ಲಿಂಗಾಯತ ಕನ್ನಡ ನಾಡಿನ ಪ್ರಥಮ ಧರ್ಮ: ಹಿರಿಯ ನ್ಯಾಯವಾದಿ ವಿರೂಪಾಕ್ಷ

By Kannadaprabha NewsFirst Published Dec 27, 2023, 9:23 PM IST
Highlights

ವೀರಶೈವ ಧರ್ಮವು ಬಸವಣ್ಣನವರ ನಂತರದಲ್ಲಿ ಬಂದ ಒಂದು ಆಚರಣೆಯೇ ಹೊರತು ಅದು ಯಾವುದೇ ಧರ್ಮವಲ್ಲ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ ಎಂದು ಹಿರಿಯ ನ್ಯಾಯವಾದಿ ವಿರೂಪಾಕ್ಷ ತಿಳಿಸಿದರು. 

ಕೊಳ್ಳೇಗಾಲ (ಡಿ.27): ವೀರಶೈವ ಧರ್ಮವು ಬಸವಣ್ಣನವರ ನಂತರದಲ್ಲಿ ಬಂದ ಒಂದು ಆಚರಣೆಯೇ ಹೊರತು ಅದು ಯಾವುದೇ ಧರ್ಮವಲ್ಲ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ ಎಂದು ಹಿರಿಯ ನ್ಯಾಯವಾದಿ ವಿರೂಪಾಕ್ಷ ತಿಳಿಸಿದರು. ಪಟ್ಟಣದ ಬಸವೇಶ್ವರ ಭವನದ ಸಭಾಂಗಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಆಯೋಜಿಸಿದ್ದ ಲಿಂಗಾಯತ ಧರ್ಮ ಜಾಗೃತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಲಿಂಗಾಯತವು ಈ ನೆಲದ, ಕನ್ನಡ ನಾಡಿನ ಪ್ರಥಮ ಧರ್ಮ. ಅದು ಸ್ವತಂತ್ರ ಧರ್ಮವಾಗಿದ್ದು, ಜಗಜ್ಯೋತಿ ಬಸವಣ್ಣನವರು ಸ್ಥಾಪಿಸಿದ ಜಗತ್ತಿನ ಸರ್ವಶ್ರೇಷ್ಠ ಧರ್ಮವೆನಿಸಿದೆ. 

ಇದಕ್ಕೆ ಬಸವಾದಿ ಶರಣರ ವಚನಗಳು ನಮಗೆ ದಾಖಲೆಯಾಗಿದೆ. ವೀರಶೈವ ಪದ ಲಿಂಗಾಯತಕ್ಕೆ ಪರ್ಯಾಯವಲ್ಲ, ಬ್ರಿಟಿಷ್‌ ಸಹಿತ ಹಿಂದಿನ ಸರ್ಕಾರಿ ದಾಖಲೆಗಳಲ್ಲಿ ವೀರಶೈವವು ಲಿಂಗಾಯತ ಧರ್ಮದ ಅಡಿಯಲ್ಲಿ ಬರುವ ನೂರೊಂದು ಜಾತಿಗಳಲ್ಲಿ ಕಂಡು ಬರುತ್ತದೆ. ವೀರಶೈವರು ಪ್ರತಿಪಾದಿಸುವ ಸಿದ್ಧಾಂತ ಶಿಖಾಮಣಿ ಎಂಬ ಗ್ರಂಥವು ೧೪ನೇ ಶತಮಾನದಲ್ಲಿ ಸೃಷ್ಟಿಯಾಯಿತು ಎಂಬುದನ್ನು ಐವತ್ತು ವರ್ಷಗಳ ಹಿಂದೆಯೇ ಮೈಸೂರಿನಲ್ಲಿರುವ ಕುಂದೂರು ಮಠದ ಲಿಂ. ಶಿವಬಸವಸ್ವಾಮಿಗಳು ದಾಖಲೆಗಳ ಸಮೇತ ಪುಸ್ತಕ ರೂಪದಲ್ಲಿ ಸಾಬೀತು ಪಡಿಸಿದ್ದಾರೆ ಎಂದು ಹೇಳಿದರು.

ರಾಮನಗರಕ್ಕೆ ಕಾವೇರಿ ತರುವ ಆಲೋಚನೆ ಡಿಕೆಶಿಯದ್ದು: ಸಂಸದ ಡಿ.ಕೆ.ಸುರೇಶ್

‘ಲಿಂಗಾಯತವು ಸ್ವತಂತ್ರ ಧರ್ಮದ ಸ್ಥಾನಮಾನ ಹೊಂದಲು ಎಲ್ಲಾ ಸಾಧ್ಯತೆಗಳು, ಅರ್ಹತೆಯನ್ನು ಪಡೆದಿರುವುದರಿಂದ ಸ್ವತಂತ್ರ ಧರ್ಮ ಕೇಳುವುದು ಲಿಂಗಾಯತರ ಹಕ್ಕು, ಲಿಂಗಾಯತವು ಸ್ವತಂತ್ರ ಧರ್ಮವಾಗದಿದ್ದರೆ, ಚಾತುರ್ವಣಗಳಲ್ಲಿ ಕಡೆಯದಾದ ಶೂದ್ರರ ಗುಂಪಿಗೆ ಸೇರುತ್ತದೆ. ಆದರೆ, ಸಂವಿಧಾನದ ಪ್ರಕಾರ ಶೂದ್ರರೆನಿಸಿದವರಿಗೆ ಸಿಗುತ್ತಿರುವ ಯಾವುದೇ ಮೀಸಲಾತಿ, ಸರ್ಕಾರಿ ಸೌಲಭ್ಯಗಳು, ಸವಲತ್ತುಗಳು ನಮಗೆ ಸಿಗುತ್ತಿಲ್ಲ. ಲಿಂಗಾಯತವು ಸ್ವತಂತ್ರ ಧರ್ಮವಾದರೆ ಜೈನ, ಬೌದ್ಧ, ಸಿಖ್‌ ಮುಂತಾದ ಧರ್ಮಗಳ ರೀತಿ ಸ್ವತಂತ್ರ ಧರ್ಮ ಮಾನ್ಯತೆ ಪಡೆದರೆ, ಅಲ್ಪಸಂಖ್ಯಾತ ಸ್ಥಾನಮಾನದ ಜತೆಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಅವಕಾಶ ದೊರೆಯಲಿದೆ’ ಎಂದು ಹೇಳಿದರು.

‘ನಮಗೆ ಬಸವಾದಿ ಶರಣರು ರಚಿಸಿರುವ ವಚನಗಳೇ ಸ್ಫೂರ್ತಿ. ಅದನ್ನು ನಾವೆಲ್ಲರೂ ನಿತ್ಯ ಓದಬೇಕು. ವಚನಗಳೇ ನಮ್ಮ ಧರ್ಮ ಗ್ರಂಥ. ಪ್ರಪಂಚಕ್ಕೆ ಪ್ರಜಾಪ್ರಭುತ್ವದ ಬಗ್ಗೆ ತಿಳಿಸಿ, ಸಂಸತ್ತಿನ ಮಾದರಿಯನ್ನು ಹಾಕಿಕೊಟ್ಟ ಕನ್ನಡ ನೆಲದ ಮೊದಲ ಧರ್ಮ ನಮ್ಮದು. ಅದು ನಮ್ಮ ಅಸ್ಮಿತೆ ಕೂಡ. ವಚನಗಳಲ್ಲಿ ಲಿಂಗಾಯತ, ಲಿಂಗವಂತ ಪದ ಬಳಕೆಯನ್ನು ಎಲ್ಲಾ ಶರಣರು ಬಳಸಿರುವುದನ್ನು ನಾವು ಕಾಣಬಹುದು. ಲಿಂಗಾಯತ ಧರ್ಮದ ಬಗ್ಗೆ ಅನೇಕ ಗ್ರಂಥಗಳಿವೆ. ಲಿಂಗಾಯತರು ಮುಂಬರುವ ಜನಗಣತಿಯಲ್ಲಿ ಧರ್ಮ ಮತ್ತು ಜಾತಿಯ ಕಾಲಂನಲ್ಲಿ ಲಿಂಗಾಯತ ಎಂದು ಮಾತ್ರ ಬರೆಸಿ, ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ಕೈಜೋಡಿಸಿ ನಮ್ಮ ಮುಂದಿನ ಪೀಳಿಗೆಯವರಿಗೆ ಅವಕಾಶಗಳು ದೊರೆಯುವಂತೆ ಮಾಡಬೇಕಿದೆ’ ಎಂದರು.

ಮುಡಿಗುಂಡ ವಿರಕ್ತ ಮಠದ ಶ್ರೀಕಂಠಸ್ವಾಮೀಜಿ ಮಾತನಾಡಿ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದವರು, ಸ್ವತಂತ್ರ ಧರ್ಮ ಮಾನ್ಯತೆಗಾಗಿ, ‘ವೀರಶೈವ-ಲಿಂಗಾಯತ ಧರ್ಮ’ ಎಂದು ಎರಡೆರಡು ಬಾರಿ ಮನವಿ ಸಲ್ಲಿಸಿದರು ಅದು ಸಾಧ್ಯವಾಗಲಿಲ್ಲ. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಎಂದು ಮಾನ್ಯತೆ ಪಡೆಯಲು ನಾವು ಅಗತ್ಯ ದಾಖಲೆಗಳನ್ನು ಕೇಂದ್ರಕ್ಕೆ ಸಲ್ಲಿಸುತ್ತೇವೆ, ಅದರಲ್ಲಿ ಜಯಶೀಲರಾಗುತ್ತೇವೆ. ನೀವು ನಮಗೆ ಅವಕಾಶ ಕೊಡಿ ಎಂದು ಹೇಳಿದರು. ಜಾ.ಲಿಂ.ಮ ಜಿಲ್ಲಾ ಕಾರ್ಯದರ್ಶಿ ಶಿವಪ್ರಕಾಶ ಪ್ರಾಸ್ತಾವಿಕ ಭಾಷಣ ಮಾಡಿದರು.

ಜಿಲ್ಲಾಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ, ಲಿಂಗಾಯತ ಸ್ವತಂತ್ರ ಧರ್ಮದ ಅಗತ್ಯ ಹಾಗೂ ವಚನಗಳ ಮಹತ್ವವನ್ನು ತಿಳಿಸಿಕೊಟ್ಟರು. ಕುಂತೂರು, ಚಿಲಕವಾಡಿ, ಚಿಕ್ಕಿಂದವಾಡಿ, ಕಾಮಗೆರೆ ಮಠದ ಶ್ರೀಗಳು, ತಾಲೂಕು ಅಧ್ಯಕ್ಷ ಲೋಕೇಶ, ಕೋಡಿಮೋಳೆ ರಾಜಶೇಖರ್, ಮುಡಿಗುಂಡ ಸುಂದ್ರಪ್ಪ, ಲಕ್ಕರನಪಾಳ್ಯ ಪರಶಿವಪ್ಪ, ಮಠದ ಬೀದಿ ಬಸವರಾಜು, ಷಣ್ಮುಖಸ್ವಾಮಿ, ಶಶಿಕುಮಾರ, ಗುರುಸ್ವಾಮಿ, ತಾಲೂಕಿನ ವಿವಿಧ ಗ್ರಾಮಗಳ ಮುಖಂಡರು, ಸಮುದಾಯದ ಯುವ ನಾಯಕರು ಇದ್ದರು.

ಆಸ್ತಿಗಳ ಡಿಜೀಟಲೀಕರಣ ಯೋಜನೆ ಕನಕಪುರಕ್ಕೆ ವಿಸ್ತರಣೆ: ಡಿ.ಕೆ.ಶಿವಕುಮಾರ್

ಲಿಂಗಾಯತ ಹಿಂದೂ ಧರ್ಮದ ಭಾಗವಲ್ಲ: ಲಿಂಗಾಯತ ಧರ್ಮ ಬಸವಣ್ಣನವರಿಂದ ಸ್ಥಾಪಿತವಾದ ಪ್ರತ್ಯೇಕ ಧರ್ಮ. ಇದು ಹಿಂದೂ ಧರ್ಮದ ಭಾಗವಲ್ಲ. ವೀರಶೈವರು ಎಂದು ಹೇಳಿಕೊಳ್ಳುವವರು, ಲಿಂಗಾಯತ ಹಿಂದೂ ಧರ್ಮದ ಭಾಗ ಎಂದು ಪ್ರತಿಪಾದಿಸುವುದು ಸರಿಯಲ್ಲ. ಲಿಂಗಾಯತ ಧರ್ಮದ ಒಂದು ಒಳಪಂಗಡವನ್ನು ವೀರಶೈವ ಎಂದು ಕರೆಯಲಾಗಿದೆ. ವೀರಶೈವ ಲಿಂಗಾಯತ ಪದ ಬಳಕೆಯೇ ಸರಿಯಲ್ಲ. ಲಿಂಗಾಯತ ಧರ್ಮ ಎನ್ನುವುದೇ ಸರಿ ಎಂದು ಹಿರಿಯ ನ್ಯಾಯವಾದಿ ವಿರೂಪಾಕ್ಷ ಪ್ರತಿಪಾದಿಸಿದರು.

click me!