ ಮಾದರಿ:

ಮಧ್ಯಪ್ರದೇಶದ ಕೆಲವು ನೀರಾವರಿ ಯೋಜನೆಯಲ್ಲಿ 400ರಿಂದ 500 ಎಕರೆ ಪ್ರದೇಶಕ್ಕೊಂದು ಚೇಂಬರ್‌ ನಿರ್ಮಿಸಿ ಅಲ್ಲಿಂದ ರೈತರ ಜಮೀನುಗಳಿಗೆ ನೀರು ಹರಿಸಲಾಗುತ್ತದೆ. ಅದೇ ಮಾದರಿಯಲ್ಲಿ ಸಿಂಗಟಾಲೂರು ಏತನೀರಾವರಿ ಯೋಜನೆಯಡಿ ಎಡ ಭಾಗದಲ್ಲಿ ಅನುಷ್ಠಾನ ಮಾಡಲು ಸಿಎಂ ಅಸ್ತು ಎಂದಿದ್ದಾರೆ. ಹನಿ ನೀರಾವರಿ ಯೋಜನೆಯನ್ನು ಕೈಬಿಟ್ಟು, ಪೈಪ್‌ಗಳ ಮೂಲಕ ನೇರವಾಗಿ ರೈತರ ಭೂಮಿಗೆ ನೀರು ಒದಗಿಸಲಾಗುತ್ತದೆ. ಅಲ್ಲಿಂದ ರೈತರು ತಮಗೆ ಇಷ್ಟದಂತೆ ನೀರಾವರಿ ಮಾಡಿಕೊಳ್ಳಬಹುದಾಗಿದೆ.

ಮಾರ್ಚ್‌ ಅಂತ್ಯಕ್ಕೆ ಟೆಂಡರ್‌:

ಸಿಂಗಟಾಲೂರು ಏತ ನೀರಾವರಿಯಲ್ಲಿ ಕೊಪ್ಪಳ ಜಿಲ್ಲೆಯು 6ನೇ ಪ್ಯಾಕೇಜ್‌ ಆಗಿದ್ದು, ಇದನ್ನು ಮಾರ್ಚ್‌ ಒಳಗಾಗಿ ಟೆಂಡರ್‌ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಅಲ್ಲದೆ ಈಗಿರುವ ವ್ಯಾಪ್ತಿಯಲ್ಲಿ ಯಾವುದೇ ವ್ಯತ್ಯಾಸ ಇಲ್ಲದಂತೆ ಯೋಜನೆಯನ್ನು ರೂಪಿಸಲು ಸೂಚಿಸಿದ್ದಾರೆ. ಮಧ್ಯಪ್ರದೇಶಕ್ಕೆ ಅಧಿಕಾರಿಗಳ ತಂಡ ಹೋಗಿ, ಯೋಜನೆಯ ಪೂರ್ವಾಪರ ನೋಡಿಕೊಂಡು ಬಂದು, ಇಲ್ಲಿ ಅನುಷ್ಠಾನ ಮಾಡಲು ತೀರ್ಮಾನಿಸಲಾಗಿದೆ.

ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಹಾಲಪ್ಪ ಆಚಾರ್‌, ಸಂಸದ ಸಂಗಣ್ಣ ಕರಡಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು ಮೊದಲಾದವರು ಇದ್ದರು.

Koppal| ಸಿಂಗಟಾಲೂರು ಹನಿ ನೀರಾವರಿ ಕೈಬಿಟ್ಟ ಸರ್ಕಾರ?

ಸಿಂಗಟಾಲೂರು ಏತನೀರಾವರಿ ಯೋಜನೆ ಸಮಸ್ಯೆ ನೀಗಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಸ್ತು ಎಂದಿರುವುದು ಜಿಲ್ಲೆಯ ಜನರಿಗೆ ಸಂತಸ ತಂದಿದೆ. ಹನಿ ನೀರಾವರಿ ಕೈಬಿಟ್ಟು, ಚೇಂಬರ್‌ ಮೂಲಕ ನೀರಾವರಿ ಮಾಡಲು ನಿರ್ಧರಿಸಲಾಗಿದೆ ಅಂತ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ತಿಳಿಸಿದ್ದಾರೆ. 

ಸಿಂಗಟಾಲೂರು ಏತನೀರಾವರಿ ಯೋಜನೆಯಲ್ಲಿ ಕೊಪ್ಪಳ ಭಾಗದಲ್ಲಿ ಮಧ್ಯಪ್ರದೇಶ ಮಾದರಿ ನೀರಾವರಿ ಯೋಜನೆ ಜಾರಿ ಮಾಡಬೇಕು ಎನ್ನುವ ಪ್ರಸ್ತಾಪಕ್ಕೆ ಸಿಎಂ ಅಸ್ತು ಎಂದಿದ್ದು, ಹನಿ ನೀರಾವರಿ ಬದಲಾಗಿ ಪೈಪ್‌ಗಳ ಮೂಲಕ ರೈತರ ಜಮೀನಿಗೆ ನೀರು ಹರಿಸಲು ಸಮ್ಮತಿ ನೀಡಿದ್ದಾರೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸಿದ್ದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುವೆ. ಈ ಯೋಜನೆ ಜಾರಿಗೆ ಸಹಕರಿಸಿದ ಎಲ್ಲ ಜನಪ್ರತಿನಿಧಿಗಳಿಗೂ ಧನ್ಯವಾದ ಅಂತ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.  

ಸಿಂಗಟಾಲೂರು ಏತನೀರಾವರಿ ಯೋಜನೆಯನ್ನು ಮಧ್ಯಪ್ರದೇಶ ಮಾದರಿಯಲ್ಲಿ ಜಾರಿ ಮಾಡಲು ಮುಂದಾಗಿದ್ದಾರೆ. ಅದು ವಿಳಂಬವಾಗದೆ ಬೇಗನೆ ಕಾರ್ಯಾಗತ ಆಗಬೇಕಾಗಿದೆ ಅಂತ ಶಾಸಕ ರಾಘವೇಂದ್ರ ಹಿಟ್ನಾಳ(Raghavendra Hitnal) ತಿಳಿಸಿದ್ದಾರೆ. 
 

click me!