ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಕೇಂದ್ರಕ್ಕೆ ಉತ್ತರಿಸಲಿ : ಡಾ ಜಾಮದಾರ ಆಗ್ರಹ

By Kannadaprabha NewsFirst Published Jun 12, 2023, 8:55 PM IST
Highlights

ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಮತ್ತೆ ಮುನ್ನೆಲೆಗೆ ಬಂದಿದೆ. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ವಿಚಾರ ಕುರಿತು ಕೇಂದ್ರ ಸರ್ಕಾರಕ್ಕೆ ಮರು ಉತ್ತರ ನೀಡಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಣಯ ಮಾಡಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಡಾ.ಶಿವಾನಂದ ಜಾಮದಾರ ಹೇಳಿದರು.

ಬೆಳಗಾವಿ (ಜೂ.12) ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಮತ್ತೆ ಮುನ್ನೆಲೆಗೆ ಬಂದಿದೆ. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ವಿಚಾರ ಕುರಿತು ಕೇಂದ್ರ ಸರ್ಕಾರಕ್ಕೆ ಮರು ಉತ್ತರ ನೀಡಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಣಯ ಮಾಡಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಡಾ.ಶಿವಾನಂದ ಜಾಮದಾರ(Dr Shivananda jamadar) ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಲಿಂಗಾಯತರು ಅಲ್ಪಸಂಖ್ಯಾತ ಸಮುದಾಯ ಎಂದು ಪರಿಗಣಿಸಿದ ರಾಜ್ಯ ಸರ್ಕಾರ 2018 ಮಾ.22 ರಂದು ಅಧಿಸೂಚನೆ ಹೊರಡಿಸಿದೆ. ಜತೆಗೆ ಭಾರತ ಸರ್ಕಾರಕ್ಕೆ ಇದನ್ನು ರಾಜ್ಯ ಸರ್ಕಾರ ಕಳಿಸಿತ್ತು. ರಾಜಕೀಯ ಕಾರಣಗಳಿಂದ 8 ತಿಂಗಳು ಅದನ್ನ ಹಾಗೇ ಇಟ್ಟುಕೊಂಡು ಕಾಲಹರಣ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು. 2018 ನವೆಂಬರ 3ರಂದು ಭಾರತ ಸರ್ಕಾರದವರು ಉತ್ತರ ಕೊಟ್ಟಿದ್ದಾರೆ. ಮೂರು ಕಾರಣಗಳಿಂದ ಮಾನ್ಯತೆ ಮಾಡಲು ಕಷ್ಟವಾಗುತ್ತಿದೆ ಎಂದಿದ್ದಾರೆ. ಲಿಂಗಾಯತರಲ್ಲಿ ಪರಿಶಿಷ್ಟಜಾತಿಗೆ ಸೇರಿದವರಿದ್ದಾರೆ ಎಂದಿದ್ದಾರೆ. ಹೌದು ಲಿಂಗಾಯತರಲ್ಲಿ ಸಮಗಾರ, ಮಾದರರು ಎಂಬ ಹಲವರು ಇದ್ದಾರೆ. ಸ್ವತಂತ್ರ ಮಾನ್ಯತೆ ಕೊಟ್ಟಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯದ ಜನರಿಗೆ ಸವಲತ್ತು ಸಿಗಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದು ಸಂಪೂರ್ಣ ಸುಳ್ಳು ಹೇಳಿಕೆ ಸತ್ಯಕ್ಕೆ ದೂರವಾದ ಹೇಳಿಕೆ. ಸಿಖ್‌ಧರ್ಮದಲ್ಲಿ ದಲಿತರು ಇದ್ದಾರೆ.

Latest Videos

ಲಿಂಗಾಯತ ಹೋರಾಟ ಯಾವ ಕಾಲಕ್ಕೂ ನಿಲ್ಲುವುದಿಲ್ಲ: ಶಿವಾನಂದ ಜಾಮದಾರ

1964ರಲ್ಲಿ ಸಿಖ್‌ ಧರ್ಮದ ದಲಿತರಿಗೆ ಇರುವ ಸವಲತ್ತು ಮುಂದುವರಿಸುವ ಬಗ್ಗೆ ರಾಷ್ಟಾ್ರಧ್ಯಕ್ಷರು ಆದೇಶ ಹೊರಡಿಸಿದ್ದರು. ಬೌದ್ಧ ಧರ್ಮದಲ್ಲಿ ಇರುವ ಎಲ್ಲ ದಲಿತರಿಗೂ ಎಸ್‌ಸಿ- ಎಸ್‌ಟಿ ಸವಲತ್ತು ಮುಂದುವರಿಸುವ ಆದೇಶ ಹೊರಡಿಸಿದ್ದಾರೆ. ಅದೇ ರೀತಿಯ ನೋಟಿಫಿಕೇಶನ್‌ ಹೊರಡಿಸಲು ಇರುವ ತೊಂದರೆಯಾದರೂ ಏನು ಎಂದು ಪ್ರಶ್ನಿಸಿದರು. 1871ರ ಜನಗಣತಿಯಿಂದ ಈವರೆಗೂ ಲಿಂಗಾಯತರನ್ನು ಹಿಂದೂ ಧರ್ಮದ ಪಂಥ ಎಂದು ಪರಿಗಣಿಸಲಾಗಿದೆ ಎಂದಿದ್ದಾರೆ. ಇದು ಕೂಡ ಸುಳ್ಳು, ನಮ್ಮ ಹತ್ತಿರ ದಾಖಲೆ ಇದೆ.ಲಿಂಗಾಯತ ಧರ್ಮ ಅದು ಜಾತಿ ಅಲ್ಲ ಎಂದು ಹೇಳಿದ ದಾಖಲೆ ಇದೆ. ಲಿಂಗಾಯತ ಹಿಂದೂ ಧರ್ಮದ ಭಾಗ ಅಲ್ಲ ಎಂದು ಹೇಳಿದ ದಾಖಲೆ ಇದೆ. ಬೇಕಿದ್ದರೆ ಆ ಪ್ರತಿ ನಾವು ಅವರಿಗೆ ಕೊಡುತ್ತೇವೆ ಎಂದರು.

1991ರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ವಿಚಾರ ಆರಂಭವಾಯ್ತು. 2001, 2011, 2013ರಲ್ಲಿ ಈ ವಿಚಾರ ಮುಂದುವರಿಯಿತು. ನ್ಯಾ.ನಾಗಮೋಹನದಾಸ್‌ ಸಮಿತಿ ಸಮಗ್ರವಾಗಿ ಮಾಹಿತಿ ಕೊಟ್ಟಿದ್ದಾರೆ. ಕರ್ನಾಟಕ ಸರ್ಕಾರ ಈಗ ಏನೂ ಮಾಡಬೇಕಿಲ್ಲ. ಕೇಂದ್ರ ಸರ್ಕಾರ ನೀಡಿದ ಮೂರು ಅಂಶಗಳಿಗೆ ರಾಜ್ಯ ಸರ್ಕಾರ ಮರು ಉತ್ತರ ಕಳಿಸಲಿ ಎಂದು ಆಗ್ರಹಿಸಿದರು. ಸರ್ಕಾರ ಈಗ ಆರಿಸಿ ಬಂದಿದೆ, ತಕ್ಷಣ ಅವರಿಗೆ ಮನವಿ ಕೊಡುತ್ತಿಲ್ಲ. ಅವರು ತಮ್ಮ ಎಲ್ಲ ಸಮಸ್ಯೆ ಪರಿಹಾರ ಮಾಡಿಕೊಂಡು ಶಾಂತ ಮಟ್ಟಕ್ಕೆ ಬರಲಿ. ಎಲ್ಲಾ ಲಿಂಗಾಯತ ಮಠಾಧೀಶರು, ಸಂಘಟನೆಗಳು ಒಳಗೊಂಡು ಮನವಿ ಕೊಡುತ್ತೇವೆ ಎಂದರು. ಭಾರತ ಸರ್ಕಾರಕ್ಕೆ ಈಗಾಗಲೇ ಕರ್ನಾಟಕ ಸರ್ಕಾರ ವರದಿಯನ್ನು ಒಪ್ಪಿಸಿದೆ. ಭಾರತ ಸರ್ಕಾರದಿಂದಲೂ ಉತ್ತರ ಬಂದಿದೆ ಈಗ ಅದಕ್ಕೆ ಕರ್ನಾಟಕ ಸರ್ಕಾರ ಮರು ಉತ್ತರ ಕೊಡಬೇಕಿದೆ. ಕುಮಾರಸ್ವಾಮಿ ಲಿಂಗಾಯತ ಸ್ವತಂತ್ರ ಧರ್ಮದ ವಿಚಾರದ ಫೈಲ… ಮುಟ್ಟಲ್ಲ ಎಂದಿದ್ದರು. ಯಡಿಯೂರಪ್ಪ ಸಹ ಲಿಂಗಾಯತ ವಿರೋಧಿಗಳಂತೆ ನಡೆದುಕೊಂಡರು. ಯಡಿಯೂರಪ್ಪ ವಿಭೂತಿಧಾರಿ ಅಲ್ಲ ನಾಮಧಾರಿ ಎಂದು ಕೈ ಸನ್ನೆ ಮಾಡಿ ಪರೋಕ್ಷವಾಗಿ ಡಾ. ಜಾಮದಾರ ಹೇಳಿದರು.

 

ಲಿಂಗಾಯತರಿಗೆ ಪ್ರಾಶಸ್ತ್ಯ ನೀಡದಿದ್ದರೆ ಕಾಂಗ್ರೆಸ್‌ಗೆ ತಕ್ಕ ಪಾಠ: ಡಾ.ಜಾಮದಾರ ಎಚ್ಚರಿಕೆ

ಸಿದ್ದರಾಮಯ್ಯ(Siddaramaiah) ಸರ್ಕಾರಕ್ಕೆ ಮರು ಉತ್ತರಕ್ಕೆ ಮನವಿ ಮಾಡುತ್ತಿರಾ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಹೆಸರು ಹೇಳುವುದಿಲ್ಲ ಕರ್ನಾಟಕ ಸರ್ಕಾರ ಎಂದು ಹೇಳುವೆ. ಹೆಚ್‌.ಡಿ.ಕುಮಾರಸ್ವಾಮಿ ಆಗ ಹೇಳಿದ್ದು ಬೇಜವಾಬ್ದಾರಿ ಹೇಳಿಕೆ. ಪಕ್ಷಗಳು ಬರುತ್ತವೇ. ಪಕ್ಷಗಳು ಹೋಗುತ್ತವೆ ಸರ್ಕಾರಗಳು ಶಾಶ್ವತವಾಗಿರುತ್ತವೆ. ಕೇಂದ್ರ ಸರ್ಕಾರ ನೀಡಿದ ಉತ್ತರಕ್ಕೆ ಕರ್ನಾಟಕ ಸರ್ಕಾರ ಮರು ಉತ್ತರ ಕೊಡಬೇಕು. ನ್ಯಾ. ನಾಗಮೋಹನದಾಸ ವರದಿ ಈಗಾಗಲೇ ಕೊಡಲಾಗಿದೆ ಅದು ಮೈನಾರಿಟಿ ಕಮಿಷನ್‌ ವರದಿಯೇ ಅಂತಿ ಎಂದು ಪ್ರತಿಪಾದಿಸಿದರು.

click me!