ರೈತರು ಉಳಿಯಲು ಇಸ್ರೇಲ್‌ ಮಾದರಿ ಕಾನೂನು ಜಾರಿಯಾಗಲಿ: ಸಭಾಪತಿ ಹೊರಟ್ಟಿ

By Kannadaprabha NewsFirst Published Feb 1, 2023, 8:44 AM IST
Highlights

ಇಸ್ರೇಲ್‌ ಮಾದರಿಯಲ್ಲಿ ರೈತರ ಭೂಮಿ ಖರೀದಿಸಲು ನಮ್ಮ ದೇಶದಲ್ಲಿಯೂ ಕಾನೂನು ರೂಪಿಸಲು ನಮ್ಮ ಸರ್ಕಾರಗಳು ಮುಂದಾದಾಗ ಮಾತ್ರ ರೈತರು ಉಳಿಯಬಲ್ಲರು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿಹೇಳಿದರು.

ಕೊಟ್ಟೂರು (ಫೆ.1) : ಇಸ್ರೇಲ್‌ ಮಾದರಿಯಲ್ಲಿ ರೈತರ ಭೂಮಿ ಖರೀದಿಸಲು ನಮ್ಮ ದೇಶದಲ್ಲಿಯೂ ಕಾನೂನು ರೂಪಿಸಲು ನಮ್ಮ ಸರ್ಕಾರಗಳು ಮುಂದಾದಾಗ ಮಾತ್ರ ರೈತರು ಉಳಿಯಬಲ್ಲರು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿಹೇಳಿದರು.

ಪಟ್ಟಣದ ಉಜ್ಜಯಿನಿ ರಸ್ತೆಯಲ್ಲಿನ ತರಳಬಾಳು ಹುಣ್ಣಿಮೆ ಅಮೃತ ಮಹೋತ್ಸವದ 4ನೇ ದಿನದ ಕಾರ್ಯಕ್ರಮದಲ್ಲಿ ಕೃಷಿಕರ ಚಿಂತನ ಗೋಷ್ಠಿ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ರಾಜ್ಯದಲ್ಲಿ ಹೊಸ ರೀತಿಯ ಕೃಷಿ ಪದ್ಧತಿ ಜಾರಿ

ಈವರೆಗೆ ಸರ್ಕಾರ ಉಳುವವನೇ ಒಡೆಯ ಎಂಬ ಉತ್ತಮ ಕಾನೂನು ರಚಿಸಿದ್ದು ಬಿಟ್ಟರೆ, ಬೇರೆ ಯಾವುದೇ ರೈತರ ಪರವಾದ ಕಾನೂನು ಗಟ್ಟಿಯಾಗಿ ರೂಪುಗೊಳಿಸದಿರುವುದು ದುರದೃಷ್ಟಕರ. ಸರ್ಕಾರ ಯೋಜನೆಯಡಿ ಜನತೆಗೆ ಪುಕ್ಕಟೆ ಕೊಡುಗೆ ನೀಡುವ ಮೂಲಕ ಅದನ್ನು ದಂಧೆಯಾಗಿಸುವತ್ತ ಮುಂದಾಗಿರುವುದು ಸರಿಯಲ್ಲ. ಇದರಿಂದ ಪ್ರತಿಯೊಬ್ಬರಲ್ಲಿ ಸ್ವಾವಲಂಬಿತನ, ಅದರಲ್ಲೂ ಬಡ ರೈತರಲ್ಲಿ ರೂಪುಗೊಳ್ಳಲು ಸಾಧ್ಯವಾಗಿಲ್ಲ. ದೇಶದಲ್ಲಿ 1967ರಿಂದ ಇಲ್ಲಿಯವರೆಗೆ ಶೇ.32ರಷ್ಟುರೈತ ಭೂಮಿಯನ್ನು ವಿವಿಧ ಕಾರಣಕ್ಕಾಗಿ ವಶಪಡಿಸಿಕೊಳ್ಳಲಾಗಿದೆ. ಇದು ರೈತರನ್ನು ಆತಂಕಕ್ಕೆ ಇಡು ಮಾಡುತ್ತಿರುವುದು ಮತ್ತಷ್ಟುರೈತ ಭೂಮಿ ಕಬಳಿಸಲು ಮುಂದಾಗುವ ನೀತಿಗೆ ರೂಪುಗೊಳ್ಳುತ್ತಿರುವುದನ್ನು ರೈತರನ್ನು ಕಂಗೆಡಿಸಿದೆ. ರೈತ ಜಮೀನು ಕೊಡದಂತೆ ಸೂಕ್ತ ಕಾನೂನು ರೂಪಿಸಿದಾಗ ಮಾತ್ರ ರೈತರು ಉಳಿಯಬಲ್ಲರು ಎಂದರು.

ಆಶೀರ್ವಚನ ನೀಡಿದ ಹುಬ್ಬಳ್ಳಿಯ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು ಮಾತನಾಡಿ, ತರಳಬಾಳು ಹುಣ್ಣಿಮೆ ಮೌಲಿಕ ಸಮಾರಂಭವಾಗಿದ್ದು, ಇಂತಹ ಸಮಾರಂಭಗಳು ನಾಡಿನ ವಿವಿಧೆಡೆ ನಡೆಯುವಂತಾಗಬೇಕು ಎಂದರು.

ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ವಿಧಾನಮಂಡಲ ಅಧಿವೇಶನ ನಡೆಯುವ ರೀತಿಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಪ್ರತಿ ವರ್ಷ ನಡೆಯುವ ಮೂಲಕ ರಾಜ್ಯದ ಅಭಿವೃದ್ಧಿ ಪೂರಕ ಯೋಜನೆಗಳು ರೂಪುಗೊಂಡು ಜಾರಿಗೊಳ್ಳುತ್ತಿವೆ ಎಂದು ಹೇಳಿದರು.

ಸಾಧು ವೀರಶೈವ ಲಿಂಗಾಯತ ಸಮಾಜದ ರಾಜ್ಯಾಧ್ಯಕ್ಷ ಎಚ್‌.ಆರ್‌.ಬಸವರಾಜ ಪ್ರಾಸ್ತಾವಿಕ ಮಾತನಾಡಿ, ಎಂದಿಗೂ ಕೊಟ್ಟು ಬೇಡದೇ ಇರುವ ರೈತನ ಸ್ಥಿತಿ ಇಂದು ದಯನೀಯವಾಗಿದೆ. ದೇಶದಲ್ಲಿ ಕೈಗಾರಿಕೋದ್ಯಮಿಗಳಿಗೆ ಇರುವ ಸುಲಭವಾದ, ವಿನಾಯಿತಿ ಕಾನೂನುಗಳು ರೈತರ ಕೃಷಿ ಕಾರ್ಯಗಳಿಗೆ ಇಲ್ಲದಿರುವುದು ರೈತರ ದುಸ್ಥಿತಿಗೆ ಕಾರಣವಾಗಿದೆ. ಜಗತ್ತಿಗೇ ಅನ್ನ ನೀಡುತ್ತಿದ್ದ ರೈತ ಇಂದಿನ ನಿಯಮಗಳಿಂದಾಗಿ ತಾನೇ ಪಡಿತರಕ್ಕಾಗಿ ಅಂಗಡಿ ಮುಂದೆ ಸಾಲಿನಲ್ಲಿ ನಿಲ್ಲುವ ಅನಿವಾರ್ಯತೆ ಎದುರಾಗಿದೆ ಎಂದರು.

ಬೆಂಗಳೂರಿನ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ನಿರ್ದೇಶಕ ಡಾ.ಡಿ.ಕೆ.ಪ್ರಭುರಾಜ್‌ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಕುರಿತು ಮಾತನಾಡಿ, ರೈತರ ಬೆಳೆಗಳಿಗೆ ದರ ನಿಗದಿಗೊಳಿಸುವುದು ಇಂದು ಪ್ರಾಯಾಸದಾಯಕವಾಗಿದೆ. ನೈಸರ್ಗಿಕ ಬೆಳೆಗಳತ್ತ ಮುಖಮಾಡುವುದರ ಜತೆಗೆ ಇಂತಹ ಬೆಳೆಗಳಿಗೆ ಸೂಕ್ತ ರಕ್ಷಣೆ ಕೊಡಲು ಮುಂದಾಗುವ ಮೂಲಕ ರೈತ ಸಂಕುಲ ನಿರಂತರ ಸುಖಿ ಬದುಕು ಸಾಗಿಸುವಂತಾಗಬೇಕು ಎಂದರು.

ದಾವಣಗೆರೆಯ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಎಂಜಿ ಬಸವನಗೌಡ ಸಮಗ್ರ ಕೃಷಿ ಪದ್ಧತಿ ಅವಕಾಶಗಳು ಮತ್ತು ಸವಾಲುಗಳು ಕುರಿತು ಮಾತನಾಡಿ, ವಾಣಿಜ್ಯ ಬೆಳೆಗಳಿಗೆ ಮೋಹಗೊಂಡು ಆಹಾರ ಬೆಳೆಗಳನ್ನು ಬೆಳೆಯುವ ಬೆಳೆಯಲು ಹಿಂದೇಟು ಹಾಕುತ್ತಿರುವ ಮನೋಭಾವ ರೈತರಲ್ಲಿ ಬರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಕೃಷಿ ವಿವಿ ಆರ್‌.ಸಿ. ಜಗದೀಶ್‌, ಶಾಸಕ ಜಿ.ಕರುಣಾಕರ ರೆಡ್ಡಿ, ಮಾಜಿ ಶಾಸಕ ಯು.ಬಿ.ಬಣಕಾರ, ಚಿತ್ರನಟ ಸುಚೇಂದ್ರ ಪ್ರಸಾದ್‌, ಡಿಡಿಪಿಐ ಜಿ.ಕೊಟ್ರೇಶ, ದಾವಣಗೇರೆ ಹರಿಹರ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಬಸವನಗೌಡ ಕೋಟೂರು ಮಾತನಾಡಿದರು.

ಧಾರವಾಡ ಕೃಷಿ ಮೇಳ: ಬರಗಾಲ ಎದುರಿಸಲು ಇಸ್ರೇಲ್‌ ಕೃಷಿ ಮಾದರಿ ಯೋಗ್ಯ!

ಸಾನ್ನಿಧ್ಯ ವಹಿಸಿ ಮಾತನಾಡಿದ ಜಗದ್ಗುರು ಶ್ರೀಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು, ರೈತ ತನ್ನ ಜಮೀನಿನ ಕಾಯಂ ಒಡೆಯನಾಗಿರಬೇಕೆ ಹೊರತು ಕಂಪನಿಗಳ ಆಳು ಆಗಬಾರದು. ರೈತರನ್ನು ಕಂಪನಿ ಪಾಲುದಾರರನ್ನಾಗಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಹಾಗೆಯೇ ಲಾಭಾಂಶವೂ ಆತನಿಗೆ ಅವಶ್ಯವಿಲ್ಲ. ಕೃಷಿ ಭೂಮಿ ಮಾತ್ರ ಆತನ ಹೆಸರಿನಲ್ಲಿ ಇದ್ದರೆ ಅದೇ ಎಲ್ಲ ತೊಂದರೆಗಳನ್ನು ನಿವಾರಿಸಬಲ್ಲವು. ರೈತನ ಜಮೀನಿಗೆ ಆತನಿಗೆ ನಿರಂತರ ಒಡೆಯನಾಗಿರಬೇಕು ಎಂದರು. ಶಾಂತನಗೌಡ ಸ್ವಾಗತಿಸಿದರು. ವಿಕ್ರಮ್‌ ನಂದಿ ವಂದಿಸಿದರು. ಎಂ.ಎಲ್‌. ಸುದರ್ಶನ್‌ ನಿರ್ವಹಿಸಿದರು.

click me!